ಮಂಗಳೂರಿನಲ್ಲಿ ಕೆಲ ದಿನಗಳ ಹಿಂದೆ ನಡೆದ ಕಾರ್ಯಕ್ರಮವೊಂದರಲ್ಲಿ ಸಿಪಿಐ ಮುಖಂಡ ಕನ್ಹಯ್ಯ ಕುಮಾರ್ ಅವರೊಂದಿಗೆ ಯುವತಿಯೊಬ್ಬರು ‘ಕನ್ಹಯ್ಯ ಕುಮಾರ್ ಅವರೇ ಜೈ ಶ್ರೀರಾಮ್’ ಎಂದು ಹೇಳಿ ಮಾತು ಪ್ರಾರಂಭಿಸಿದ್ದನ್ನು ದೀಪಾ ಹಿರೇಗುತ್ತಿ ಅವರು ವಿರೋಧಿಸಿದ್ದಾರೆ (ಸಂಗತ, ಆ. 19). ಉತ್ತರ ಭಾರತದ ಸಂಸ್ಕೃತಿಯನ್ನು ನಾವು ಅನುಕರಿಸುತ್ತಿದ್ದೇವೆ ಎಂದು ಅವರು ಬರೆದಿದ್ದಾರೆ. ಅಂದರೆ, ಶ್ರೀರಾಮ ಉತ್ತರ ಭಾರತಕ್ಕೆ ಮಾತ್ರ ಸೀಮಿತನೇ? ಆತ ಪ್ರಪಂಚದೆಲ್ಲೆಡೆ ಪ್ರಸಿದ್ಧಿ ಪಡೆದವ. ಥಾಯ್ಲೆಂಡಿನಲ್ಲಿ ರಾಮನ ಆರಾಧನೆಯಿದೆ. ನಾವು ಮಕ್ಕಳಿಗೆ ದೇವರುಗಳ ಹೆಸರು ಇಡುವುದು ಆ ಹೆಸರುಗಳೊಂದಿಗೆ ದೈವಸ್ಮರಣೆಯೂ ಆಗಲೆಂಬ ಸದುದ್ದೇಶದಿಂದ. ದೇವರನ್ನು ನಂಬುವವರು ಈಗಲೂ ದೂರವಾಣಿಯಲ್ಲಿ ‘ರಾಮ್ ರಾಮ್’ ಎಂದೋ ‘ಹರಿ ಓಂ’ ಎಂದೋ ಮಾತು ಪ್ರಾರಂಭಿಸುತ್ತಾರೆ.ಇನ್ನು, ಲೇಖನದಲ್ಲಿ ಹೇಳಿರುವಂತೆ ಉತ್ತರ ಭಾರತವು ವಿದೇಶಿಯರ ದಾಳಿಯಿಂದ ತತ್ತರಿಸಿತು, ನಿಜ.
ಮುಸಲ್ಮಾನರಿಗೆ ಆ ಮಾರ್ಗ ಸುಲಭವಿತ್ತು. ಇದು ಭೌಗೋಳಿಕ ಸಮಸ್ಯೆ. ಆದರೆ ಕ್ರಿ.ಶ. 1498ರಲ್ಲಿ ಪೋರ್ಚುಗೀಸರು ಕಲ್ಲಿಕೋಟೆಗೆ ಬಂದು ಲೆಕ್ಕವಿಲ್ಲದಷ್ಟು ಸಂಪತ್ತನ್ನು ಲೂಟಿ ಹೊಡೆದ ಇತಿಹಾಸವನ್ನು ಮರೆಯಲಾದೀತೇ?ಭಾರತ ಕೆಲವೇ ವರ್ಷಗಳಲ್ಲಿ ವಿಶ್ವಗುರುವಾಗುವ ಎಲ್ಲ ಅರ್ಹತೆಗಳನ್ನೂ ಪಡೆದಿದೆ ಎಂಬ ವಿಶ್ವಸಂಸ್ಥೆಯ ಆಶಯಕ್ಕೆ ಪೂರಕವಾಗಿ ನಾವೆಲ್ಲರೂ ಕೆಲಸ ಮಾಡೋಣ. ಭವ್ಯ ಭಾರತದ ಕಲ್ಪನೆಯನ್ನು ಸಾಕಾರಗೊಳಿಸೋಣ.
- ರಾಮಸುಬ್ರಾಯ ಶೇಟ್,ಶಿವಮೊಗ್ಗ
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.