ವಂದೇ ಭಾರತ್ ಎಕ್ಸ್ಪ್ರೆಸ್ ರೈಲು ಬೆಂಗಳೂರಿನಿಂದ 10.30ಕ್ಕೆ ಹೊರಟು ಒಂದೂ ಮುಕ್ಕಾಲು ಗಂಟೆಯಲ್ಲಿ ತನ್ನ ಅಂತಿಮ ಗುರಿ ಮುಟ್ಟಿರುವುದು ಸಮಾಧಾನಕರ ಸಂಗತಿ. ಇದಕ್ಕೆ ಸಂಬಂಧಿಸಿದಂತೆ ನನ್ನ ಹಳೆಯ ಪ್ರಯಾಣದ ಅನುಭವವೊಂದು ಇಲ್ಲಿ ಉಲ್ಲೇಖಾರ್ಹ.
1974ರ ಯುಗಾದಿಯಂದು ಬೆಂಗಳೂರಿನ ಕಲಾಸಿಪಾಳ್ಯದ ಖಾಸಗಿ ಬಸ್ ನಿಲ್ದಾಣದಿಂದ ಅಂದೇ ಚಾಲನೆಗೆ ಬಿಟ್ಟಿದ್ದ ‘ವಿನಾಯಕ’ ಬಸ್ ಏರಿದೆ. ಬಸ್ ಸರಿಯಾಗಿ ಒಂದೂಮುಕ್ಕಾಲು ಗಂಟೆಯಲ್ಲಿ ಮೈಸೂರು ತಲುಪಿತು. ಅಂದಿನ ಬಸ್ ದರ ₹ 4.50 ಆಗಿತ್ತು. ಹಿಂದಿನ ದರ ₹ 4 ಇತ್ತು. 50 ಪೈಸೆ ದರ ಹೆಚ್ಚಿಸಿದ್ದಕ್ಕೆ ಪ್ರಯಾಣಿಕರೊಬ್ಬರು ನಿರ್ವಾಹಕರೊಂದಿಗೆ ಜಗಳಕ್ಕೆ ಬಿದ್ದರು. ನಾನೂ ಸೇರಿದಂತೆ ಕೆಲವರು ಅವರ ಪರವಾಗಿ ನಿಂತೆವು. ಕೊನೆಗೂ ಜಗಳ ಬಗೆ ಹರಿಯದಿದ್ದಾಗ ಆ ಪ್ರಯಾಣಿಕನಿಗೆ ಆತನ ಹೆಚ್ಚುವರಿ 50 ಪೈಸೆಯನ್ನು ನಾನೇ ಕೊಡಲು ಮುಂದಾದೆ. ಆಗ ಆತ ತಾರಕ ಧ್ವನಿಯಲ್ಲಿ ‘ಇವತ್ತೇನೋ ನೀವು ಕೊಡ್ತೀರಿ. ದಿನಾ ನೀವೇ ಕೊಡ್ತೀರಾ’ ಎಂದು ಸಿಟ್ಟಿನಿಂದ ಪ್ರಶ್ನಿಸಿದರು. ಈಗ ವಂದೇ ಭಾರತ್ನ ಕನಿಷ್ಠ ಪ್ರಯಾಣ ದರ ₹ 368. ಸಾಮಾನ್ಯ ಜನರು ಈ ರೈಲಿನಲ್ಲಿ ಪ್ರಯಾಣಿಸುವುದಾದರೂ ಹೇಗೆ?
–ಹೊರೆಯಾಲ ದೊರೆಸ್ವಾಮಿ, ಮೈಸೂರು
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.