ಮಲೆನಾಡಿನಲ್ಲಿ ಅಡಿಕೆ ಸಿಂಗಾರಕ್ಕೆ ರಾಸಾಯನಿಕ ಕೀಟನಾಶಕ ಸಿಂಪಡಿಸುತ್ತಿರುವುದರಿಂದ ಜೇನು ನೊಣಗಳು ಸಾಯುತ್ತಿವೆ ಎಂದು ವರದಿಯಾಗಿದೆ (ಪ್ರ.ವಾ., ಫೆ. 16). ಈ ಸಮಸ್ಯೆ ಮಲೆನಾಡಿನಲ್ಲಿ ಮಾತ್ರವಲ್ಲ ಬಹುಪಾಲು ಕಡೆ ಇದೆ. ಮಾವಿನ ತೋಪುಗಳು ಇರುವ ಕಡೆ, ಮಾವು ಹೂ ಬಿಡುವ ಸಮಯದಲ್ಲಿ ಹೂಗಳು ಉದುರದಿರಲೆಂದು ರಾಸಾಯನಿಕವೊಂದನ್ನು ಸಿಂಪಡಿಸುತ್ತಾರೆ. ಆಗ ಲಕ್ಷಾಂತರ ಜೇನು ನೊಣಗಳು ಮಕರಂದ ಹೀರಲು ಹೋಗಿ ಪ್ರಾಣ ಬಿಡುತ್ತವೆ. ಇದೇ ರೀತಿ ಚೆಂಡು ಹೂಗಳಿಗೆ ಸಿಂಪಡಿಸುವ ರಾಸಾಯನಿಕದಿಂದಲೂ ಜೇನು ನೊಣಗಳು ಸಾಯುತ್ತಲೇ ಇವೆ. ಎಷ್ಟೋ ಬಾರಿ ಇಡೀ ಗೂಡಿನ ಎಲ್ಲ ಜೇನು ನೊಣಗಳೂ ಸತ್ತು ಗೂಡು
ಖಾಲಿಯಾದದ್ದನ್ನೂ ನೋಡಿದ್ದೇವೆ.
ಜೇನು ನೊಣಗಳು ಪರಾಗಸ್ಪರ್ಶ ಮಾಡದೇ ಹೋದಲ್ಲಿ ಆಹಾರ ಉತ್ಪಾದನೆ ತಳಮಟ್ಟಕ್ಕೆ ಕುಸಿಯುತ್ತದೆ. ಆದ್ದರಿಂದ ರಾಸಾಯನಿಕ ಕೀಟನಾಶಕಗಳನ್ನು ನಿಷೇಧಿಸಬೇಕು. ಶೇ 99ರಷ್ಟು ಕೀಟನಾಶಕಗಳು ಪರಿಸರಕ್ಕೆ ಮಾರಕವೆಂದು ಅಧ್ಯಯನಗಳೇ ತಿಳಿಸಿವೆ.
ಹೀಗಿರುವಾಗ ಅವುಗಳನ್ನು ನಿಷೇಧಿಸುವುದು ಸರಿಯಾದ ಕ್ರಮ. ಸಾವಯವ ಸಂಯುಕ್ತಗಳಿಂದ ಕೀಟನಾಶಕಗಳನ್ನು ತಯಾರಿಸಲು ಸರ್ಕಾರ ಪ್ರೋತ್ಸಾಹ ನೀಡಬೇಕು. ಜೊತೆಗೆ, ಸೌರಬಲೆಯಂತಹ ಕೀಟ ನಿಯಂತ್ರಕಗಳನ್ನು ಸಬ್ಸಿಡಿ ದರದಲ್ಲಿ ರೈತರಿಗೆ ನೀಡಬೇಕು.
→ಮಹೇಶ್ವರ ಹುರುಕಡ್ಲಿ,ಬಾಚಿಗೊಂಡನಹಳ್ಳಿ
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.