ADVERTISEMENT

ವಾಚಕರ ವಾಣಿ: ಆಹಾರ ‍‍ಪೋಲು ಪ್ರತಿಷ್ಠೆಯಲ್ಲ

​ಪ್ರಜಾವಾಣಿ ವಾರ್ತೆ
Published 19 ಅಕ್ಟೋಬರ್ 2020, 19:30 IST
Last Updated 19 ಅಕ್ಟೋಬರ್ 2020, 19:30 IST

ವಿಶ್ವ ಆಹಾರ ದಿನವನ್ನು ಶುಕ್ರವಾರವಷ್ಟೇ (ಅ. 16) ಆಚರಿಸಿದ್ದೇವೆ. ನಾವೆಲ್ಲರೂ ಆಹಾರವನ್ನು ಪೋಲು ಮಾಡಬಾರದೆಂದು ಪಣ ತೊಡಬೇಕಾದ ಸಂದರ್ಭ ಇದಾಗಿದೆ. ಎಷ್ಟೋ ಸಮಾರಂಭಗಳಲ್ಲಿ ಜನ ತಾವು ಊಟ ಮಾಡಿದ ಎಲೆಯ ಮೇಲೆ ಆಹಾರವನ್ನು ಹಾಗೇ ಉಳಿಸುತ್ತಾರೆ. ಮನೆಗೆ ಬರುವ ಅತಿಥಿಗಳಲ್ಲಿ ಹಲವರು, ತಿನ್ನಲು ಕೊಡುವ ಪದಾರ್ಥಗಳನ್ನು ಪೂರ್ತಿಯಾಗಿ ತಿನ್ನುವುದೇ ಇಲ್ಲ. ಅಲ್ಪಸ್ವಲ್ಪವನ್ನು ಹಾಗೆಯೇ ಉಳಿಸುವುದನ್ನು ಕೆಲವರು ನಿಯಮವೆಂಬಂತೆ ಪಾಲಿಸುತ್ತಾರೆ. ಪೂರ್ಣ ಖಾಲಿ ಮಾಡಿದರೆ ಎಲ್ಲಿ ತಮ್ಮನ್ನು ತಪ್ಪಾಗಿ ತಿಳಿದುಕೊಳ್ಳುತ್ತಾರೋ ಎಂಬ ಆತಂಕ ಇದರ ಹಿಂದೆ ಇರುತ್ತದೆ. ಇದಕ್ಕೆಲ್ಲ ಸಲ್ಲದ ಪ್ರತಿಷ್ಠೆ ಕಾರಣವೇ ಹೊರತು ಬೇರೇನೂ ಅಲ್ಲ.

ಆಹಾರ ಪದಾರ್ಥಗಳನ್ನು ಬೆಳೆಯುವ ರೈತ ಮಾತ್ರ ಪ್ರತೀ ಕಾಳನ್ನೂ ಸಂಗ್ರಹಿಸಿ ಜೋಪಾನ ಮಾಡುತ್ತಾನೆ. ಏಕೆಂದರೆ ಅದರ ಬೆಲೆ ಅವನಿಗೆ ಅಮೂಲ್ಯ. ಹಣ ಕೊಟ್ಟು ಕೊಂಡುಕೊಂಡ ನಾವು ಅದರ ಮೌಲ್ಯ ತಿಳಿಯದೆ ಹಾಳು ಮಾಡುತ್ತೇವೆ. ಮಕ್ಕಳಿಗೆ ಎಳವೆಯಲ್ಲಿಯೇ ಆಹಾರದ ಮೌಲ್ಯವನ್ನು ಮನದಟ್ಟು ಮಾಡಿಸಬೇಕು. ತಟ್ಟೆಯಲ್ಲಿನ ಆಹಾರವನ್ನು ಪೂರ್ತಿ ಖಾಲಿ ಮಾಡಿದ ಮೇಲೆಯೇ ಕೈ ತೊಳೆಯಲು ಅವಕಾಶ ಮಾಡಿಕೊಡಬೇಕು. ಹೀಗೆ ಪ್ರತಿದಿನವೂ ಅಭ್ಯಾಸ ಮಾಡಿಸಿದರೆ ಅವರು ಅದನ್ನೇ ರೂಢಿಸಿಕೊಳ್ಳುತ್ತಾರೆ. ಆಹಾರವು ಪೋಲಾಗದೇ ಇರುವುದಕ್ಕೆ ಇದು ನಮ್ಮ ಮಹತ್ವದ ಕೊಡುಗೆಯೇ ಆಗಿರುತ್ತದೆ.

-ಮಲ್ಲಿಕಾರ್ಜುನ ಸಾಗರ್ ಜಿ.ಆರ್., ಕಳಸ, ಮೂಡಿಗೆರೆ

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.