ಯುದ್ಧವೆಂದರೆ ವಾಟ್ಸ್ಆ್ಯಪ್, ಇನ್ಸ್ಟಾಗ್ರಾಂ, ಫೇಸ್ಬುಕ್ನಂತಹ ಸಾಮಾಜಿಕ ಜಾಲತಾಣಗಳಲ್ಲಿ ಬರೆದು ಕೊಂಡಂತೆ ಸರಳವೂ ಸುಲಭವೂ ಅಲ್ಲ. ಯುದ್ಧ ಬರೀ ಎರಡು ದೇಶಗಳ ನಡುವೆ ನಡೆದರೂ ಅದರ ಪರಿಣಾಮವನ್ನು ಅನೇಕ ರಾಷ್ಟ್ರಗಳು ಅನುಭವಿಸಬೇಕಾಗುತ್ತದೆ. ಯುದ್ಧವನ್ನು ತಡೆಯಲು ಅನೇಕ ಶಕ್ತಿಶಾಲಿ ಮಾರ್ಗೋಪಾಯಗಳಿವೆ. ಋಗ್ವೇದದ ಕಾಲದಿಂದಲೂ ಸಭಾ, ಸಮಿತಿಗಳನ್ನು ಗೌರವಿಸಿಕೊಂಡು ಬಂದಿರುವ ಭಾರತವು ಅತ್ಯಂತ ಗಂಭೀರವಾಗಿ ಇಂತಹ ಮಾರ್ಗೋಪಾಯಗಳನ್ನು ರೂಪಿಸುವುದು ಬಹಳ ಅಗತ್ಯ.
ಅಂತರರಾಷ್ಟ್ರೀಯ ನ್ಯಾಯಾಲಯ, ಅಂತರರಾಷ್ಟ್ರೀಯ ವೇದಿಕೆಗಳು, ಮಿತ್ರರಾಷ್ಟ್ರಗಳನ್ನು ಅತ್ಯಂತ ಪರಿಣಾಮಕಾರಿಯಾಗಿ ನಿಭಾಯಿಸುವ ರಾಜತಾಂತ್ರಿಕ ನಡೆಯ ಮೂಲಕ, ಕೋವಿಡ್- 19 ಕೇಂದ್ರಸ್ಥಾನವಾಗಿ ಹಿನ್ನಡೆ ಅನುಭವಿಸುತ್ತಿರುವ ಚೀನಾವನ್ನು ವಿಶ್ವ ಸಮುದಾಯದಿಂದ ಇನ್ನಷ್ಟು ದೂರವಿಡುವ ಪ್ರಯತ್ನದೆಡೆಗೆ ಗಮನ ಕೇಂದ್ರೀಕರಿಸಬೇಕು.
ನಾನೊಬ್ಬ ಭಾರತೀಯನಾಗಿ, ಗಾಲ್ವನ್ ಕಣಿವೆಯಲ್ಲಿ ಹುತಾತ್ಮರಾದ ನನ್ನ ಸಹೋದರರನ್ನು ನೆನೆದಾಗ ರಕ್ತ ಕುದಿಯುವುದು ಸಹಜ. ಆದರೆ ಅಂತರರಾಷ್ಟ್ರೀಯ ಸಂಬಂಧಗಳನ್ನು ಅಭ್ಯಸಿಸುತ್ತಿರುವ ಒಬ್ಬ ವಿದ್ಯಾರ್ಥಿಯಾಗಿ ಯೋಚಿಸುವುದಾದರೆ, ವಿಶ್ವ ಸಮುದಾಯವೇ ಅರ್ಥವ್ಯವಸ್ಥೆಯ ತೂಗುಕತ್ತಿ ಅಂಚಿನಲ್ಲಿ ನಡೆಯುತ್ತಿರುವ ಪ್ರಸ್ತುತ ಸಂದರ್ಭದಲ್ಲಿ, ಯುದ್ಧ ಅನಿವಾರ್ಯವೂ ಅಲ್ಲ ಅಗತ್ಯವೂ ಅಲ್ಲ ಅನಿಸುತ್ತದೆ.
ಅಮೆರಿಕದ ಅಧ್ಯಕ್ಷರಾಗಿದ್ದ ಜಾನ್ ಎಫ್. ಕೆನಡಿ ‘ಯುದ್ಧವನ್ನು ವಿಶ್ವ ಸಮುದಾಯವು ಕೊನೆಗಾಣಿಸಲೇಬೇಕು. ಇಲ್ಲವಾದಲ್ಲಿ ಯುದ್ಧವೇ ಸಮುದಾಯವನ್ನು ಕೊನೆಗಾಣಿಸುತ್ತದೆ’ ಎಂದು ವ್ಯಾಖ್ಯಾನಿಸಿದ್ದರು. ಪ್ರಸ್ತುತ ಸಂದರ್ಭದಲ್ಲಿ ಇದು ಆಲೋಚಿಸಬೇಕಾದ ವಿಷಯ.
-ವಿಜಯಕುಮಾರ್ ಎಸ್. ಸುಜ್ಜಲೂರು, ಮೈಸೂರು
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.