ADVERTISEMENT

ಅನುಕೂಲಸಿಂಧು `ಸಂಸ್ಕೃತೀಕರಣ'

​ಪ್ರಜಾವಾಣಿ ವಾರ್ತೆ
Published 17 ಮಾರ್ಚ್ 2013, 19:59 IST
Last Updated 17 ಮಾರ್ಚ್ 2013, 19:59 IST

ಶ್ರೀ ಕೃಷ್ಣ ಭಗವದ್ಗೀತೆಯಲ್ಲಿ ಮನುಷ್ಯ ಕುಲವನ್ನು ಗುಣ, ಕರ್ಮಗಳನ್ನು ಆಧಾರವಾಗಿಟ್ಟುಕೊಂಡು ವಿಂಗಡಿಸ್ದ್ದಿದಾನೆಂದು ಹೇಳಿದ್ದಾನೆ. 12ನೇ ಶತಮಾನದಲ್ಲಿ ಶಿವಶರಣಕೂ ಮನುಷ್ಯರನ್ನು ಅವರ ಗುಣ ಅಂದರೆ ನಡೆ ಹಾಗೂ ನುಡಿಯ ಆಧಾರದ ಮೇಲೆ ವಿಂಗಡಿಸಿದ್ದಾರೆ. ಮಾದಾರ ಚೆನ್ನಯ್ಯ, ಹೊಲೆಯರ ಹರಳಯ್ಯ, ಡೋಹರ ಕಕ್ಕಯ್ಯ ಮೊದಲಾದವರಿಗೆ ಅವರುಗಳ ಹೆಸರಿನ ಹಿಂದೆ ಅಂಟಿಕೊಂಡಿರುವ ಜಾತಿ ಅವರುಗಳ ಕಸಬುಗಳಿಂದಲೇ ಹೊರತಾಗಿ ಅವರ ಗುಣಗಳಿಂದಲ್ಲ. 

ಹರಳಯ್ಯನ ಮಗನಿಗೂ ಬ್ರಾಹ್ಮಣ ಕುಲದ ಮಧುವರಸನ ಮಗಳಿಗೂ ಲಗ್ನ ಮಾಡಿದರು. ಅವರಿಬ್ಬರ ಮನೆಯವರು ಬಂಧು ಬಾಂಧವರು ಮೊದಲು ಶರಣರಾಗಿದ್ದುದರಿಂದ ಅವರ ಮಕ್ಕಳಿಗೆ ಎಲ್ಲರೂ ಒಪ್ಪಿ ಲಗ್ನ ಮಾಡಿದರು. ಇದು ಅಂತರಜಾತಿ ಮದುವೆಯೇ ಅಲ್ಲ. ಇಲ್ಲಿ ಯಾವ ವರ್ಣಸಂಕರವೂ ಆಗಿಲ್ಲ. ಈ ಮದುವೆಯನ್ನು ಆಧಾರವಾಗಿಟ್ಟುಕೊಂಡು ಆ ಕಾಲದಲ್ಲೇ ಅಂತರಜಾತಿ ವಿವಾಹ ನಡೆದಿದೆ. ಈಗೇಕೆ ಬೇಡ ಎಂದು ಕೇಳುವವರಿದ್ದಾರೆ. ನಾನಾಗಲೇ ಹೇಳಿರುವಂತೆ ಅವರಿಬ್ಬರ ಕುಟುಂಬಗಳು ಶರಣರಾಗಿದ್ದು, ಅವರ ತಂದೆ ತಾಯಿ ಬಂಧು ಬಳಗದ ಒಪ್ಪಿಗೆ ಪಡೆದೇ ವಿವಾಹ ನಡೆದಿದೆ.

ಕೆಲವರು ತೋರಿಕೆಗೆ ಬೇರೆ ಜಾತಿಯವರನ್ನು ಲಗ್ನವಾಗಲು ಅವರಿಗೆ ಲಿಂಗಧಾರಣೆ ಮಾಡಿಸುತ್ತಾರೆ ಆದರೆ ಅವರ ಆಚರಣೆ ಹಿಂದಿನ ಜಾತಿಯ ಆಚರಣೆಯೇ ಆಗಿರುತ್ತದೆ. ಶ್ರೀ ರಾಮಕೃಷ್ಣ ಪರಮಹಂಸರು ಹಿಂದೂ ಆಗಿ, ಮುಸ್ಲಿಂ ಆಗಿ, ಕ್ರೈಸ್ತರಾಗಿ ನೋಡಿದಾಗ ಎಲ್ಲ ಧರ್ಮಗಳ ಸಾರ ಒಂದೇ ಆಗಿದೆಯೆಂದು ಹೇಳಿರುತ್ತಾರೆ ಆದರೆ ಅರೆ ತಿಳಿವಳಿಕೆಯುಳ್ಳವರು ಆ ಧರ್ಮದ/ಜಾತಿಯ ನೀತಿ ನಿಯಮಗಳನ್ನು ಪಾಲಿಸದೆ ನಾಟಕವಾಡುವುದರಿಂದಲೇ ಈ ಅವ್ಯವಸ್ಥೆ ಉಂಟಾಗಿದೆ. ಶ್ರೀ ಕೃಷ್ಣ `ಸ್ವಧರ್ಮ ನಿಧನಂ ಶ್ರೇಯಃ' ಎಂದು ಹೇಳಿದ್ದಾನೆ. ನಾನೂ ಒಬ್ಬ ಶಿಕ್ಷಕನಾಗಿದ್ದುದರಿಂದ ಒಂದು ಪ್ರಸಂಗವನ್ನು ಪರಿಚಯಿಸುತ್ತೇನೆ. ಬ್ರಾಹ್ಮಣ ಹುಡುಗಿ ಮತ್ತು ಆಕೆಯ ದಲಿತ ಗಂಡ ತಮ್ಮ ಮಗುವನ್ನು ಶಾಲೆಗೆ ಸೇರಿಸಿದಾಗ ಸ್ವಾಭಾವಿಕವಾಗಿ ಬ್ರಾಹ್ಮಣ ಎಂದೇ ನಮೂದಿಸಿದ್ದರು. ಆ ಮಗು ದೊಡ್ಡದಾಗಿ ಬೆಳೆದು ಪದವಿ ಪಡೆದು ಕೆಲಸಕ್ಕೆ ಸೇರುವಾಗ ದಲಿತ ಎಂದು ಬರೆದುಕೊಡಿ ಎಂದು ಕೇಳಿದರು. ಅದು ಸಾಧ್ಯವಿಲ್ಲವೆಂದು ತಿರಸ್ಕರಿಸಲಾಯಿತು. ಜನರಿಗೆ ತಾವು ಉತ್ತಮ ಕುಲ/ಜಾತಿಯವರೆಂದು ಕರೆಸಿಕೊಳ್ಳಬೇಕು ಆದರೆ ಕೆಲಸಕ್ಕೆ ಸೇರುವಾಗ ಹಿಂದುಳಿದ ಜಾತಿಯ ಪ್ರಯೋಜನ ಬೇಕು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.