ADVERTISEMENT

ಸಿದ್ಧಾರ್ಥ ದುರಂತ ಸಾವು | ಸರ್ಕಾರವು ನಿಷ್ಠುರ ವಸೂಲಿಗಾರ ಆಗಬಹುದೇ?

​ಪ್ರಜಾವಾಣಿ ವಾರ್ತೆ
Published 31 ಜುಲೈ 2019, 20:00 IST
Last Updated 31 ಜುಲೈ 2019, 20:00 IST

ಕೆಫೆ ಕಾಫಿ ಡೇ ಮಾಲೀಕ ಸಿದ್ಧಾರ್ಥ ಅವರ ದುರಂತ ಸಾವಿಗೆ ಸ್ವತಃ ಅವರೇ ಕಾರಣ ಎಂಬಂತೆ ಕೆಲವರು ಮಾತನಾಡುತ್ತಿದ್ದಾರೆ. ಯಾವ ಬಲಾಢ್ಯ ರಾಜಕಾರಣಿಯೂ 50 ಸಾವಿರ ಜನರಿಗೆ ಉದ್ಯೋಗ ಕೊಡುವ ಉದ್ದಿಮೆ ಸ್ಥಾಪಿಸಿಲ್ಲ. ಬದಲಿಗೆ, ಜನರನ್ನು ಶೋಷಿಸಿ ತಾವು ಪ್ರಬಲರಾಗಿದ್ದಾರೆ. ಅಧಿಕಾರಸ್ಥ ರಾಜಕಾರಣಿಗಳ ಸೂಚನೆಯಂತೆ ಐ.ಟಿ ಅಧಿಕಾರಿಗಳು ಕೆಲವರ ಮೇಲೆ ಅಕ್ಷರಶಃ ದಾಳಿ ಮಾಡಿ, ಬೆದರಿಸಿಯಾದರೂ ಬಾಕಿ ಹೆಸರಲ್ಲಿ ಬಡ್ಡಿ ಸಹಿತ ತೆರಿಗೆ ಕಿತ್ತುಕೊಳ್ಳುತ್ತಾರೆ. ತೆರಿಗೆ ವಂಚಿಸಲಾಗಿದೆಯೋ ಅಥವಾ ಆ ಸಂಸ್ಥೆ ನಷ್ಟದಲ್ಲಿದೆಯೋ ಎಂಬುದನ್ನೆಲ್ಲ ಆ ಹೊತ್ತಿನಲ್ಲಿ ಅವರು ನೋಡಲಾರರು. ಸುಂಕದವನ ಮುಂದೆ ಸುಖ- ದುಃಖವೇ ಎಂಬ ಗಾದೆಯೇ ಇದೆ.

ಒಬ್ಬ ಉದ್ಯಮಿ ನಷ್ಟದಲ್ಲಿದ್ದರೆ, ಆ ಉದ್ದಿಮೆದಾರನಿಗಿಂತಲೂ ಉದ್ದಿಮೆ ಹಾಗೂ ಅದನ್ನು ಅವಲಂಬಿಸಿದ ಉದ್ಯೋಗಿಗಳ ರಕ್ಷಣೆಯು ದೇಶದ ಮಾರುಕಟ್ಟೆ ಮತ್ತು ಆರ್ಥಿಕತೆಯ ದೃಷ್ಟಿಯಿಂದ ಬಹುಮುಖ್ಯ ಎಂಬ ತಿಳಿವು ಸರ್ಕಾರಕ್ಕೆ ಇದೆಯೇ?ಎಲ್ಲರಿಗೂ ಉದ್ಯೋಗ ಕೊಡಲು ಸರ್ಕಾರಕ್ಕೆ ಸಾಧ್ಯವಾಗದೇ ಇರುವಾಗ, ಉದ್ಯೋಗಾವಕಾಶಗಳನ್ನು ಸೃಷ್ಟಿಸಿ ಪ್ರಜೆಗಳನ್ನು ದುಡಿಯುವ ಹಾದಿಗೆ ತರುವ ಉದ್ದಿಮೆದಾರರಿಗೆ ಸರ್ಕಾರ ಕೊಡುವ ಪ್ರೋತ್ಸಾಹ ಎಂತಹದ್ದು?

ಹಿಂದಿನ ಸರ್ಕಾರದ ಅವಧಿಯ ಕಪ್ಪುಕುಳಗಳು ಈಗ ಹೆದರಿ ಓಡುತ್ತಿದ್ದಾರೆ ಎಂಬುದು ಕೇವಲ ಆತ್ಮವಂಚನೆಯ ಮಾತಾಗುತ್ತದೆ. ಉದ್ದಿಮೆಗಳಿಗೆ ಬೀಳುತ್ತಿರುವ ಹೊಡೆತವನ್ನೂ ಈ ಸಂದರ್ಭದಲ್ಲಿ ಪರಿಗಣಿಸಬೇಕಾಗುತ್ತದೆ. ಜಿಎಸ್‌ಟಿ ಹಾಗೂ ನೋಟು ಅಮಾನ್ಯೀಕರಣದ ಹೊಡೆತವು ಇಡೀ ಅರ್ಥಿಕ ಬೆಳವಣಿಗೆಯ ಮೇಲೆ ದುಷ್ಪರಿಣಾಮ ಬೀರಿರುವುದು ಸುಳ್ಳೇ? ಸರ್ಕಾರವು ಖಾಸಗಿ ಲೇವಾದೇವಿದಾರನಂತೆ ನಿಷ್ಠುರ ವಸೂಲಿಗಾರ ಆಗಬಹುದೇ?

ADVERTISEMENT

-ಡಾ. ಟಿ.ಗೋವಿಂದರಾಜು, ಬೆಂಗಳೂರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.