ಈಚೆಗೆ ಪ್ರಕಟವಾದ ದ್ವಿತೀಯ ಪಿಯು ಪರೀಕ್ಷೆ ಫಲಿತಾಂಶದಲ್ಲಿ ಹೆಚ್ಚಿನ ವಿದ್ಯಾರ್ಥಿಗಳು ಇಂಗ್ಲಿಷ್ ಭಾಷಾ ಪತ್ರಿಕೆಯಲ್ಲಿ ಅನುತ್ತೀರ್ಣ ಆಗಿರುವುದರಿಂದ, ಒಟ್ಟು ಉತ್ತೀರ್ಣತೆಯ ಪ್ರಮಾಣ ಕಡಿಮೆಯಾಗಿದೆ ಎಂದು ಹೇಳಲಾಗುತ್ತಿದೆ. ಈ ವಿಷಯದಲ್ಲಿ ಕಲಾ ವಿಭಾಗದ ಶೇ 59ರಷ್ಟು ಮಂದಿ ಅನುತ್ತೀರ್ಣರಾಗಿದ್ದು, ಇವರಲ್ಲಿ ಹೆಚ್ಚಿನವರು ಗ್ರಾಮೀಣ ವಿದ್ಯಾರ್ಥಿಗಳು. ಇದಕ್ಕಿರುವ ನಾನಾ ಕಾರಣಗಳಲ್ಲಿ ಮುಖ್ಯವಾದುದು ಕೊರೊನಾ ಸೋಂಕು. ಈ ವಿಷಯದ ಪರೀಕ್ಷೆ ನಡೆಯುವುದೋ ಇಲ್ಲವೋ ಎಂಬ ಆತಂಕದಲ್ಲಿ ವಿದ್ಯಾರ್ಥಿಗಳು ಮೂರು ತಿಂಗಳು ಕಳೆದು ಕೊನೆಗೆ ಮಾರ್ಚ್ 23ರಂದು ಬರೆಯಬೇಕಾಗಿದ್ದ ಪರೀಕ್ಷೆಯನ್ನು ಜೂನ್ 18ರಂದು ಬರೆಯುವ ಹೊತ್ತಿಗೆ, ಅವರಿಗೆ ವಿಷಯದ ಸಂಪರ್ಕವೇ ತಪ್ಪಿಹೋಗಿತ್ತು.
ಜೊತೆಗೆ, ಗ್ರಾಮೀಣ ವಿದ್ಯಾರ್ಥಿಗಳಿಗೆ ನೀರಿಳಿಯದ ಗಂಟಲಲ್ಲಿ ಕಡುಬು ತುರುಕಿದಂತೆ ಪ್ರಶ್ನೆಪತ್ರಿಕೆಯು ಕ್ಲಿಷ್ಟಕರವಾಗಿ, ಮಾದರಿ ಪತ್ರಿಕೆಗಿಂತ ಭಿನ್ನವಾಗಿದ್ದು, ಗದ್ಯ-ಪದ್ಯ ವಿಭಾಗಗಳನ್ನು ಸಮಾನವಾಗಿ ಪರಿಗಣಿಸಿರಲಿಲ್ಲ. ಈ ರೀತಿಯ ಪ್ರಶ್ನೆಪತ್ರಿಕೆಗಳು ವಿಷಯದ ಮೇಲಿನ ವಿದ್ಯಾರ್ಥಿಗಳ ಪ್ರೀತಿಯನ್ನು ಕುಂದಿಸುತ್ತವೆ. ಜೊತೆಗೆ ಉತ್ತರ ಪತ್ರಿಕೆಗಳ ಮೌಲ್ಯಮಾಪನದಲ್ಲಿ, ಎಲ್ಲಾ ಕೇಂದ್ರಗಳಲ್ಲಿ ಪರಿಣತ ಪರೀಕ್ಷಕರಿರಲಿಲ್ಲ ಎನ್ನಲಾಗಿದೆ. ಈ ಕಾರಣಗಳಿಂದ, ಎಲ್ಲಾ ವಿಷಯಗಳಲ್ಲಿ ಉತ್ತೀರ್ಣರಾಗಿ ಇಂಗ್ಲಿಷ್ ಪತ್ರಿಕೆಯಲ್ಲಿ ಮಾತ್ರ ಅನುತ್ತೀರ್ಣರಾಗಿರುವ ವಿದ್ಯಾರ್ಥಿಗಳನ್ನು ತೇರ್ಗಡೆಗೊಳಿಸುವ ಕುರಿತು ಚಿಂತನೆ ನಡೆಸುವುದು ಉಚಿತ.
- ಪ್ರೊ. ಎಸ್.ಬಿ.ರಂಗನಾಥ್,ಸಿದ್ಧನಮಠ
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.