ADVERTISEMENT

ವಾಚಕರ ವಾಣಿ: ಏನು ಸಂದೇಶ ರವಾನೆಯಾಗುತ್ತದೆ?

​ಪ್ರಜಾವಾಣಿ ವಾರ್ತೆ
Published 29 ನವೆಂಬರ್ 2021, 19:30 IST
Last Updated 29 ನವೆಂಬರ್ 2021, 19:30 IST

ಟೀಕೆಗಳಿಗೆ ಹೆದರದೇ ಮುಂದಡಿ ಇಡಬೇಕು ಎಂದು ತಮ್ಮ ಲೇಖನದಲ್ಲಿ (ಸಂಗತ, ನ. 29) ಹೇಳಿರುವ ಮಲ್ಲಿಕಾರ್ಜುನ ಹೆಗ್ಗಳಗಿ ಅವರು, ಪ್ರಧಾನಿ ನರೇಂದ್ರ ಮೋದಿ ಅವರು ಇತ್ತೀಚೆಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಬಿಟ್‌ಕಾಯಿನ್‌ ವಿಚಾರವಾಗಿ ತಲೆಕೆಡಿಸಿಕೊಳ್ಳಬೇಡಿ ಎಂದು ಹೇಳಿರುವುದನ್ನು ಉದಾಹರಿಸಿದ್ದಾರೆ. ಆದರೆ ಪ್ರಧಾನಿಯವರು ಈ ರೀತಿ ಹೇಳಿರುವುದು ಸರಿ ಅಲ್ಲವೇನೋ ಎಂದೆನಿಸುವುದಿಲ್ಲವೇ?! ಜನಪ್ರತಿನಿಧಿಗಳು ತಮ್ಮ ಮೇಲೆ ಆರೋಪ ಬಂದಾಗ ತಾವು ‘ನಿರಪರಾಧಿಗಳು’ ಎಂಬುದನ್ನು ಸಾಬೀತುಪಡಿಸಲು ಏನು ಬೇಕೋ ಅದನ್ನೆಲ್ಲಾ ಮಾಡಬೇಕೇ ವಿನಾ ಅದಕ್ಕೆ ತಲೆಕೆಡಿಸಿಕೊಳ್ಳದೇ ಮುನ್ನಡೆದರೆ ಜನರಿಗೆ ಏನು ಸಂದೇಶ ರವಾನೆ ಯಾಗುತ್ತದೆ? ಹಿಂದೆ ರಾಮಕೃಷ್ಣ ಹೆಗಡೆ ಅವರು ಮುಖ್ಯಮಂತ್ರಿಯಾಗಿದ್ದಾಗ ಅವರ ಮೇಲೆ ಎರಡು ಹಗರಣಗಳ ಆರೋಪ ಕೇಳಿಬಂತು. ತಕ್ಷಣ ಹೆಗಡೆ ಅವರು ರಾಜೀನಾಮೆ ನೀಡಿ ಜನರ ಬಳಿಗೆ ಹೋದರು. ಜನ ಅವರನ್ನು ಅಧಿಕ ಬೆಂಬಲದಿಂದ ಮತ್ತೆ ಆರಿಸಿದರು. ಇದು ರಾಜಕೀಯ ಮುತ್ಸದ್ದಿತನದ ಒಂದು ಮುಖ. ಏನೇ ಆದರೂ ತಲೆ ಕೆಡಿಸಿಕೊಳ್ಳ ಬೇಡಿ ಅಂದರೆ ಅದರ ಅರ್ಥ ಏನು?!

-ಚಾವಲ್ಮನೆ ಸುರೇಶ್ ನಾಯಕ್, ಹಾಲ್ಮತ್ತೂರು, ಕೊಪ್ಪ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT