ವಿಜಯಪುರ: ‘ಎಂ.ಬಿ. ಗೌಡ್ರೇ... ನಿಮ್ ರೊಕ್ಕದ ಸೊಕ್ಕು ಹೆಚ್ಚಾಗೈತಿ. ಒಂದ್ ಮಾತ್ ನೆನಪಲ್ಲಿಡ್ರೀ. ದೇಶದ ಆಗರ್ಭ ಶ್ರೀಮಂತರು ಎನಿಸಿಕೊಂಡಿದ್ದ ಟಾಟಾ, ಬಿರ್ಲಾ ಅಂತಹವರೇ ಗಪ್ ಕೂತವ್ರೇ. ನಿಮ್ದು ಇನ್ನೆಷ್ಟ್ ದಿನ ನಡೆಯುತ್ತೆ...’
ವಿಜಯಪುರ ತಾಲ್ಲೂಕು ಬಬಲೇಶ್ವರದಲ್ಲಿ ಈಚೆಗೆ ನಡೆದ ಬಿಜೆಪಿಯ ನವ ಕರ್ನಾಟಕ ಪರಿವರ್ತನಾ ರ್ಯಾಲಿಯಲ್ಲಿ ಅಥಣಿ ಶಾಸಕ ಲಕ್ಷ್ಮಣ ಸವದಿ, ಕ್ಷೇತ್ರದ ಶಾಸಕ, ಜಿಲ್ಲಾ ಉಸ್ತುವಾರಿ ಸಚಿವ ಎಂ.ಬಿ.ಪಾಟೀಲರನ್ನು ಬಹಿರಂಗವಾಗಿ ತರಾಟೆಗೆ ತೆಗೆದುಕೊಂಡ ಪರಿಯಿದು.
‘ಸಮಾವೇಶದಲ್ಲಿ ಬಿಜೆಪಿ ಮುಖಂಡರ ಭಾಷಣ ರೆಕಾರ್ಡ್ ಮಾಡಿಸುತ್ತೇನೆ ಎಂದು ಎಂ.ಬಿ. ಗೌಡ್ರು ಹೇಳಿಕೆ ನೀಡಿದ್ದಾರೆ. ಇಂಥ ಬೆದರಿಕೆಗೆ ಬಗ್ಗೋರು ನಾವಲ್ಲ. ರೆಕಾರ್ಡ್ ಮಾಡಿಸಿ, ಬೇಕಂದ್ರೆ ಸಿ.ಸಿ.ಟಿವಿ ಕ್ಯಾಮೆರಾ ಇಟ್ಟು ನೋಡ್ಕೊಳ್ಳಿ ಗೌಡ್ರೇ’ ಎಂದು ಸವದಿ ಕಿಚಾಯಿಸುತ್ತಿದ್ದಂತೆ ನೆರೆದಿದ್ದ ಕಾರ್ಯಕರ್ತರ ಪಡೆ ಶಿಳ್ಳೆಗಳ ಸುರಿಮಳೆಗೈದಿತು.
‘ಓ ಓ... ಗೌಡ್ರು ಸಿ.ಸಿ. ಕ್ಯಾಮೆರಾನೂ ಕೂರಿಸಿದ್ದಾರಂತೆ. ಇದಕ್ಕೆಲ್ಲ ನೀವ್ ತಲೆಕೆಡಿಸಿಕೊಳ್ಳಬೇಡಿ. ಯಾರೂ ಯಾರನ್ನೂ ಏನೂ ಮಾಡಕ್ಕಾಗಲ್ಲ. ನೀವು ಧೈರ್ಯದಿಂದ ನಿಮ್ಮ ಕೈಗಳನ್ನೆತ್ತಿ ನಮಗೆ ಬೆಂಬಲ ಸೂಚಿಸಿ.
ಆಮ್ಯಾಲ ನೋಡ್ರೀ ಗೌಡ್ರ ಲೆಕ್ಕಾಚಾರನ. ಯಾಕ ಹಿಂಗಾತು. ಇದು ಹಿಂಗ್ಯಾಕಾತು ಅಂತ ಚಡಪಡಿಸೋದನ್ನ’ ಎನ್ನುತ್ತಿದ್ದಂತೆ ಸಭಾಂಗಣ ನಗೆಗಡಲಲ್ಲಿ ತೇಲಿತು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.