ಸಚಿವರು ಮತ್ತು ಶಾಸಕರು ಸರ್ಕಾರಿ ಶಾಲೆಗಳನ್ನು ದತ್ತು ತೆಗೆದುಕೊಂಡು ಅಭಿವೃದ್ಧಿಪಡಿಸಬೇಕು ಎಂಬ ರಾಜ್ಯ ಸರ್ಕಾರದ ಶಿಕ್ಷಣ ಸುಧಾರಣೆ ಸಲಹೆಗಾರ ಪ್ರೊ. ಎಂ.ಆರ್.ದೊರೆಸ್ವಾಮಿ ಅವರ ಚಿಂತನೆ ಸರಿಯಾದುದೆ. ಸರ್ಕಾರಿ ನೌಕರರು ಮತ್ತು ಎಲ್ಲ ಹಂತಗಳ ಜನಪ್ರತಿನಿಧಿಗಳ ಮಕ್ಕಳನ್ನು ಕಡ್ಡಾಯವಾಗಿ ಸರ್ಕಾರಿ ಶಾಲೆಗಳಿಗೆ ಸೇರಿಸಬೇಕು ಎಂಬ ಚಿಂತನೆಯು ಜಾರಿಗೆ ಬಂದರೆ, ಯಾವ ಜನಪ್ರತಿನಿಧಿಯೂ ಸರ್ಕಾರಿ ಶಾಲೆಗಳನ್ನು ‘ದತ್ತು’ ತೆಗೆದುಕೊಂಡು ಅಭಿವೃದ್ಧಿಪಡಿಸಬೇಕಾದ ಪ್ರಮೇಯವೇ ಬರುವುದಿಲ್ಲ.
ಹಾಗಾದಲ್ಲಿ ಶಿಕ್ಷಣ ಕ್ಷೇತ್ರಕ್ಕಾಗಿ ಇಟ್ಟಿರುವ ಅನುದಾನವು ಸರಿಯಾದ ರೀತಿಯಲ್ಲಿ ಬಳಕೆಯಾಗಿ, ಶೈಕ್ಷಣಿಕ ದೃಷ್ಟಿಯಿಂದಲೂ ಸವಲತ್ತುಗಳ ನೆಲೆಯಲ್ಲೂ ಸರ್ಕಾರಿ ಶಾಲೆಗಳು ಖಂಡಿತವಾಗಿ ಉತ್ತುಂಗದ ಸ್ಥಿತಿಗೆ ಏರಬಲ್ಲವು. ಆಳುವವರೇ ಖಾಸಗಿ ಶಾಲೆಗಳ ಒಡೆಯರಾಗಿ, ಶಿಕ್ಷಣವೇ ಒಂದು ಉದ್ಯಮವಾಗಿ ಬೆಳೆಯುತ್ತಿರುವ ಈ ಹೊತ್ತಿನಲ್ಲಿ, ಖಾಸಗಿ ಶಾಲೆಗಳ ನಡುವೆ ಬಡಪಾಯಿ ಸರ್ಕಾರಿ ಶಾಲೆಗಳು ತಲೆಯೆತ್ತಿ ನಿಂತು ಅಭಿವೃದ್ಧಿ ಹೊಂದುವುದು ಸುಲಭದ ಮಾತಲ್ಲ. ಸಾಮಾಜಿಕ ಹಾಗೂ ಆರ್ಥಿಕ ಅಂತಸ್ತುಗಳನ್ನು ಬದಿಗಿಟ್ಟು ಜನ ಸಹ ಸರ್ಕಾರಿ ಶಾಲೆಗಳತ್ತ ಮುಖ ಮಾಡಿದರೆ, ಸೊರಗಿರುವ ಅವುಗಳ ಸ್ಥಿತಿ ಸುಧಾರಿಸಬಹುದು.
-ಮಂಜುನಾಥ್ ಟಿ.ಎಸ್.,ತರುವೆ
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.