ಹಲವಾರು ವರ್ಷಗಳಿಂದ ರಾಷ್ಟ್ರ ಹಾಗೂ ರಾಜ್ಯ ಮಟ್ಟದಲ್ಲಿ ನೀಡುತ್ತಿರುವ ‘ಉತ್ತಮ ಶಿಕ್ಷಕ’ ಪ್ರಶಸ್ತಿಯ ಆಯ್ಕೆ ಪ್ರಕ್ರಿಯೆಯು ಶಿಕ್ಷಕರಿಗೆ ಅಪಮಾನ ಮಾಡುವ ರೀತಿಯದ್ದಾಗಿದೆ. ಈಗ ‘ರಾಷ್ಟ್ರಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿ’ಗೆ ಅರ್ಜಿ ಆಹ್ವಾನಿಸಲಾಗಿದೆ. ಪ್ರಶಸ್ತಿ ಪಡೆಯುವ ಇಚ್ಛೆ ಇರುವ ಶಿಕ್ಷಕರು ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ. ಹತ್ತಾರು ವರ್ಷ ಕಷ್ಟ ಕಾರ್ಪಣ್ಯಗಳ ನಡುವೆ ಪಾಠ ಹೇಳಿ ಸಾವಿರಾರು ವಿದ್ಯಾರ್ಥಿಗಳ ಬದುಕಿನಲ್ಲಿ ದೀಪ ಹಚ್ಚಿದ ಶಿಕ್ಷಕರು ‘ನನ್ನನ್ನು ಉತ್ತಮ ಶಿಕ್ಷಕ ಎಂದು ಆಯ್ಕೆ ಮಾಡಿ’ ಎಂದು ಕೇಳಿಕೊಳ್ಳುವುದು ಎಷ್ಟು ಸರಿ?
ಇತ್ತೀಚಿನ ವರ್ಷಗಳಲ್ಲಿ ಹೀಗೆ ಪ್ರಶಸ್ತಿಗೆ ಅರ್ಜಿ ಹಾಕಿ ತಮ್ಮ ಜಾತಿಯ ಪ್ರಭಾವಿಗಳ ಮನೆಬಾಗಿಲಲ್ಲಿ ನಿಲ್ಲುವ ಸ್ಥಿತಿ ಎದುರಾಗಿದೆ. ಜಾತ್ಯತೀತ ಮೌಲ್ಯಗಳನ್ನು ಮಕ್ಕಳಿಗೆ ಹೇಳಿಕೊಟ್ಟ ಶಿಕ್ಷಕಿ, ಶಿಕ್ಷಕ ಹೀಗೆ ಕೊನೆಯಲ್ಲಿ ಪ್ರಶಸ್ತಿಯ ಆಸೆಗಾಗಿ ತಮ್ಮ ಜಾತಿಯ ವಿಷವರ್ತುಲದಲ್ಲಿ ನಿಲ್ಲುವುದು ಕ್ರೌರ್ಯ. ಆದ್ದರಿಂದ ಪ್ರಶಸ್ತಿ ನೀಡುವ ಇಲಾಖೆಗಳು ಆಯ್ಕೆ ಪ್ರಕ್ರಿಯೆಯನ್ನು ಬದಲಿಸಿ, ಸಮಿತಿಗಳನ್ನು ರಚಿಸಿ ಆಯ್ಕೆ ಮಾಡುವುದು ಸೂಕ್ತ.
–ಹುಲಿಕುಂಟೆ ಮೂರ್ತಿ, ಬೆಂಗಳೂರು
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.