ವಿಜಯಪುರ: ‘ನಿಮ್ಮನ್ನು ನಂಬ್ಕೊಂಡು ಮಾತ್ ಕೊಟ್ಟಿವ್ನೀ. ನನ್ನ ಮರ್ಯಾದೆ ಕಳಿಬ್ಯಾಡ್ರೀ. ನಿಗದಿತ ದಿನದೊಳಗೆ ರಸ್ತೆ ನಿರ್ಮಿಸಿ...’
ವಿಜಯಪುರದ ಜಿಲ್ಲಾ ಪಂಚಾಯ್ತಿ ಸಭಾಂಗಣದಲ್ಲಿ ಈಚೆಗೆ ನಡೆದ ಕೆಡಿಪಿ ಸಭೆಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಎಂ.ಬಿ. ಪಾಟೀಲ ಕೆಬಿಜೆಎನ್ಎಲ್ ಅಧಿಕಾರಿಗಳಿಗೆ ತಾಕೀತು ಮಾಡಿದ ಪರಿಯಿದು.
ವಿಜಯಪುರ ತಾಲ್ಲೂಕಿನ ಕಾತ್ರಾಳ ಗ್ರಾಮಕ್ಕೆ ಕಾಲುವೆ ಪಕ್ಕ ಸಮರ್ಪಕ ರಸ್ತೆ ಇಲ್ಲದಿರುವುದರಿಂದ ಬಸ್ ಸಂಚಾರ ಆರಂಭಿಸಲು ಇದೂವರೆಗೂ ಸಾಧ್ಯವಾಗಿಲ್ಲ ಎಂದು ಎನ್ಇಕೆಆರ್ಟಿಸಿ ಅಧಿಕಾರಿಗಳು ತಿಳಿಸುತ್ತಿದ್ದಂತೆ, ಸಚಿವರು ಕೆಬಿಜೆಎನ್ಎಲ್ ಅಧಿಕಾರಿಗಳಿಗೆ ತುರ್ತಾಗಿ ರಸ್ತೆ ನಿರ್ಮಿಸುವಂತೆ ಆದೇಶಿಸಿದರು.
ಸಚಿವರ ಸೂಚನೆಗೆ ಅಧಿಕಾರಿ ಸಮ್ಮತಿ ವ್ಯಕ್ತಪಡಿಸುತ್ತಿದ್ದಂತೆ, ಮುಂಬರುವ ಜ.1ರೊಳಗೆ ರಸ್ತೆ ನಿರ್ಮಿಸಿ. ಎನ್ಇಕೆಆರ್ಟಿಸಿ ಅಧಿಕಾರಿಗಳು ಬಸ್ ಸಂಚಾರ ಆರಂಭಿಸಲಿದ್ದಾರೆ ಎಂಬ ಗಡುವನ್ನು ನಿಗದಿ ಪಡಿಸಿದರು.
ಇದಕ್ಕೆ ಎರಡೂ ಇಲಾಖೆ ಅಧಿಕಾರಿಗಳು ಆಗಲಿ ಸರ್ ಎನ್ನುತ್ತಿದ್ದಂತೆ, ಸಚಿವರು ‘ಇನ್ನೂ ಮೂರ್ ತಿಂಗ್ಳು ಟೈಮಿದೆ. ಅಷ್ಟರೊಳಗೆ ರಸ್ತೆ ನಿರ್ಮಿಸಿ. ಮಾಧ್ಯಮದವರು ಇಲ್ಲೇ ಇದ್ದಾರೆ. ಜನವರಿ 1ರಂದು ಬಸ್ ಸಂಚಾರ ಆರಂಭಗೊಳ್ಳದಿದ್ದರೆ, ‘ಸಚಿವರ ಸೂಚನೆಗೂ ಕಿಮ್ಮತ್ತಿಲ್ಲ’ ಎಂದು ಬರೆದು ನನ್ನ ಮರ್ಯಾದೆ ಹರಾಜಾಕ್ತಾರೆ ಎಂಬುದು ನೆನಪಿರಲಿ’ ಎನ್ನುತ್ತಿದ್ದಂತೆ ಸಭೆ ನಗೆಗಡಲಲ್ಲಿ ತೇಲಿತು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.