ಬೆಂಗಳೂರಿನಲ್ಲಿ ಮಂಗಳವಾರ ನಡೆದ ವಾಲ್ಮೀಕಿ ಸಮಾಜದ ಬೃಹತ್ ಸಮಾವೇಶ ಚರಿತ್ರಾರ್ಹವಾದುದು. ವಾಲ್ಮೀಕಿ ಗುರುಪೀಠದ ಪ್ರಸನ್ನಾನಂದಪುರಿ ಸ್ವಾಮೀಜಿ ಪಾದಯಾತ್ರೆ ಕೈಗೊಂಡು ಜನಜಾಗೃತಿ ಮೂಡಿಸಿ, ಸ್ಫೂರ್ತಿ ತುಂಬಿ, ಹೊಸ ಇತಿಹಾಸ ನಿರ್ಮಿಸಿದ್ದು ಅಭಿನಂದನಾರ್ಹ. ಸಮಾಜದ ಭವಿಷ್ಯ ಉಜ್ವಲವಾಗಬೇಕೆಂಬ ಉತ್ಕಟತೆಯಿಂದ ಮಾಡಿದ ಅವರ ಭಾಷಣ ಓದಿದೆ (ಪ್ರ.ವಾ., ಜೂನ್ 26).
ಶ್ರೀಗಳವರ ಕಳಕಳಿ ಸಾಧುವಾದದ್ದು. ಆದರೆ ಅವರ ಕೆಲವು ಮಾತುಗಳಲ್ಲಿ ಆಕ್ರೋಶವಿತ್ತು, ಔಚಿತ್ಯ ಇರಲಿಲ್ಲ. ಅದರಲ್ಲಿಯೂ‘ನಾವು ಹೇಳಿದರೆ ಕುಮಾರಸ್ವಾಮಿಯೂ ಕೇಳಬೇಕು, ಅವರ ಅಪ್ಪನೂ ಕೇಳಬೇಕು. ನಮ್ಮ ಶಾಸಕರು ರಾಜೀನಾಮೆ ಕೊಟ್ಟರೆ ಕುಮಾರಸ್ವಾಮಿ ಗೊಟಕ್ ಎಂದುಬಿಡ್ತಾರೆ’ ಎಂಬ ಅಹಂಕಾರದಿಂದ ಕೂಡಿದ ಹೇಳಿಕೆಯಿಂದ ಪಾದಯಾತ್ರೆಯ ಮತ್ತು ಅದ್ಭುತ ಬೃಹತ್ ಸಮಾವೇಶದ ಘನತೆ, ಗಾಂಭೀರ್ಯವು ಕೊಚ್ಚಿ ಹೋಯಿತು. ಸರ್ಕಾರದ ಧೋರಣೆಯನ್ನು ಪ್ರಶ್ನಿಸುವ ಹಕ್ಕನ್ನು ಹರಿತವಾಗಿ ಮಂಡಿಸುವ ವಿಧಾನವಿದೆ. ತಮ್ಮ ನಡೆನುಡಿಯಲ್ಲಿ ಮಾದರಿಯಾಗಬೇಕಾದ ಗೌರವಾರ್ಹರು ಹೀಗೆ ತೂಕ ತಪ್ಪಿದ್ದು ಆಘಾತಕಾರಿಯಾದುದು.
– ಪ್ರೊ. ಹಂಪ ನಾಗರಾಜಯ್ಯ,ಬೆಂಗಳೂರು
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.