ಎಡ ಮತ್ತು ಬಲಪಂಥಗಳು ಹಿಟ್ಲರ್ ಪ್ರಜ್ಞೆಯಲ್ಲಿ ಮುಳುಗಿವೆ ಎಂದು ಪ್ರೊ. ಎಸ್.ಜಿ.ಸಿದ್ಧರಾಮಯ್ಯ ಹೇಳಿದ್ದಾರೆ (ಪ್ರ.ವಾ., ಮಾರ್ಚ್ 14). ಬಂಡವಾಳವಾದಿ ರಾಷ್ಟ್ರಗಳಲ್ಲಿ ತೀವ್ರ ಆರ್ಥಿಕ ಬಿಕ್ಕಟ್ಟಿನ ಭಾಗವಾಗಿ ಇಟಲಿ, ಜರ್ಮನಿ ಮುಂತಾದ ದೇಶಗಳಲ್ಲಿ ಎಲ್ಲಾ ಪ್ರಜಾಪ್ರಭುತ್ವ ಹಕ್ಕುಗಳನ್ನೂ ದಮನ ಮಾಡಿ ಮುಸೊಲಿನಿ, ಹಿಟ್ಲರ್ ‘ಸರ್ವಾಧಿಕಾರಿ’ಗಳಾಗಿದ್ದು ಇತಿಹಾಸದ ಭಾಗ.
ಬಂಡವಾಳಶಾಹಿ ಜಗತ್ತು ಪರಸ್ಪರ ತಮ್ಮ ಆಧಿಪತ್ಯವನ್ನು ಹೆಚ್ಚಿಸಿಕೊಳ್ಳುವ ಭಾಗವಾಗಿ ವಿಶ್ವಯುದ್ಧ ಸಾರಿದ ಸಂಗತಿಯೂ ಇತಿಹಾಸದ ಭಾಗವಾಗಿಯೇ ಇದೆ. ಇಲ್ಲಿ ಪರಸ್ಪರ ಯುದ್ಧ ಸಾರಿದ ದೇಶಗಳು ‘ಬಲಪಂಥೀಯ’ವಾಗಿದ್ದವು, ಎಡ ಅಥವಾ ಸಮಾಜವಾದಿ ದೇಶಗಳಾಗಿರಲಿಲ್ಲ.
ಈಗಲೂ ರಷ್ಯಾ ಮತ್ತು ಉಕ್ರೇನ್ ನಡುವಿನ ಯುದ್ಧ ಕೂಡ ಎರಡು ಬಲಪಂಥೀಯ ದೇಶಗಳ ನಡುವಿನ ಯುದ್ಧವೇ ಆಗಿದೆ. 1991ರಲ್ಲಿ ಅಂದಿನ ಸಮಾಜವಾದಿ ದೇಶವಾಗಿದ್ದ ಯುಎಸ್ಎಸ್ಆರ್ ವಿಘಟನೆಯಾದ ನಂತರ ರಷ್ಯಾವು ಸಮಾಜವಾದಿ ದೇಶವಾಗಿ ಉಳಿಯಲಿಲ್ಲ. ಈಗಿನ ರಷ್ಯಾ ಪಕ್ಕಾ ಬಲಪಂಥೀಯ ದೇಶವಾಗಿದೆ.
ಉಕ್ರೇನಿನಲ್ಲಿ ಕೂಡ ‘ನವಫ್ಯಾಸಿವಾದಿ’ಗಳು ಅಧಿಕಾರದ ಚುಕ್ಕಾಣಿ ಹಿಡಿದಿದ್ದಾರೆ. ಹಿಂದಿನ ಯುಎಸ್ಎಸ್ಆರ್ನ ಭಾಗವಾಗಿದ್ದ ಉಕ್ರೇನ್ ಈಗ ಅಮೆರಿಕ ನೇತೃತ್ವದ ನ್ಯಾಟೊ ಮಿತ್ರಕೂಟದ ಜತೆ ಸೇರಿಕೊಂಡು ರಷ್ಯಾದ ಗಡಿ ಪ್ರದೇಶಗಳಲ್ಲಿ ಸೇನಾ ಜಮಾವಣೆಗೆ ಮುಂದಾಗಿರುವ ಸಂಗತಿಯು ರಷ್ಯಾವನ್ನು ಕೆರಳಿಸಿದೆ. ಅಮೆರಿಕ ಮತ್ತಿತರ ಸಾಮ್ರಾಜ್ಯವಾದಿ ದೇಶಗಳು ಉಕ್ರೇನಿನ ಹಿಂದೆ ನಿಂತು ತಮ್ಮ ದೇಶದ ಭದ್ರತೆಗೆ ಅಪಾಯ ಒಡ್ಡಿವೆ ಎನ್ನುವುದು ರಷ್ಯಾದ ಅಭಿಪ್ರಾಯವಾಗಿದೆ. ಇದು ವಾಸ್ತವ.
ರಷ್ಯಾವು ಯುದ್ಧ ಸಾರಿರುವುದು ಯಾವುದೇ ಕಾರಣಕ್ಕೂ ಸಮರ್ಥನೀಯವಲ್ಲ. ಮಾತುಕತೆಯ ಮೂಲಕ ಮಾತ್ರವೇ ಪರಸ್ಪರ ಮನಸ್ತಾಪ, ಸಮಸ್ಯೆಗಳನ್ನು ಪರಿಹರಿಸಿಕೊಳ್ಳಬೇಕು, ಯುದ್ಧ ಪರಿಹಾರ ವಲ್ಲ. ಎಡವಾದಕ್ಕೂ ಹಿಟ್ಲರಿಗೂ ಸಂಬಂಧವಿಲ್ಲ. ಹಿಟ್ಲರ್ ಅಪ್ಪಟ ಬಲಪಂಥೀಯ. ಹಾಗಾಗಿ ‘ಹಿಟ್ಲರ್ ಪ್ರಜ್ಞೆಯ ಎಡ ಬಲ ಪಂಥ’ ಎನ್ನುವುದು ಸರಿಯಾಗದು.
-ಟಿ.ಸುರೇಂದ್ರ ರಾವ್,ಬೆಂಗಳೂರು
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.