ADVERTISEMENT

ಉತ್ತಮ ಸಂಪ್ರದಾಯಕ್ಕೆ ನಾಂದಿ ಹಾಡಲಿ

​ಪ್ರಜಾವಾಣಿ ವಾರ್ತೆ
Published 6 ಆಗಸ್ಟ್ 2019, 20:00 IST
Last Updated 6 ಆಗಸ್ಟ್ 2019, 20:00 IST

ರಾಜ್ಯದಲ್ಲಿ ಸಮ್ಮಿಶ್ರ ಸರ್ಕಾರ ಪತನಗೊಂಡು ಬಿಜೆಪಿ ನೇತೃತ್ವದ ಸರ್ಕಾರ ಅಸ್ತಿತ್ವಕ್ಕೆ ಬಂದಿದೆ. ಆದರೆ ಹೀಗೆ ಯಾವುದೇ ಪಕ್ಷದ ನೇತೃತ್ವದ ಹೊಸ ಸರ್ಕಾರ ರಚನೆಯಾದಾಗಲೂ ಏನೋ ಅಪರಾಧ ಮಾಡಿದ್ದಾರೆ ಎಂಬಂತೆ ವಿವಿಧ ಇಲಾಖೆಗಳ ಕಾರ್ಯದರ್ಶಿಗಳು, ಐಎಎಸ್, ಐಪಿಎಸ್‌ ಅಧಿಕಾರಿಗಳನ್ನು ಕೂಡಲೇ ಎತ್ತಂಗಡಿ ಮಾಡಲಾಗುತ್ತದೆ. ಇದು ಆಡಳಿತಕ್ಕೆ ಶೋಭೆ ತರುವ ನಡವಳಿಕೆಯಲ್ಲ. ಈ ಅಧಿಕಾರಿಗಳೆಲ್ಲ ಅರ್ಹತೆಯ ಆಧಾರದ ಮೇಲೆ ಆಯ್ಕೆಯಾಗಿರುತ್ತಾರೆ. ವಹಿಸಿದ ಜವಾಬ್ದಾರಿ ನಿರ್ವಹಿಸುತ್ತಾರೆ. ಜನಪ್ರತಿನಿಧಿಗಳಂತೆ ಐದು ವರ್ಷಗಳ ಅವಧಿಗೆ ಇದ್ದು ಹೋಗುವವರಲ್ಲ. ಸರ್ಕಾರ ಬದಲಾದ ಕೂಡಲೇ ಅಧಿಕಾರಿಗಳ ಸ್ಥಾನಪಲ್ಲಟವೂ ಆಗಬೇಕು ಎಂಬ ನಿಯಮ ಏನಾದರೂ ಇದೆಯೇ?

ಇಷ್ಟೇ ಸಾಲದು ಎಂಬಂತೆ ವಿವಿಧ ಪ್ರಾಧಿಕಾರ, ಅಕಾಡೆಮಿಗಳಿಗೆ ನೇಮಕಗೊಂಡಿದ್ದವರನ್ನೂ ಅವಧಿ ಪೂರ್ಣಗೊಳ್ಳುವುದಕ್ಕೆ ಮೊದಲೇ ಕೆಳಗಿಳಿಸಲಾಗಿದೆ. ಇವರೆಲ್ಲ ಆಯಾ ಕ್ಷೇತ್ರದಲ್ಲಿ ಪರಿಣತರೇ ಆಗಿದ್ದು, ಈ ಹಿಂದಿನ ಸರ್ಕಾರಗಳಿಂದಲೇ ನೇಮಕಗೊಂಡಿದ್ದವರು ಎಂಬುದನ್ನು ನಂತರ ಅಧಿಕಾರಕ್ಕೆ ಬಂದವರು ಮರೆಯುತ್ತಾರೆ ಏಕೆ? ಇಂತಹ ವಿಚಾರಗಳಲ್ಲಿ ಆ ಪಕ್ಷದಿಂದ ಈ ಪಕ್ಷದಿಂದ ನೇಮಕಗೊಂಡವರು ಎಂಬುದು ಗಣನೆಗೆ ಬರಬಾರದು. ಒಂದು ನಿರ್ದಿಷ್ಟ ಅವಧಿಗೆ ಒಂದು ಕಡೆ ಕೆಲಸ ಮಾಡಲು ಅಧಿಕಾರಿಗೆ ಅವಕಾಶ ನೀಡಬೇಕು. ಅಕಾಡೆಮಿ– ಪ್ರಾಧಿಕಾರಗಳ ಅಧ್ಯಕ್ಷರು ತಮ್ಮ ಅವಧಿ ಪೂರ್ಣಗೊಳಿಸಲು ಬಿಡಬೇಕು.

– ಹೊಸಹಳ್ಳಿ ದಾಸೇಗೌಡ, ಶಿವಮೊಗ್ಗ

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.