ಕಾಲೇಜು ಶಿಕ್ಷಣ ಮತ್ತು ತಾಂತ್ರಿಕ ಶಿಕ್ಷಣ ಇಲಾಖೆಗಳಡಿ ಬರುವ ಎಲ್ಲ ಸರ್ಕಾರಿ ಕಾಲೇಜುಗಳಲ್ಲಿ ಪ್ರಸಕ್ತ ಶೈಕ್ಷಣಿಕ ವರ್ಷಕ್ಕೆ ಈ ಹಿಂದಿನ ಶೈಕ್ಷಣಿಕ ವರ್ಷದ ಅತಿಥಿ ಉಪನ್ಯಾಸಕರನ್ನೇ ಮುಂದುವರಿಸುವ ಸರ್ಕಾರದ ಧೋರಣೆ ಸ್ವಾಗತಾರ್ಹ. ಆದರೆ ಕಾರ್ಯನಿರ್ವಹಿಸುತ್ತಿರುವ ಅತಿಥಿ ಉಪನ್ಯಾಸಕರಲ್ಲಿ ಅರ್ಹತೆ ಹೊಂದಿಲ್ಲದಿದ್ದರೂ ಕಳೆದ ಎರಡು ವರ್ಷಗಳಿಂದ ಮುಂದುವರಿಕೆಯ ಮೂಲಕವೇ ಇರುವವರು ಹಲವರಿದ್ದಾರೆ.
ಯುಜಿಸಿ ನಿಯಮಾನುಸಾರ, ಉಪನ್ಯಾಸಕರಾಗಲು ಕನಿಷ್ಠ ಅರ್ಹತೆ ಎನ್ಇಟಿ ಎಂದು ತಿಳಿಸಲಾಗಿದೆ. ಅದರ ಪ್ರಕಾರ, ತಿಂಗಳಾನುಗಟ್ಟಲೆ ಮನೆಯಲ್ಲೇ ಕುಳಿತು ಕಷ್ಟಪಟ್ಟು ಓದಿ ಎನ್ಇಟಿ, ಎಸ್ಎಲ್ಇಟಿ ಪರೀಕ್ಷೆಗಳನ್ನು ಉತ್ತೀರ್ಣಗೊಳಿಸಿದ ವಿದ್ಯಾರ್ಥಿಗಳು ಸರ್ಕಾರದ ನಿರ್ಲಕ್ಷ್ಯದಿಂದ ಮೂಲೆಪಾಲಾಗುವ ಸ್ಥಿತಿ ತಲುಪಿದ್ದಾರೆ.
ಕೋವಿಡ್- 19ರ ನೆಪದಲ್ಲಿ ಅರ್ಹರನ್ನು ಕಡೆಗಣಿಸುವುದು ಎಷ್ಟರಮಟ್ಟಿಗೆ ಸರಿ? ಇದಲ್ಲದೆ ಎರಡು ವರ್ಷಗಳಿಂದ ಹಳಬರನ್ನೇ ಮುಂದುವರಿಸುತ್ತಾ, ಅನುಭವದ ಆಧಾರದಲ್ಲಿ ಮುಂದುವರಿಸುವುದಾಗಿ ಹೇಳಿಕೊಳ್ಳುವ ಕಾಲೇಜು ಗಳು, ಅರ್ಹರಿಗೆ ಅವಕಾಶವನ್ನೇ ನೀಡದಿರುವುದು ವಿಪರ್ಯಾಸ. ಅರ್ಹತಾ ಪರೀಕ್ಷೆಯನ್ನು ಉತ್ತೀರ್ಣಗೊಳಿಸದೆ ತುರ್ತಾಗಿ ಸೇರಿಕೊಂಡಿರುವ ಅತಿಥಿ ಉಪನ್ಯಾಸಕರನ್ನು ಕಾಲೇಜಿನಿಂದ ಬಿಡುಗಡೆಗೊಳಿಸಿ, ಅರ್ಹರನ್ನು ಆಯ್ಕೆ ಮಾಡಿಕೊಂಡಲ್ಲಿ ಶಿಕ್ಷಣದ ಗುಣಮಟ್ಟ ಕಾಯ್ದುಕೊಳ್ಳಲು ಸಾಧ್ಯ.
-ಸುಖೇಶ ಕೆ.ಬಿ., ಮಡಿಕೇರಿ
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.