ADVERTISEMENT

ಪೌರಕಾರ್ಮಿಕರ ಶೋಷಣೆ ನಿಲ್ಲಲಿ

​ಪ್ರಜಾವಾಣಿ ವಾರ್ತೆ
Published 16 ನವೆಂಬರ್ 2018, 20:00 IST
Last Updated 16 ನವೆಂಬರ್ 2018, 20:00 IST

ನಮ್ಮ ಪ್ರಮುಖ ನಗರಗಳನ್ನು ಸ್ವಚ್ಛವಾಗಿಡಲು ಪ್ರತಿನಿತ್ಯ ಸಾವಿರಾರು ಪೌರಕಾರ್ಮಿಕರು ಶ್ರಮ ವಹಿಸುತ್ತಾರೆ, ಇವರಲ್ಲಿ ಹೆಚ್ಚಿನವರು ಗುತ್ತಿಗೆ ಆಧಾರದಲ್ಲಿ ಹಲವು ವರ್ಷಗಳಿಂದ ಕೆಲಸ ಮಾಡುತ್ತಿದ್ದಾರೆ. ತಮ್ಮ ಸೇವೆಯನ್ನು ಕಾಯಂ ಮಾಡುವಂತೆ ಕಳೆದ ವರ್ಷ ಅವರೆಲ್ಲ ಬೆಂಗಳೂರಿನಲ್ಲಿ ಪ್ರತಿಭಟನೆ ಮಾಡಿದ್ದರು. ಅವರ ಅಹವಾಲನ್ನು ಆಲಿಸಿದ ಸಿದ್ದರಾಮಯ್ಯ ನೇತೃತ್ವದ ಸರ್ಕಾರವು, ಸೇವೆಯನ್ನು ಕಾಯಂ ಮಾಡುವ ಬದಲು, ಮಾಸಿಕ ₹ 10,000 ಇದ್ದ ಅವರ ಸಂಬಳವನ್ನು ₹ 17,000ಕ್ಕೆ ಹೆಚ್ಚಿಸಿತು. ಅದಲ್ಲದೆ ‘ಇನ್‌ಸ್ಪೆಕ್ಟರ್‌’ ಎಂಬ ಹುದ್ದೆಯೊಂದನ್ನು ಸೃಷ್ಟಿಸಿ ಸರ್ಕಾರಿ ಅಧಿಕಾರಿಯೊಬ್ಬರನ್ನು ಪೌರಕಾರ್ಮಿಕರ ಮೇಲ್ವಿಚಾರಣೆಗೆ ನೇಮಿಸಿತು.

ಸದ್ಯ ಈಗ ಪೌರಕಾರ್ಮಿಕರಿಗೆ ವೇತನದಿಂದ ಇಎಸ್‌ಐ ಮತ್ತು ಭವಿಷ್ಯನಿಧಿ ಕಡಿತವಾಗಿ, ತಿಂಗಳಿಗೆ ₹ 13,040 ಸಂಬಳ ಸಿಗುತ್ತಿದೆ. ಅದು ನೇರವಾಗಿ ಅವರ ಬ್ಯಾಂಕ್‌ ಖಾತೆಗೆ ಜಮೆಯಾಗುತ್ತದೆ. ಆದರೆ ಪ್ರತಿ ತಿಂಗಳೂ ವೇತನ ಬರುತ್ತಿಲ್ಲ. ಎರಡು– ಮೂರು ತಿಂಗಳಿಗೊಮ್ಮೆ ಜಮಾವಣೆಯಾಗುತ್ತಿದೆ.

ಈಗ ಕೆಲವು ಗುತ್ತಿಗೆದಾರರು ಪೌರಕಾರ್ಮಿಕರ ಅಜ್ಞಾನವನ್ನೇ ಬಳಸಿಕೊಂಡು, ‘ಸಂಬಳ ಹೆಚ್ಚಳ ಮಾಡುವುದರ ಹಿಂದೆ ಅಧಿಕಾರಿಗಳ ಶ್ರಮವಿದೆ, ಅವರಿಗೆ ಹಣ ಕೊಡಬೇಕು’ ಎಂದು ಹೇಳಿ ಕಾರ್ಮಿಕರಿಂದ ಒಂದಷ್ಟು ಹಣ ವಸೂಲಿ ಮಾಡಿ ತಮ್ಮ ಜೇಬುಗಳನ್ನು ತುಂಬಿಸಿಕೊಳ್ಳುತ್ತಿದ್ದಾರೆ. ಬೆಂಗಳೂರಿನ ಕೆಲವೆಡೆ ಪಿ.ಎಫ್‌. ಹಣದ ವಿಚಾರದಲ್ಲೂ ಕೆಲವು ಗೊಂದಲಗಳನ್ನು ಸೃಷ್ಟಿಸಿ ಕಾರ್ಮಿಕರಿಂದ ಗುತ್ತಿಗೆದಾರರು ಹಣ ಪೀಕಿಸುತ್ತಿದ್ದಾರೆ.

ADVERTISEMENT

ಬಿಬಿಎಂಪಿ ಅಧಿಕಾರಿಗಳು ಎಚ್ಚೆತ್ತುಕೊಂಡು, ಗುತ್ತಿಗೆದಾರರು ನಡೆಸುತ್ತಿರುವ ಈ ಹಗಲು ದರೋಡೆಯನ್ನು ತಪ್ಪಿಸಬೇಕು.

-ವಿವೇಕ್ ಮೌರ್ಯ,ಬೆಂಗಳೂರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.