ADVERTISEMENT

ವಾಚಕರ ವಾಣಿ: ಗಾಂಧೀಜಿಯನ್ನು ಅರ್ಥಪೂರ್ಣವಾಗಿ ಹಸ್ತಾಂತರಿಸೋಣ

​ಪ್ರಜಾವಾಣಿ ವಾರ್ತೆ
Published 15 ಡಿಸೆಂಬರ್ 2022, 19:31 IST
Last Updated 15 ಡಿಸೆಂಬರ್ 2022, 19:31 IST

ನಟರಾಜ್‌ ಹುಳಿಯಾರ್‌ ಅವರು ಸಂಪಾದಿಸಿರುವ ‘ಎಲ್ಲರ ಗಾಂಧೀಜಿ’ ಕೃತಿ ಬಿಡುಗಡೆ ಸಮಾರಂಭದಲ್ಲಿ ಲೇಖಕ ರಾಮಚಂದ್ರ ಗುಹಾ ಅವರು ‘ಗಾಂಧಿ ಬಗ್ಗೆ ಕೇಂದ್ರದ ಈಗಿನ ಸರ್ಕಾರದಿಂದ ಏನನ್ನೂ ನಿರೀಕ್ಷಿಸಲಾಗದು’ ಎಂದಿದ್ದಾರೆ (ಪ್ರ.ವಾ., ಡಿ. 15). ಹಾಗೆ ನೋಡಿದರೆ ಗಾಂಧೀಜಿಗೆ ರಾಜಕಾರಣಿಗಳಿಂದ ಅಂದಿನಿಂದ ಇಂದಿನವರೆಗೆ ಯಾವ ಉಪಕಾರವೂ ಆಗಿಲ್ಲ. ಬದಲಾಗಿ ಅಪಚಾರವೇ ಆಗುತ್ತ ಬಂದಿದೆ. ರಾಜಕಾರಣಿಗಳು ಗಾಂಧಿ ಹೆಸರಿನಲ್ಲಿ ತಮ್ಮ ರಾಜಕೀಯ ಬೇಳೆ ಬೇಯಿಸಿಕೊಂಡು ಬಂದಿರುವರೆಂಬ ಮಾತನ್ನು ಬಿ.ಆರ್‌. ಅಂಬೇಡ್ಕರ್ ಅವರು ನೆಹರೂ ಕಾಲದಲ್ಲೇ ಹೇಳಿದ್ದರು.

ಅಲ್ಲದೆ, ಗಾಂಧಿಯವರ ಸಾರ್ವಕಾಲಿಕವಾದ ವಿಚಾರಗಳಿಗೆ ರಾಜಕಾರಣಿಗಳ ಪೋಷಣೆ, ಪ್ರಚಾರಗಳ ಅವಶ್ಯಕತೆಯೂ ಇಲ್ಲ. ರಾಜಕಾರಣಿಗಳು ಧರ್ಮವನ್ನು ಉದ್ಧಾರ ಮಾಡುವುದಾಗಿ ಹೇಳಿಕೊಂಡು ಧರ್ಮವನ್ನು ಭ್ರಷ್ಟಗೊಳಿಸಿದ್ದಾಯಿತು. ರಾಜಕಾರಣಿಗಳ ಹಸ್ತಕ್ಷೇಪದಿಂದ ಧರ್ಮ, ವಿಜ್ಞಾನ, ತಂತ್ರಜ್ಞಾನ, ಚರಿತ್ರೆ, ಆಡಳಿತ ಎಲ್ಲವೂ ಅಪಾಯಕಾರಿಯಾಗಿ ಪರಿಣಮಿಸುತ್ತವೆಂಬ ಪಾಠವನ್ನು ಈಗಾಗಲೇ ಇತಿಹಾಸದಿಂದ ಕಂಡರಿತಿದ್ದೇವೆ. ಗಾಂಧಿಯನ್ನಾದರೂ ಮುಂದಿನ ತಲೆಮಾರಿಗೆ ಜೀವಂತವಾಗಿ, ಯಥಾರ್ಥವಾಗಿ ಹಸ್ತಾಂತರಿಸಬೇಕಾಗಿದೆ. ಈ ಹಿನ್ನೆಲೆಯಲ್ಲಿ ಬುದ್ಧಿಜೀವಿಗಳು ಗಾಂಧಿಯನ್ನು ಉದ್ಧಾರ ಮಾಡಬೇಕೆಂಬ ತರಹದ ಸಲಹೆಗಳನ್ನು ರಾಜಕಾರಣಿಗಳಿಗೆ ನೀಡುವುದನ್ನು ನಿಲ್ಲಿಸಿದರೆ ಮಹದುಪಕಾರವಾಗುತ್ತದೆ.

⇒ಡಾ. ಟಿ.ಎನ್‌.ವಾಸುದೇವಮೂರ್ತಿ,ಬೆಂಗಳೂರು

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.