ಸಂಸತ್ತಿನಲ್ಲಿ ವಿಸ್ತೃತ ಚರ್ಚೆ ಇಲ್ಲದೆ ಕೃಷಿ ಕಾಯ್ದೆಗಳನ್ನು ಹಿಂಪಡೆದದ್ದು ಒಂದರ್ಥದಲ್ಲಿ ಎಡವಿದ್ದನ್ನು ಮತ್ತೆ ಎಡವಿದಂತೆ! ಬಹುಶಃ ಪ್ರಸ್ತುತ ಕಾಯ್ದೆಗಳ ಪಾರ್ಶ್ವಪರಿಣಾಮಗಳನ್ನು ಸದಾ ಮಣ್ಣಿನ ನಂಟಿನಲ್ಲಿರುವ ರೈತ ಅರಿತಂತೆ, ಕಾಯ್ದೆಯ ನಿರ್ಮಾತೃಗಳು ಅರಿಯದಿರಬಹುದು. ಚರ್ಚೆ ನಡೆದಿದ್ದರೆ ಅದರ ನಿಖರ ಅರಿವು ಸರ್ಕಾರಕ್ಕೆ ಬರುತ್ತಿತ್ತೇನೋ. ಅದೂ ಅಲ್ಲದೆ, ಕೃಷಿಗೆ ಸಂಬಂಧಪಟ್ಟ ಇನ್ನೂ ಹೆಚ್ಚಿನ ಆಂತರಿಕ ಸುಧಾರಣೆಯ ಹೊಳಹು ಫಲಿಸ ಬಹುದಿತ್ತು.
ಕನಿಷ್ಠ ಬೆಂಬಲ ಬೆಲೆ ಒಳಗೊಂಡು ಆಗಲೇ ಇರುವ ಎಪಿಎಂಸಿ ವ್ಯವಸ್ಥೆಯ ಕುಂದುಕೊರತೆಗಳನ್ನು ತಿದ್ದುವ ಕಡೆ ಯೋಚಿಸಬಹುದಾಗಿತ್ತು. ತನ್ಮೂಲಕ ರೈತರ ವಿಶ್ವಾಸಾರ್ಹತೆ ತಿಲಮಾತ್ರದಷ್ಟಾದರೂ ದಕ್ಕುತ್ತಿತ್ತೇನೊ. ಕುತ್ತಿಗೆಗೆ ಬಂದಿದ್ದ ಕಂಟಕವನ್ನು ಸದ್ಯಕ್ಕೆ ನಿವಾರಿಸಿಕೊಂಡ ರೈತ ಮಾತ್ರ ಇನ್ನೂ ಇದ್ದಲ್ಲೇ ಇದ್ದಾನೆ. ‘ಕಾಯ್ದೆ ಒಳ್ಳೆಯವು, ಅರ್ಥೈಸಲು ಅಸಮರ್ಥರಾದೆವು’ ಎಂದೆನ್ನುವ ಸರ್ಕಾರಕ್ಕೆ, ಈ ಸಮರ್ಥನೆ ರೈತರ ಕಿರುನೆಮ್ಮದಿಯನ್ನೇ ಸಣ್ಣಗೆ ಅಲುಗಿಸುತ್ತದೆ ಎಂಬ ಅರಿವು ಬಾರದ್ದು ವಿಷಾದಕರ.⇒ರಾಮಚಂದ್ರ ಎಸ್. ಕುಲಕರ್ಣಿ,ಧಾರವಾಡ
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.