ADVERTISEMENT

ರಾಜಕಾರಣಿಗಳಿಗೆ ವಿಭಜನೆಯ ಚಿಂತೆ ಏಕೆ?

​ಪ್ರಜಾವಾಣಿ ವಾರ್ತೆ
Published 16 ಅಕ್ಟೋಬರ್ 2019, 19:30 IST
Last Updated 16 ಅಕ್ಟೋಬರ್ 2019, 19:30 IST

ನಮ್ಮ ರಾಜಕಾರಣಿಗಳು ಇತ್ತೀಚಿನ ದಿನಗಳಲ್ಲಿ ಅಭಿವೃದ್ಧಿ ಕಾರ್ಯಗಳಿಗಿಂತ ಹೆಚ್ಚಾಗಿ ಜಿಲ್ಲೆಗಳ ವಿಭಜನೆಯ ಜಪ ಮಾಡುತ್ತಿರುವುದು ವಿಚಿತ್ರವಾಗಿದೆ. ಮೊನ್ನೆ ವಿಧಾನ ಪರಿಷತ್ ಸದಸ್ಯ ಬಸವರಾಜ ಹೊರಟ್ಟಿ ಅವರು ಕಿತ್ತೂರು ಕರ್ನಾಟಕದ ಜಪ ಮಾಡಿದರೆ, ಈಗ ಅನರ್ಹ ಶಾಸಕ ಎಚ್.ವಿಶ್ವನಾಥ್ ಅವರು ಮೈಸೂರು ಜಿಲ್ಲೆಯನ್ನು ವಿಭಜಿಸಿ ಹುಣಸೂರನ್ನು ಕೇಂದ್ರ ಮಾಡಿ, ದೇವರಾಜ ಅರಸು ಹೆಸರಿನಲ್ಲಿ ಪ್ರತ್ಯೇಕ ಜಿಲ್ಲೆ ರಚಿಸುವ ಬೇಡಿಕೆಯನ್ನು ಮುಖ್ಯಮಂತ್ರಿ ಬಳಿ ಸಲ್ಲಿಸಿದ್ದಾರೆ (ಪ್ರ.ವಾ., ಅ. 15).

ರಾಜ್ಯವು ಆರ್ಥಿಕ ಸಂಕಷ್ಟ ಎದುರಿಸುತ್ತಿರುವ ಈ ಸಂದರ್ಭದಲ್ಲಿ, ನೆರೆ ಸಂತ್ರಸ್ತರಿಗೆ ನೆರವು ನೀಡಲು ಸರ್ಕಾರ ಪರದಾಡುತ್ತಿದೆ. ಅವರಿಗೆ ನೆಲೆ ಕಲ್ಪಿಸುವ ಕಾರ್ಯ ಮಾಡಬೇಕಾಗಿದೆ. ಇಂತಹ ಸಂದರ್ಭದಲ್ಲಿ ಹೊಟ್ಟೆಗೆ
ಹಿಟ್ಟಿಲ್ಲದಿದ್ದರೂ ಜುಟ್ಟಿಗೆ ಮಲ್ಲಿಗೆ ಹೂವು ಎಂಬ ಗಾದೆಯಂತೆ ರಾಜಕಾರಣಿಗಳಿಗೆ ಜಿಲ್ಲೆ ವಿಭಜನೆಯ ಚಿಂತೆ ಏಕೆ?

ಒಂದು ಜಿಲ್ಲೆ ಮಾಡಬೇಕಾದರೆ ಕೋಟ್ಯಂತರ ರೂಪಾಯಿ ಬೇಕಾಗುತ್ತದೆ. ಹಲವಾರು ಕಚೇರಿಗಳು, ಜಿಲ್ಲಾಧಿಕಾರಿ ಸೇರಿದಂತೆ ಹೆಚ್ಚಿನ ಸಿಬ್ಬಂದಿ, ಅವರ ಸಂಬಳ ವಗೈರೆ ಇತ್ಯಾದಿಗೆ ಕೋಟಿ, ಕೋಟಿ ರೂಪಾಯಿಯ ಹೊರೆ ರಾಜ್ಯ ಸರ್ಕಾರದ ಮೇಲೆ ಬೀಳುತ್ತದೆ. ಒಟ್ಟಾರೆ, ಎಲ್ಲ ಶಾಸಕರೂ ಮಂತ್ರಿಯಾಗಬೇಕೆಂಬ ಹೆಬ್ಬಯಕೆ ಮುಂದಿಡುವಂತೆ, ಎಲ್ಲ ತಾಲ್ಲೂಕುಗಳನ್ನೂ ಜಿಲ್ಲೆಗಳನ್ನಾಗಿ ಮಾಡಿ ಎಂಬ ಬೇಡಿಕೆ ಮುಂದಿನ ದಿನಗಳಲ್ಲಿ ರಾಜಕಾರಣಿಗಳಿಂದ ಬಂದರೂ ಆಶ್ಚರ್ಯವಿಲ್ಲ.

ADVERTISEMENT

ಸಿ.ಸಿದ್ಧರಾಜು ಆಲಕೆರೆ, ಮಂಡ್ಯ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.