‘ಇನ್ನೊಂದು ಪಕ್ಷ ಇದ್ದಿದ್ದರೆ ಟವಲ್ ಹಾಕುತ್ತಿದ್ದರು’ ಎಂದು ಎಚ್.ವಿಶ್ವನಾಥ್ ಅವರ ಕುರಿತು ಜೆಡಿಎಸ್ ಮುಖಂಡ ಎಚ್.ಡಿ.ಕುಮಾರಸ್ವಾಮಿ ಲೇವಡಿ ಮಾಡಿದ್ದಾರೆ.
ಇದೇ ಕುಮಾರಸ್ವಾಮಿಯವರು ಕೆಲವು ವರ್ಷಗಳ ಹಿಂದೆ ಮುಖ್ಯಮಂತ್ರಿಯಾಗಲು ಬಿಜೆಪಿ ಜೊತೆ 20-20 ತಿಂಗಳು ಅಧಿಕಾರ ಹಂಚಿಕೆಯ ಒಪ್ಪಂದದ ಮೇರೆಗೆ ಕೈಜೋಡಿಸಿದ್ದು, ನಂತರ ಬಿಜೆಪಿಗೆ ಮುಖ್ಯಮಂತ್ರಿ ಸ್ಥಾನ ನೀಡದೆ ಬೆಂಬಲ ಹಿಂತೆಗೆದುಕೊಂಡು ವಚನಭ್ರಷ್ಟ ಎನಿಸಿಕೊಂಡಿದ್ದು ಮತ್ತು 2018ರಲ್ಲಿ ಮತ್ತೊಮ್ಮೆ ಮುಖ್ಯಮಂತ್ರಿಯಾಗಲು ಕಾಂಗ್ರೆಸ್ಸಿನೊಂದಿಗೆ ಕೈ ಜೋಡಿಸಿ ಮೈತ್ರಿ ಸರ್ಕಾರ ರಚಿಸಿದ್ದು, ತದನಂತರ ಅಲ್ಲೂ ಒಡಕುಂಟಾಗಿ, ‘ಮೈತ್ರಿ ಸರ್ಕಾರದ ಕ್ಲರ್ಕ್ ಆಗಿದ್ದೆ ನಾನು’ ಎಂದು ವ್ಯರ್ಥಾಲಾಪ ಮಾಡುತ್ತಿರುವುದು ಯಾವುದನ್ನೂ ಜನ ಮರೆತಿಲ್ಲ.
ಇತ್ತೀಚೆಗಿನ ಕಾಲಮಾನದಲ್ಲಿ ರಾಜಕೀಯ ಎಂದರೆ ಹೀಗೇ ಎಂಬಂತಾಗಿಬಿಟ್ಟಿದೆ. ಯಾರೂ ಅತೀತರಲ್ಲ. ಎಲ್ಲರೂ ಅಧಿಕಾರ ವ್ಯಾಮೋಹಿಗಳೇ ಸರಿ. ಅವರಿವರ ಮೇಲೆ ದೂರುತ್ತಾ ಕೂರದೆ, ಮಾಡಿದ ತಪ್ಪುಗಳಿಂದ ಈಗ ಪಾಠ ಕಲಿತು ಜನಪರ ಕೆಲಸಗಳಲ್ಲಿ ಕಾರ್ಯಪ್ರವೃತ್ತರಾದರೆ, ಕರ್ನಾಟಕದ ಜನರ ಕೊರಳಾಗಬೇಕಾದ ಪ್ರಾದೇಶಿಕ ಪಕ್ಷವನ್ನು ಅವರು ಮುಂದಾದರೂ ಮೇಲಕ್ಕೆತ್ತಬಹುದು. ಇಲ್ಲವಾದಲ್ಲಿ ಎರಡು ದೊಡ್ಡ ಪಕ್ಷಗಳ ನಡುವೆ ಸಿಲುಕಿ ಮಾಯವಾಗುವ ದಿನಗಳು ದೂರವಿಲ್ಲ.
ಪತ್ತಂಗಿ ಎಸ್. ಮುರಳಿ,ಬೆಂಗಳೂರು
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.