ADVERTISEMENT

ನಾಗರಿಕ–ಸೇನಾ ಸಂಬಂಧಕ್ಕೆ ಅಗ್ನಿಪರೀಕ್ಷೆ

​ಪ್ರಜಾವಾಣಿ ವಾರ್ತೆ
Published 5 ಜೂನ್ 2015, 19:30 IST
Last Updated 5 ಜೂನ್ 2015, 19:30 IST
ನಾಗರಿಕ–ಸೇನಾ ಸಂಬಂಧಕ್ಕೆ ಅಗ್ನಿಪರೀಕ್ಷೆ
ನಾಗರಿಕ–ಸೇನಾ ಸಂಬಂಧಕ್ಕೆ ಅಗ್ನಿಪರೀಕ್ಷೆ   

ಮಾಜಿ ಸೈನಿಕರಿಗೆ ‘ಒಂದು ಶ್ರೇಣಿ– ಒಂದು ಪಿಂಚಣಿ’ (ಒಆರ್‌ಒಪಿ) ಯೋಜನೆ ಜಾರಿಗೊಳಿಸುವಲ್ಲಿ ನರೇಂದ್ರ ಮೋದಿ ನೇತೃತ್ವದ ಸರ್ಕಾರ ವಿಫಲವಾಗಿದೆ ಎಂದು ಹೇಳುವ ಮೂಲಕ, ಕಾಂಗ್ರೆಸ್‌ ಉಪಾಧ್ಯಕ್ಷ ರಾಹುಲ್‌ ಗಾಂಧಿ ಮತ್ತು ಮಾಜಿ ರಕ್ಷಣಾ ಸಚಿವ ಎ.ಕೆ.ಆಂಟನಿ ಈಚೆಗೆ ವಿವಾದವೊಂದನ್ನು ಮತ್ತೆ ಕೆದಕಿದರು. ಈ ಯೋಜನೆ 24 ಲಕ್ಷಕ್ಕೂ ಹೆಚ್ಚು ಮಾಜಿ ಸೈನಿಕರು (ಇಎಸ್‌ಎಂ) ಮತ್ತು ವಾರ್ಷಿಕವಾಗಿ ಮಿಲಿಟರಿ ಸೇವೆಯಿಂದ ನಿವೃತ್ತರಾಗುವ 50 ಸಾವಿರದಷ್ಟು ಸಿಬ್ಬಂದಿ ಮೇಲೆ ಪರಿಣಾಮ ಬೀರುವಂತಹದ್ದು.

ಸಾರ್ವತ್ರಿಕ ಚುನಾವಣೆಗಿಂತ ಮೊದಲು, 70 ಲಕ್ಷದಷ್ಟಿರುವ ಮಾಜಿ ಸೈನಿಕರು ಮತ್ತು ಅವರ ಅವಲಂಬಿತರ ಬೆಂಬಲ ಪಡೆಯುವ ಉದ್ದೇಶದಿಂದ ಯುಪಿಎ ಸರ್ಕಾರ 2014ರ ಫೆಬ್ರುವರಿಯಲ್ಲಿ ಯೋಜನೆಗಾಗಿ ₨ 500 ಕೋಟಿ ಒದಗಿಸಿತ್ತು. ‘ಒಂದು ಶ್ರೇಣಿ– ಒಂದು ಪಿಂಚಣಿ’ ವಿಚಾರದಲ್ಲಿ ತನ್ನ 6 ವರ್ಷಗಳಷ್ಟು ಹಿಂದಿನ ಆದೇಶ ಜಾರಿಗೆ ಸುಪ್ರೀಂಕೋರ್ಟ್‌ ಕಳೆದ ಫೆಬ್ರುವರಿ 17ರಂದು ಕೇಂದ್ರ ಸರ್ಕಾರಕ್ಕೆ 90 ದಿನಗಳ ಗಡುವು ನೀಡಿತ್ತು. ಕೋರ್ಟ್‌ ನೀಡಿದ ಈ ಗಡುವು ಮೇ 17ಕ್ಕೆ ಕೊನೆಗೊಂಡಿದೆ. ಸುಪ್ರೀಂಕೋರ್ಟ್‌ನ ಸಂವಿಧಾನ ಪೀಠ 2009ರಲ್ಲಿ ಸೈನಿಕರ ಪಿಂಚಣಿ ವಿಚಾರದಲ್ಲಿ ಮಹತ್ವದ ತೀರ್ಪು ನೀಡಿತ್ತು. ಪಿಂಚಣಿ ಎಂಬುದು ಉಡುಗೊರೆಯಲ್ಲ..., ಅದನ್ನು ಪಡೆಯುವುದು ಅವರ ಹಕ್ಕು, ಸಂವಿಧಾನದ 14ನೇ ವಿಧಿಯಂತೆ ಒಂದೇ ಹುದ್ದೆಗೆ ವಿಭಿನ್ನ ಪಿಂಚಣಿ ನೀಡುವಂತಿಲ್ಲ ಎಂದು ಪೀಠ ಹೇಳಿತ್ತು. ಆದರೆ ಸುಪ್ರೀಂಕೋರ್ಟ್‌ನ ಇಂದಿನ ನಿಲುವು ಸರ್ಕಾರಕ್ಕೆ ಕೊಂಚ ನಿರಾಳವಾಗಿ ಉಸಿರಾಡುವಂತೆ ಮಾಡಿದೆ.

2010ರ ಏಪ್ರಿಲ್‌ 1ರಂದು ನ್ಯಾಯಮೂರ್ತಿ ಕಟ್ಜು ಮತ್ತು ಪಟ್ನಾಯಕ್‌ ಅವರಿದ್ದ ಪೀಠ ಸರ್ಕಾರದ ನಿಲುವನ್ನು ಟೀಕಿಸಿತ್ತು. ದೇಶದ ಗಡಿ ಕಾಯುವ ಯೋಧರ ವಿಚಾರದಲ್ಲಿ ‘ಮಾನವೀಯ ಧೋರಣೆ’ ತಳೆಯುವಂತೆ ಸೂಚಿಸಿತ್ತು. ‘ದೆಹಲಿಯ ಯಾವುದೇ ಭಾಗದಲ್ಲಿ ಭಿಕ್ಷೆಗೆ ಕುಳಿತರೂ ದಿನಕ್ಕೆ ₨ 1 ಸಾವಿರ ರೂಪಾಯಿ ಗಳಿಸುವುದು ನಿಶ್ಚಿತ. ನೀವು ಅವರನ್ನು ಭಿಕ್ಷುಕರಂತೆ ನೋಡುತ್ತಿರುವುದು ದುರದೃಷ್ಟಕರ’ ಎಂದು ಆಕ್ಷೇಪಿಸಿತ್ತು.

ಅಂದು ಸರ್ಕಾರ 1973ರಿಂದ ಜಾರಿಯಲ್ಲಿದ್ದ ‘ಒಂದು ಶ್ರೇಣಿ– ಒಂದು ಪಿಂಚಣಿ’ ವ್ಯವಸ್ಥೆಯಲ್ಲಿ  ಶೇ 20ರಷ್ಟು ತೆಗೆದುಹಾಕುವ (ಶೇ 70ರಿಂದ 50ಕ್ಕೆ) ನಿರ್ಧಾರಕ್ಕೆ ಬಂದಿದ್ದರೆ, ಆಗಲೇ ಅಧಿಕ ವೇತನ ಪಡೆಯುತ್ತಿದ್ದ ನಾಗರಿಕ ಸೇವಾ ಸಿಬ್ಬಂದಿಗೆ ಶೇ 30ರಿಂದ ಶೇ 50ಕ್ಕೆ ಹೆಚ್ಚಿಸಿತ್ತು. ನಿವೃತ್ತ ಸೈನಿಕರು 1982ರಿಂದೀಚೆಗೆ, ನಿವೃತ್ತಿ ದಿನಾಂಕ ಏನೇ ಇದ್ದರೂ ಸಮಾನ ಸೇವಾವಧಿಗೆ ಸಮಾನ ಪಿಂಚಣಿ ನೀಡಲೇಬೇಕೆಂಬ ಹೋರಾಟ ನಡೆಸುತ್ತಲೇ ಬಂದಿದ್ದಾರೆ. ಈ ಬೇಡಿಕೆಯನ್ನು ಸಂಸತ್ತಿನ ಕೋಶಿಯಾರಿ ಸಮಿತಿ 2010ರಲ್ಲಿ ಒಪ್ಪಿಕೊಂಡಿದೆ.

ಭೂಸೇನಾ ಸೈನಿಕರು, ನೌಕಾಪಡೆ ಮತ್ತು ವಾಯುದಳದ ಯೋಧರು ತಮ್ಮ ಹದಿಹರೆಯದಲ್ಲೇ, ಅಂದರೆ 16ರಿಂದ 18 ವರ್ಷದೊಳಗೆ ಮಿಲಿಟರಿ ಸೇವೆಗೆ ಸೇರಿರುತ್ತಾರೆ. ಅವರಲ್ಲಿ ಶೇ 80ರಿಂದ 82ರಷ್ಟು ಮಂದಿ ತಮ್ಮ ಕೌಟುಂಬಿಕ ಹೊಣೆಗಾರಿಕೆ ಹೆಚ್ಚಿದಂತೆ 30ರ ಆಸುಪಾಸಿನ ವಯಸ್ಸಿಗೆ ಅದೇ ಶ್ರೇಣಿಯಲ್ಲಿ  ನಿವೃತ್ತರಾಗುತ್ತಾರೆ. ಶೇ 5ರಿಂದ 6ರಷ್ಟು ಜೂನಿಯರ್‌ ಕಮಿಷನ್ಡ್‌, ನಾನ್‌ ಕಮಿಷನ್ಡ್‌ ಅಧಿಕಾರಿಗಳು 45ನೇ ವಯಸ್ಸಿನ ವೇಳೆಗೆ ನಿವೃತ್ತರಾಗುತ್ತಾರೆ. ಶೇ 5ರಿಂದ 7ರಷ್ಟು ಅಧಿಕಾರಿಗಳು ತಮಗೆ 54 ವರ್ಷ ತುಂಬುವುದಕ್ಕೆ ಮೊದಲೇ ನಿವೃತ್ತರಾಗುತ್ತಾರೆ. 1996ಕ್ಕಿಂತ ಮೊದಲು ನಿವೃತ್ತನಾದ ಸಿಪಾಯಿ 2006ರ ಜನವರಿ 1ರಂದು ನಿವೃತ್ತನಾದ ಸಿಪಾಯಿಯೊಬ್ಬ ಪಡೆಯುವ ಪಿಂಚಣಿಗಿಂತ ಶೇ 82ರಷ್ಟು ಕಡಿಮೆ ಪಿಂಚಣೆ ಪಡೆಯುತ್ತಿದ್ದಾನೆ. 1996ಕ್ಕಿಂತ ಮೊದಲು ನಿವೃತ್ತನಾದ ಮೇಜರ್‌  2006ರ ಜನವರಿ 1ರ ನಂತರ ನಿವೃತ್ತನಾದ ಮೇಜರ್‌ ಒಬ್ಬನಿಗಿಂತ ಶೇ 53ರಷ್ಟು ಕಡಿಮೆ ಪಿಂಚಣಿ ಪಡೆಯುತ್ತಿದ್ದಾನೆ.

ಸ್ವತಃ ಪ್ರಧಾನಿ ಚುನಾವಣೆಗೆ ಮೊದಲು ಮತ್ತು ನಂತರ ಹಲವಾರು ಸಂದರ್ಭಗಳಲ್ಲಿ ನೀಡುತ್ತಾ ಬಂದಿರುವ ಭರವಸೆಯನ್ನು ಈಡೇರಿಸುವ ನಿಟ್ಟಿನಲ್ಲಿ ಎನ್‌ಡಿಎ ಸರ್ಕಾರಕ್ಕೆ ಮತ್ತೆ ನೆನಪು ಮಾಡುವ ಸಲುವಾಗಿ ಮಾಜಿ ಸೈನಿಕರು ಜೂನ್‌ 14ರಂದು ದೇಶದಾದ್ಯಂತ ‘ಮಹಾ ಸಂಗ್ರಾಮ’ ನಡೆಸಲು ಯೋಜನೆ ಹಾಕಿಕೊಂಡಿದ್ದಾರೆ. ಪ್ರಧಾನಿ ಮೋದಿ 2014ರ ಅಕ್ಟೋಬರ್‌ 23ರಂದು ಸಿಯಾಚಿನ್‌ಗೆ ಭೇಟಿ ನೀಡಿದ್ದಾಗ ‘ಒಂದು ಶ್ರೇಣಿ– ಒಂದು ಪಿಂಚಣಿ’ಯನ್ನು ಈಗಾಗಲೇ ಜಾರಿಗೆ ತರಲಾಗಿದೆ ಎಂದು ಹೇಳಿದ್ದರು. ಆದರೆ ಅಂದು ರಕ್ಷಣಾ ಸಚಿವಾಲಯದ ಅಧಿಕಾರಿಗಳು ಪ್ರಧಾನಿ ಅವರಿಗೆ ತಪ್ಪು ಮಾಹಿತಿ ನೀಡಿದ್ದರಿಂದ ಪ್ರಧಾನಿ ಈ ತಪ್ಪನ್ನೇ ಪುನರುಚ್ಚರಿಸಿದ್ದರು.

ಈ ಯೋಜನೆಯ ಬೇಡಿಕೆಗೆ ಯುಪಿಎ ಸರ್ಕಾರ ಕಿವುಡಾದಾಗ ಇದನ್ನು ಜಾರಿಗೆ ತರುವ ಸಲುವಾಗಿ 2007ರಲ್ಲಿ ಭಾರತೀಯ ಮಾಜಿ ಸೈನಿಕರ ಚಳವಳಿ (ಐಇಎಸ್‌ಎಂ) ಆರಂಭವಾಯಿತು. ಮಾಜಿ ಸೈನಿಕರು ಪದಕಗಳು, ಯುದ್ಧ ಪುರಸ್ಕಾರಗಳನ್ನು ವಾಪಸ್‌ ಮಾಡುವ,  ರಕ್ತದಲ್ಲಿ ಸಹಿ ಹಾಕಿ ರಾಷ್ಟ್ರಪತಿಗೆ ಮನವಿ ಸಲ್ಲಿಸುವ ಮೂಲಕ ಶಾಂತಿಯುತವಾಗಿ, ಆದರೆ ಅಷ್ಟೇ ಸಮರ್ಥವಾಗಿ ತಮ್ಮ ಅಸಮಾಧಾನವನ್ನು ತೋರಿಸುವಂತೆ ಮಾಡಿದ್ದರು. ‘ಒಂದು ಶ್ರೇಣಿ– ಒಂದು ಪಿಂಚಣಿ’ಯನ್ನು ಅಕ್ಷರಶಃ ಜಾರಿಗೆ ತಾರದ ಹೊರತು ಪದಕಗಳನ್ನು ಮರಳಿ ಪಡೆಯುವುದಿಲ್ಲ ಎಂದು ಪ್ರತಿಪಾದಿಸಿದ್ದರು.

‘ಒಂದು ಶ್ರೇಣಿ– ಒಂದು ಪಿಂಚಣಿ’ ಜಾರಿಗೆ ತಂದರೆ, 17 ವರ್ಷಗಳ ಸೇವೆ ಸಲ್ಲಿಸಿ ನಿವೃತ್ತರಾಗುವ ಶೇ 56ರಷ್ಟು ಪ್ರಮಾಣದ ಸಿಪಾಯಿಗಳಿಗೆ ಪಿಂಚಣಿ ಪ್ರಮಾಣ ಶೇ 40ರಷ್ಟು ಹೆಚ್ಚುತ್ತದೆ. ಇತರರಿಗೆ ಇಷ್ಟು ಸಿಗುವುದಿಲ್ಲ. ಉನ್ನತ ದರ್ಜೆ ನಿವೃತ್ತ ಅಧಿಕಾರಿಯೊಬ್ಬರು ಪಡೆಯುವ ಪಿಂಚಣಿ ತಮ್ಮ ಕೈಕೆಳಗೆ ದುಡಿದ ಕಿರಿಯ ಅಧಿಕಾರಿಗಿಂತ ಕಡಿಮೆಯಾಗಿರುತ್ತದೆ. ನಾಗರಿಕ ಸೇವೆ ಅಥವಾ ಕೇಂದ್ರೀಯ ಸಶಸ್ತ್ರ ಪೊಲೀಸ್‌ ಪಡೆಗಳಲ್ಲಿ ಇಂತಹ ಸನ್ನಿವೇಶ ಇಲ್ಲ.

ಮಿಲಿಟರಿ ಸೇವೆ ಸರ್ಕಾರದ ಇತರ ಸೇವೆಗಳಂತಲ್ಲ. ಎಲ್ಲ ಮಿಲಿಟರಿ ಸಿಬ್ಬಂದಿ ತಮ್ಮ ಕುಟುಂಬಗಳಿಂದ ದೂರವಾಗಿ, ದುರ್ಗಮ ಪ್ರದೇಶಗಳಲ್ಲಿ ತಮ್ಮ ವೃತ್ತಿ ಜೀವನದ ಮೂರನೇ ಒಂದರಷ್ಟು ಸಮಯ ಕಳೆದಿರುತ್ತಾರೆ. ಅತ್ಯಂತ ಕ್ಲಿಷ್ಟಕರ ಪರಿಸ್ಥಿತಿಯಲ್ಲಿ, ಕಠಿಣ ಶಿಸ್ತಿನೊಂದಿಗೆ ವರ್ಷದುದ್ದಕ್ಕೂ ಸೇವೆ ಸಲ್ಲಿಸುವ ಅವರು ತಮಗೆ ದೊರೆತ ಹುದ್ದೆ ಆಧಾರದಲ್ಲಿ ಸೇವೆಯಿಂದ ನಿವೃತ್ತರಾಗುತ್ತಾರೆ. ರಾಜ್ಯ ಸರ್ಕಾರಗಳು ಮತ್ತು ಕೇಂದ್ರೀಯ ಸಶಸ್ತ್ರ ಪೊಲೀಸ್‌ ಪಡೆಗಳ ಧೋರಣಿಗಳಿಂದಾಗಿ ನಿವೃತ್ತ ಸೈನಿಕರಿಗೆ ಮರು ಉದ್ಯೋಗ ದೊರಕುವ ಸಾಧ್ಯತೆಯೂ ಕಡಿಮೆ ಇದೆ. ಯೌವನಾವಸ್ಥೆಯನ್ನು ಮಿಲಿಟರಿ ಸೇವೆಗೆ ಮುಡಿಪಾಗಿ ಇಟ್ಟ ವ್ಯಕ್ತಿ ತನ್ನ ಕೌಟುಂಬಿಕ ಹೊಣೆಗಾರಿಕೆ ಹೆಚ್ಚಿದಾಗ ಮತ್ತು ಹಣದುಬ್ಬರದಿಂದ ತತ್ತರಿಸಿ ಹೋದಾಗ ಖರ್ಚುವೆಚ್ಚ ಭರಿಸುವ ಬಗೆಯಾದರೂ ಹೇಗೆ?

ವಿದೇಶಗಳಲ್ಲಿ ಭಾರತದಂತಹ ಸ್ಥಿತಿ ಇಲ್ಲ. ಅಲ್ಲಿನ ಸರ್ಕಾರಗಳು ತಮ್ಮ ಸೇನಾ ಸಿಬ್ಬಂದಿಯ ಹಿಂದೆ ಬಲವಾಗಿ ನಿಂತಿವೆ. ಅಮೆರಿಕ, ಇಂಗ್ಲೆಂಡ್‌, ಫ್ರಾನ್ಸ್‌, ಪಾಕಿಸ್ತಾನಗಳಲ್ಲಿ ನಾಗರಿಕ ಅಧಿಕಾರಿಗಳಿಗಿಂತ ಶೇ 10ರಿಂದ 15ರಷ್ಟು ಅಧಿಕ ಪಿಂಚಣಿಯನ್ನು ನಿವೃತ್ತ ಸೈನಿಕರು ಪಡೆಯುತ್ತಿದ್ದಾರೆ. ಜಪಾನ್‌, ಆಸ್ಟ್ರೇಲಿಯಾ, ಜರ್ಮನಿಗಳಲ್ಲಿ ನಿವೃತ್ತಿ ಹೊಂದಿದ ಸರ್ಕಾರಿ ನೌಕರರಿಗಿಂತ ಶೇ 20ರಿಂದ 30ರಷ್ಟು ಅಧಿಕ ಪಿಂಚಣಿಯನ್ನು ನಿವೃತ್ತ ಸೈನಿಕರಿಗೆ ನೀಡಲಾಗುತ್ತಿದೆ. ‘ಒಂದು ಶ್ರೇಣಿ– ಒಂದು ಪಿಂಚಣಿ’ ವಿಚಾರದಲ್ಲಿ ಮಾಜಿ ಸೈನಿಕರು ಕೇಳುತ್ತಿರುವುದು ಒಂದೇ: ತಮ್ಮ ಸೇವೆ, ಬಡ್ತಿ ಮತ್ತು ನಿವೃತ್ತಿಯ ಪರಿಸ್ಥಿತಿಗಳನ್ನು ನೋಡಿಕೊಂಡು 1973ರಲ್ಲಿ ಜಾರಿಯಲ್ಲಿದ್ದ ವ್ಯವಸ್ಥೆಯನ್ನು ಯಥಾವತ್ತಾಗಿ ಉಳಿಸಿಕೊಳ್ಳಬೇಕು ಎಂಬುದಾಗಿ ಮಾತ್ರ.‌

ರಕ್ಷಣಾ ಸಚಿವರು ಮತ್ತು ಹಣಕಾಸು ಸಚಿವರು ಯೋಜನೆ ಜಾರಿ ನಿಟ್ಟಿನಲ್ಲಿ ಸಭೆ ನಡೆಸಿದ್ದಾರೆ. ಈ ಸಂದರ್ಭದಲ್ಲಿ, 2,300 ವರ್ಷಗಳ ಹಿಂದೆ ಚಾಣಕ್ಯ ಆಡಿದ ಮಾತುಗಳು ಇಲ್ಲಿ ಉಲ್ಲೇಖನೀಯ– ‘ಸೈನಿಕ ಒಬ್ಬ ಅತ್ಯಂತ ಭದ್ರ ಬುನಾದಿಯಾದ, ನಿಶ್ಶಬ್ದವಾಗಿರುವ, ಬಹುತೇಕ ಕಣ್ಣಿಗೆ ಕಾಣಿಸದೆ ಇರುವ ಪಂಚಾಂಗದ ಮೂಲೆಯ ಕಲ್ಲು... ಆತ ಇಡೀ ದೇಶ ಕಟ್ಟುವ ಚಟುವಟಿಕೆಯಲ್ಲಿ ಪ್ರಮುಖ ಪಾತ್ರ ವಹಿಸುತ್ತಾನೆ...  ಮೌರ್ಯರ ಸಾಮ್ರಾಜ್ಯದಲ್ಲಿ ಒಬ್ಬ ಸೈನಿಕ ತನ್ನ ಬಾಕಿ ನೀಡುವಂತೆ ಒತ್ತಾಯಿಸಿದರೆ ಅಥವಾ ಅದಕ್ಕಾಗಿ ಬೇಡಿದರೆ ಅದು ಅತ್ಯಂತ ದುಃಖಕರ ದಿನವಾಗಿರುತ್ತದೆ ಹಾಗೂ ಸರ್ಕಾರಿ ಆಡಳಿತ ಯಂತ್ರದಲ್ಲಿ ಬಹು ಸ್ತರದ ವೈಫಲ್ಯಗಳು ಎದುರಾಗಿರುವುದನ್ನು ಬೊಟ್ಟುಮಾಡಿ ತೋರಿಸಿದಂತಾಗುತ್ತದೆ...’

ಮಾಜಿ ಸೈನಿಕರಿಗೆ ‘ಒಂದು ಶ್ರೇಣಿ– ಒಂದು ಪಿಂಚಣಿ’ (ಒಆರ್‌ಒಪಿ) ಯೋಜನೆ ಜಾರಿಗೊಳಿಸುವಲ್ಲಿ ನರೇಂದ್ರ ಮೋದಿ ನೇತೃತ್ವದ ಸರ್ಕಾರ ವಿಫಲವಾಗಿದೆ ಎಂದು ಹೇಳುವ ಮೂಲಕ, ಕಾಂಗ್ರೆಸ್‌ ಉಪಾಧ್ಯಕ್ಷ ರಾಹುಲ್‌ ಗಾಂಧಿ ಮತ್ತು ಮಾಜಿ ರಕ್ಷಣಾ ಸಚಿವ ಎ.ಕೆ.ಆಂಟನಿ ಈಚೆಗೆ ವಿವಾದವೊಂದನ್ನು ಮತ್ತೆ ಕೆದಕಿದರು. ಈ ಯೋಜನೆ 24 ಲಕ್ಷಕ್ಕೂ ಹೆಚ್ಚು ಮಾಜಿ ಸೈನಿಕರು (ಇಎಸ್‌ಎಂ) ಮತ್ತು ವಾರ್ಷಿಕವಾಗಿ ಮಿಲಿಟರಿ ಸೇವೆಯಿಂದ ನಿವೃತ್ತರಾಗುವ 50 ಸಾವಿರದಷ್ಟು ಸಿಬ್ಬಂದಿ ಮೇಲೆ ಪರಿಣಾಮ ಬೀರುವಂತಹದ್ದು.

ಹೀಗಿದೆ ಸೇನಾಧಿಕಾರಿಗಳ ನಿವೃತ್ತಿ ವ್ಯವಸ್ಥೆ
ವಯಸ್ಸು   50                  52                54               56                       58                      60                 62
ಶ್ರೇಣಿ    ಮೇಜರ್‌   ಲೆಫ್ಟಿನೆಂಟ್‌ ಕರ್ನಲ್‌   ಕರ್ನಲ್‌     ಬ್ರಿಗೇಡಿಯರ್‌        ಮೇಜರ್‌ ಜನರಲ್    ಲೆಫ್ಟಿನೆಂಟ್‌ ಜನರಲ್‌   ಜನರಲ್

ಪಿಂಚಣಿ ಪಡೆಯುವವರು... 
25 ಲಕ್ಷ ಮಾಜಿ ಸೈನಿಕರು
5 ಲಕ್ಷ ಸೈನಿಕರ ವಿಧವೆಯರು
43 ಸಾವಿರ ಕೋಟಿ ಪಿಂಚಣಿಗಾಗಿ ವಾರ್ಷಿಕ ವ್ಯಯ
8 ಸಾವಿರ ಕೋಟಿ ಹೊಸ ಯೋಜನೆಯಿಂದ ಆಗುವ ಹೆಚ್ಚುವರಿ ಹೊರೆ

ಸೈನಿಕರೇ ಹೆಚ್ಚು
* ಶೇ 90ರಷ್ಟು ಸೈನಿಕರು ಸೇನೆಯಲ್ಲಿದ್ದಾರೆ
* ಬಡ್ತಿ ಸಿಕ್ಕವರಿಗಷ್ಟೇ 45ನೇ ವಯಸ್ಸಿನವರೆಗೆ ಕೆಲಸ ಮಾಡಲು ಅವಕಾಶ
* ಇಲ್ಲವಾದರೆ 35– 37ನೇ ವರ್ಷಕ್ಕೆ ನಿವೃತ್ತಿ
* 20 ವರ್ಷಕ್ಕೆ ಸೇನೆಗೆ ಸೇರಿದ ಯೋಧ ಗರಿಷ್ಠ 17 ವರ್ಷ ಸೇವೆ ಸಲ್ಲಿಸಬಹುದು

(ಲೇಖಕ ನಿವೃತ್ತ ಬ್ರಿಗೇಡಿಯರ್‌)

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT