ADVERTISEMENT

ವಾಚಕರ ವಾಣಿ: ಉದ್ಯೋಗ ನೇಮಕಾತಿ ಬಗ್ಗೆ ಸಿಗದ ಮಾಹಿತಿ

​ಪ್ರಜಾವಾಣಿ ವಾರ್ತೆ
Published 24 ಆಗಸ್ಟ್ 2020, 15:49 IST
Last Updated 24 ಆಗಸ್ಟ್ 2020, 15:49 IST

ಕಳೆದ ವರ್ಷದ ಫೆಬ್ರುವರಿ ಮತ್ತು ಮಾರ್ಚ್ ತಿಂಗಳುಗಳು ಉದ್ಯೋಗ ಆಕಾಂಕ್ಷಿಗಳಿಗೆ ಸುವರ್ಣ ಮಾಸಗಳು ಎಂದೇ ಹೇಳಬಹುದು. ಏಕೆಂದರೆ ಆ ಅವಧಿಯಲ್ಲಿ ಪ್ರಕಟವಾಗಿದ್ದು ಬರೋಬ್ಬರಿ ಏಳು (ಕೇಂದ್ರ ಸರ್ಕಾರದ ಐದು ಮತ್ತು ರಾಜ್ಯ ಸರ್ಕಾರದ ಎರಡು) ನೇಮಕಾತಿ ಅಧಿಸೂಚನೆಗಳು. ಅದರಡಿ ಜೂನಿಯರ್ ಎಂಜಿನಿಯರ್, ಗ್ರೂಪ್ ಡಿ ಮುಂತಾದ ಹುದ್ದೆಗಳ ನೇಮಕಾತಿಗಾಗಿ ಅರ್ಜಿ ಆಹ್ವಾನಿಸಲಾಗಿತ್ತು. ಇದಾಗಿ ಒಂದೂವರೆ ವರ್ಷ ಕಳೆದರೂ ಕೆಲವು ನೇಮಕಾತಿ ಆಯೋಗಗಳಿಗೆ ಅಧಿಸೂಚನೆ ಹೊರಡಿಸಿದ್ದೇ ನೆನಪಿಲ್ಲವೇನೋ ಎಂಬಂತೆ ಆಗಿದೆ. ಲೋಕೋಪಯೋಗಿ ಇಲಾಖೆಗೆ ಸಂಬಂಧಿಸಿದಂತೆ ಪರೀಕ್ಷೆ ನಡೆಸಿದ್ದರೂ ಈಗ ಮರು ಅಧಿಸೂಚನೆ ಹೊರಡಿಸಲಾಗಿದೆ. ಇನ್ನು ಕೆಪಿಟಿಸಿಎಲ್‌ ಮತ್ತು ಆರ್‌ಆರ್‌ಬಿ ಪರೀಕ್ಷೆಗಳ ಬಗ್ಗೆ ಅಭ್ಯರ್ಥಿಗಳಿಗೆ ಯಾವುದೇ ಮಾಹಿತಿ ಸಿಗುತ್ತಿಲ್ಲ.

ಒಂದು ನೇಮಕಾತಿ ಅಧಿಸೂಚನೆ ಹೊರಡಿಸಬೇಕಾದರೆ ಎಷ್ಟೋ ಪೂರ್ವ ತಯಾರಿಯ ಹಂತಗಳನ್ನು ಅದು ದಾಟಿಕೊಂಡು ಬರಬೇಕು. ಪರೀಕ್ಷೆ ನಡೆಸುವ ಸಂಭವನೀಯ ದಿನಾಂಕ, ಹೊಸ ಉದ್ಯೋಗಿಗಳು ಎಂದಿನಿಂದ ಸೇವೆಗೆ ಲಭ್ಯವಾಗಬಹುದು ಎನ್ನುವ ಲೆಕ್ಕಾಚಾರವನ್ನು ಅದು ಒಳಗೊಂಡಿರುತ್ತದೆ. ಆದರೆ ಈಗ ಯಾವ ರೀತಿಯ ಲೆಕ್ಕಾಚಾರ ನಡೆಯುತ್ತಿದೆ ಎಂಬುದು ತಿಳಿಯುತ್ತಿಲ್ಲ. 2019, ಸಾರ್ವತ್ರಿಕ ಚುನಾವಣೆ ವರ್ಷವಾದ್ದರಿಂದ ಈ ರೀತಿಯ ನೇಮಕಾತಿ ಅಧಿಸೂಚನೆ ಹೊರಡಿಸಲಾಯಿತೇ ಎನ್ನುವ ಸಂದೇಹ ಮೂಡದೇ ಇರದು.

-ಅರವಿಂದ ಬಾಬಣ್ಣ ಬೇವಿನಗಿಡದ,ಕೋಹಳ್ಳಿ, ಅಥಣಿ

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.