ರಾಜ್ಯದಲ್ಲಿ ಮಾಲಿನ್ಯದ ಪ್ರಮಾಣ ಹಾಗೂ ಅದರ ನಿಯಂತ್ರಣ ಕ್ರಮಗಳ ಕುರಿತು ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯ ಸದಸ್ಯ ಕಾರ್ಯದರ್ಶಿ ವಿಜಯ ಕುಮಾರ್ ‘ಪ್ರಜಾವಾಣಿ’ ಜೊತೆ ಮಾತನಾಡಿದ್ದಾರೆ.
* ವಾಯುಮಾಲಿನ್ಯಕ್ಕೆ ಪ್ರಮುಖ ಕಾರಣಗಳೇನು?
ಕೈಗಾರಿಕೆಗಳು, ಏರುತ್ತಿರುವ ವಾಹನಗಳ ಸಂಖ್ಯೆ, ದೂಳು ಮುಂತಾದವು.
* ಹೆಚ್ಚು ವಾಯುಮಾಲಿನ್ಯ ಯಾವುದರಿಂದ?
ವಾಹನಗಳಿಂದಲೇ ಹೆಚ್ಚಿನ ವಾಯುಮಾಲಿನ್ಯ ಉಂಟಾಗುತ್ತಿದೆ. ಬೆಂಗಳೂರು ಒಂದರಲ್ಲಿಯೇ ಪ್ರತಿದಿನ 1,200 ಹೊಸ ವಾಹನಗಳು ರಸ್ತೆಗಿಳಿಯುತ್ತಿವೆ. ಇವುಗಳಲ್ಲಿ ದ್ವಿಚಕ್ರ ವಾಹನಗಳು ಮತ್ತು ಕಾರುಗಳ ಸಂಖ್ಯೆ ಹೆಚ್ಚು. ಗುಣಮಟ್ಟದ ರಸ್ತೆಗಳ ಕೊರತೆಯಿಂದ ಇತ್ತೀಚೆಗೆ ದೂಳು ಮಾಲಿನ್ಯ ಹೆಚ್ಚುತ್ತಿದೆ.
* ಬೆಂಗಳೂರು ಬಿಟ್ಟರೆ ರಾಜ್ಯದ ಇನ್ಯಾವ ಭಾಗದಲ್ಲಿ ಹೆಚ್ಚಿನ ಮಾಲಿನ್ಯವಿದೆ?
ಬೆಂಗಳೂರಿನ ನಂತರ ಹುಬ್ಬಳ್ಳಿ– ಧಾರವಾಡ, ಕಲಬುರ್ಗಿ, ದಾವಣಗೆರೆ, ರಾಯಚೂರಿನಲ್ಲಿ ಹೆಚ್ಚಿನ ಮಾಲಿನ್ಯವಿದೆ.
* ಎಲೆ ಸುಡುವುದನ್ನು ತಡೆಯಲು ಏನು ಕ್ರಮ ಕೈಗೊಂಡಿದ್ದೀರಿ?
ಎಲೆಗಳಿಗೆ ಬೆಂಕಿ ಹಚ್ಚುವುದರ ವಿರುದ್ಧ ಮಂಡಳಿ ಯಾವುದೇ ಕ್ರಮ ಕೈಗೊಂಡಿಲ್ಲ. ಇದರಿಂದ ಅಲ್ಪ ಪ್ರಮಾಣದ ಮಾಲಿನ್ಯವಾಗುತ್ತದೆ. ಆದರೆ, ಪ್ಲಾಸ್ಟಿಕ್ ಸುಡುವುದರಿಂದ ಆರೋಗ್ಯದ ಮೇಲೆ ಹೆಚ್ಚಿನ ಪರಿಣಾಮವಾಗುತ್ತದೆ. ಹೀಗಾಗಿ, ಪ್ಲಾಸ್ಟಿಕ್ ಸುಡದಂತೆ ಜಾಗೃತಿ ಕಾರ್ಯಕ್ರಮ ಏರ್ಪಡಿಸಲಾಗಿದೆ. ಎಲೆಗಳನ್ನು ಸುಡುವ ಬದಲು ಕಾಂಪೋಸ್ಟ್ ಗೊಬ್ಬರ ತಯಾರಿಸಬಹುದು.
* ಬೆಂಗಳೂರಿನಲ್ಲಿ ವಿಪರೀತವಾಗಿರುವ ವಾಯುಮಾಲಿನ್ಯ ತಡೆಗೆ ಮಂಡಳಿ, ಬಿಬಿಎಂಪಿ, ಸಂಚಾರ ಹಾಗೂ ಆರ್ಟಿಒ ಕಚೇರಿ ಮಧ್ಯೆ ಸಮನ್ವಯ ಹೇಗಿದೆ?
ಮಾಲಿನ್ಯ ನಿಯಂತ್ರಣಕ್ಕೆ ಮಂಡಳಿಯು ಎಲ್ಲ ಇಲಾಖೆಗಳಿಗೂ ನಿರ್ದೇಶನ ನೀಡಿದೆ. ಅವುಗಳಲ್ಲಿ ತ್ಯಾಜ್ಯ ಸಂಸ್ಕರಣೆಗೆ ಕ್ರಮ ಕೈಗೊಳ್ಳುವುದು ಇತ್ಯಾದಿ ಸೇರಿವೆ. ಸಂಬಂಧಪಟ್ಟವರು ಈ ಬಗ್ಗೆ ಕ್ರಿಯಾಯೋಜನೆ ರೂಪಿಸುತ್ತಿದ್ದಾರೆ.
* ವಾಯುಮಾಲಿನ್ಯದ ಪ್ರಮಾಣ ಅರಿಯುವುದು ಹೇಗೆ?
ಮಾಪನ ಕೇಂದ್ರಗಳ ಮೂಲಕ ಮಾಲಿನ್ಯದ ಪ್ರಮಾಣ ದಾಖಲಿಸಲಾಗುತ್ತಿದೆ.
* ಭುರೆಲಾಲ್ ಸಮಿತಿ ವರದಿ ಜಾರಿ ಯಾವಾಗ?
ಸರ್ಕಾರದೊಂದಿಗೆ ಮಂಡಳಿ ಚರ್ಚಿಸುತ್ತಿದ್ದು ಶೀಘ್ರ ಜಾರಿಗೆ ತರಲಾಗುತ್ತದೆ.
* * *
ಉತ್ತಮ ವಾತಾವರಣ ಕಲ್ಪಿಸಬೇಕು
ನಗರದ ರಸ್ತೆಗಳಿಗಿಂತ ವರ್ತುಲ ರಸ್ತೆಗಳಲ್ಲಿ ವಾಯುಮಾಲಿನ್ಯ ಕಡಿಮೆ. ಅತ್ಯುತ್ತಮ ನಿರ್ವಹಣೆಯ ವರ್ತುಲ ರಸ್ತೆಗಳಲ್ಲಿ ಸಿಗ್ನಲ್, ವೇಗ ನಿಯಂತ್ರಕಗಳಿಲ್ಲದೆ ವಾಹನಗಳು ಒಂದೇ ಗತಿಯಲ್ಲಿ ಚಲಿಸುವುದೇ ಇದಕ್ಕೆ ಕಾರಣ. ನಗರಗಳಲ್ಲೂ ಇಂಥ ವಾತಾವರಣ ಕಲ್ಪಿಸಬೇಕಾಗಿದೆ.
- ಡಾ. ವಾಮನ ಆಚಾರ್ಯ,
ಅಧ್ಯಕ್ಷರು, ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.