ಕರ್ನಾಟಕ ಲೋಕಸೇವಾ ಆಯೋಗವು (ಕೆಪಿಎಸ್ಸಿ) ಸಹಾಯಕ ತೋಟಗಾರಿಕೆ ಅಧಿಕಾರಿಗಳ ನೇಮಕಾತಿಗಾಗಿ ಡಿಸೆಂಬರ್ 16 ಮತ್ತು 17ರಂದು ನಡೆಸಿದ ಪರೀಕ್ಷೆಯಲ್ಲಿ ಕಲಬುರ್ಗಿ ಪರೀಕ್ಷಾ ಕೇಂದ್ರದಲ್ಲಿ ಸಾಮೂಹಿಕ ನಕಲು ಮತ್ತು ಮೊಬೈಲ್ ಬಳಸಿ ಪರೀಕ್ಷೆ ಬರೆದ ಆರೋಪ ಕೇಳಿಬಂದಿದೆ. ಇದನ್ನು ಬಹಿರಂಗವಾಗಿ ಹೇಳಲು ಅಭ್ಯರ್ಥಿಗಳು ಹೆದರುತ್ತಿದ್ದಾರೆ. ಇಂತಹ ಕೃತ್ಯ ನಿಜವಾಗಲೂ ನಡೆದಿದ್ದರೆ ವಿಪರ್ಯಾಸವೇ ಸರಿ. ಹಾಗೆ ನಡೆದಿರಬಹುದು ಎಂಬುದಕ್ಕೆ ಪುಷ್ಟಿ ನೀಡಲು ಕೆಲವು ಸಾಕ್ಷ್ಯಾಧಾರಗಳು ಸಿಗುತ್ತವೆ.
ಎಸ್ಎಸ್ಎಲ್ಸಿ ಮತ್ತು ಪಿಯುಸಿ ಪರೀಕ್ಷೆಗಳಲ್ಲಿ ಪಾರದರ್ಶಕತೆ ಕಾಪಾಡಲು ಪರೀಕ್ಷಾ ಕೊಠಡಿಗಳಲ್ಲಿ ಸಿ.ಸಿ ಟಿ.ವಿ ಕ್ಯಾಮೆರಾ ಅಳವಡಿಸುವ ಈ ದಿನಗಳಲ್ಲಿ, ಒಬ್ಬ ವ್ಯಕ್ತಿಯ ಜೀವನೋಪಾಯದ ದಾರಿಯಾದ ಸರ್ಕಾರಿ ಹುದ್ದೆಯಂತಹ ನಿರ್ಣಾಯಕ ಪರೀಕ್ಷೆಯಲ್ಲಿ ಮುಂಜಾಗ್ರತಾ ಕ್ರಮವಾಗಿ ಸಿ.ಸಿ ಟಿ.ವಿ ಕ್ಯಾಮೆರಾ ಅಳವಡಿಸದೇ ಇದ್ದುದು, ಪರೀಕ್ಷೆ ಬರೆಯಲು ಮೊಬೈಲ್ ಬಳಕೆಗೆ ಅವಕಾಶ ಕೊಟ್ಟು ಪಾರದರ್ಶಕತೆ ಕಾಯ್ದುಕೊಳ್ಳದೇ ಹೋದುದು ಪೂರ್ವಯೋಜಿತ ಅಕ್ರಮ ಎಂಬಂತೆ ತೋರುತ್ತದೆ. ಇಲ್ಲಿ ಗಮನಿಸಬೇಕಾದ ಮತ್ತೊಂದು ಅಂಶ ಎಂದರೆ, ಬೆಂಗಳೂರು, ಮೈಸೂರಿನಲ್ಲಿ ವಾಸವಿರುವ ಹಾಗೂ ಈ ಊರುಗಳಲ್ಲೇ ಉನ್ನತ ಶಿಕ್ಷಣ ಪಡೆಯುತ್ತಾ ಅಥವಾ ಇತರ
ಹುದ್ದೆಗಳಲ್ಲಿ ಕಾರ್ಯ ನಿರ್ವಹಿಸುತ್ತಾ ಇರುವ ಅಭ್ಯರ್ಥಿಗಳು ಕಲಬುರ್ಗಿ ಪರೀಕ್ಷಾ ಕೇಂದ್ರವನ್ನು ಆಯ್ಕೆ ಮಾಡಿಕೊಂಡಿರುವುದು. ಇದು ಅಕ್ರಮದ ಆರೋಪಕ್ಕೆ ಮತ್ತಷ್ಟು ಒತ್ತು ನೀಡುತ್ತದೆ. ಈ ವಿಷಯವನ್ನು ಮುಖ್ಯಮಂತ್ರಿ ಗಂಭೀರವಾಗಿ ಪರಿಗಣಿಸಬೇಕು.
ತನಿಖೆಗೆ ಆದೇಶಿಸಬೇಕು. ಈ ಮೂಲಕ ಪ್ರಾಮಾಣಿಕ ಅಭ್ಯರ್ಥಿಗಳಿಗೆ ನ್ಯಾಯ ಒದಗಿಸಬೇಕು.
ಎಸ್.ರಫೀಕ್ ಅಹ್ಮದ್, ಬೆಂಗಳೂರು
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.