ADVERTISEMENT

ನೀರಿನ ಸಂರಕ್ಷಣೆ

​ಪ್ರಜಾವಾಣಿ ವಾರ್ತೆ
Published 19 ಸೆಪ್ಟೆಂಬರ್ 2018, 19:30 IST
Last Updated 19 ಸೆಪ್ಟೆಂಬರ್ 2018, 19:30 IST
   

ನಮ್ಮ ಬದುಕಿನಲ್ಲಿ ನೀರು ಅತಿ ಮುಖ್ಯವಾದ ಪಾತ್ರ ವಹಿಸುತ್ತದೆ. ಆದರೆ ಅದರ ಮಹತ್ವವನ್ನು ಜನಸಾಮಾನ್ಯರಿಗೆ ಮನದಟ್ಟು ಮಾಡಿಸುವಲ್ಲಿ ನಮ್ಮ ವ್ಯವಸ್ಥೆ ಸೋತಿದೆ. ಕೆರೆ, ತೊರೆ, ನಾಲೆ, ಬಾವಿ ಮೊದಲಾದ ನೀರಿನ ಮೂಲಗಳ ಸಂರಕ್ಷಣೆಗೆ ನೀಡಬೇಕಾದ ಮಹತ್ವ ನೀಡಲಿಲ್ಲ. ಅದರ ಪರಿಣಾಮವನ್ನು ಈಗ ಎದುರಿಸುತ್ತಿದ್ದೇವೆ. ಬಯಲುಸೀಮೆಯ ಕೆಲವು ಜಿಲ್ಲೆಗಳಲ್ಲಿ ಅಂತರ್ಜಲ ಮಟ್ಟ ದಿನೇ ದಿನೇ ಕುಸಿಯುತ್ತಲೇ ಇದೆ. ಆದರೂ ನಾವು ಎಚ್ಚೆತ್ತುಕೊಂಡಿಲ್ಲ ಎಂಬುದು ನೋವಿನ ಸಂಗತಿ.

ನೀರಿನ ಅಭಾವ ಉಂಟಾಗಲು ಮನುಷ್ಯನ ಸ್ವಾರ್ಥವೇ ಕಾರಣ. ಅಭಿವೃದ್ಧಿಯ ಹೆಸರಲ್ಲಿ ಅರಣ್ಯನಾಶ, ಗಣಿಗಾರಿಕೆ, ಕಾಂಕ್ರೀಟೀಕರಣ ಮಿತಿ ಮೀರಿದೆ. ವರ್ಷದಿಂದ ವರ್ಷಕ್ಕೆ ವರ್ಷಧಾರೆಯ ಪ್ರಮಾಣ ಇಳಿಮುಖವಾಗುತ್ತಿದೆ. ಬಿಸಿಲ ಧಗೆ ಏರುತ್ತಲೇ ಇದೆ. ಮಳೆ ಬಂದರೂ ಅದು ಅಕಾಲ ಮಳೆಯಾಗಿರುತ್ತದೆ. ಕೆಲವೊಮ್ಮೆ ಪ್ರವಾಹವನ್ನೇ ಸೃಷ್ಟಿಸಿ ಅನಾಹುತ ಉಂಟುಮಾಡುತ್ತಿದೆ. ನೈಸರ್ಗಿಕವಾಗಿ ಸಿಗುತ್ತಿದ್ದ ನೀರು ಇಂದು ಬಾಟಲಿಯಲ್ಲಿ ಭದ್ರವಾಗುತ್ತಿದೆ. ಅದರ ಬೆಲೆಯೂ ದಿನೇ ದಿನೇ ಏರುತ್ತಿದೆ. ‘ನೀರಿನ ಸಮಸ್ಯೆ ಕಂಡುಬಂದರೆ ನೇಣಿಗಾಕ್ತೀನಿ’ ಎಂದು ಅಧಿಕಾರಿಗಳನ್ನು ಉಪಮುಖ್ಯಮಂತ್ರಿ ಎಚ್ಚರಿಸಿದ್ದಾರೆ. ಈ ಬಗೆಯ ಮಾತು ಒಪ್ಪುವಂತಹುದಲ್ಲ. ನೀರಿನ ಸಂರಕ್ಷಣೆ ಬಗ್ಗೆ ಮೊದಲು ನಮ್ಮ ಜನಪ್ರತಿನಿಧಿಗಳು ಬದ್ಧತೆ ತೋರಿಸಬೇಕಿದೆ. ಮಳೆನೀರು ಸಂಗ್ರಹಕ್ಕೆ ಒತ್ತು ನೀಡಬೇಕಾಗಿದೆ. ನೀರಿನ ಮಿತಬಳಕೆ ಬಗ್ಗೆ ಅರಿವು ಮೂಡಿಸುವ ಕಾರ್ಯಕ್ರಮಗಳನ್ನು
ರೂಪಿಸಬೇಕಿದೆ.

ಸಂಗೀತಾ ಎಸ್., ಕೊಕ್ರಾಡಿ

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.