ADVERTISEMENT

ಬಲಾಢ್ಯರ ಪಾಲಾಗದಿರಲಿ

ಎಚ್.ಕೆ.ಶರತ್
Published 7 ಏಪ್ರಿಲ್ 2013, 19:59 IST
Last Updated 7 ಏಪ್ರಿಲ್ 2013, 19:59 IST

ಎಂಜಿನಿಯರಿಂಗ್ ಸೇರಿದಾಗ ಸಿಇಟಿಯಲ್ಲಿ ಕಡಿಮೆ ರ್‍ಯಾಂಕ್ ಪಡೆದೂ ಮೀಸಲಾತಿಯಿಂದಾಗಿ ಬೇಡಿಕೆ ಇರುವ ಕೋರ್ಸಿಗೆ ಸೀಟು ಪಡೆದ ಪರಿಶಿಷ್ಟ ಜಾತಿ ಮತ್ತು ವರ್ಗಗಳಿಗೆ ಸೇರಿದ ವಿದ್ಯಾರ್ಥಿಗಳ ಬಗ್ಗೆ ನನ್ನ ಸಹಪಾಠಿಗಳು ಹಗುರವಾಗಿ ಮಾತನಾಡುತ್ತಿದ್ದದ್ದು ಆಗಾಗ ಕಿವಿಗೆ ಬೀಳುತ್ತಿತ್ತು. ನಾನು ಮೀಸಲಾತಿ ಪರ ವಕಾಲತ್ತು ವಹಿಸಲು ಮುಂದಾದರೆ, ಬೇರೆ ಎಲ್ಲದಕ್ಕೂ ಮೀಸಲಾತಿ ಇರಲಿ. ಆದರೆ ಶಿಕ್ಷಣ ಕ್ಷೇತ್ರದಲ್ಲಿ ಮೀಸಲಾತಿ ಇರಲೇಬಾರದು. ಪ್ರತಿಭೆಗೆ ಮನ್ನಣೆ ಸಿಗಬೇಕೆಂದು ವಾದಿಸುತ್ತಿದ್ದರು.

ಕೆಳಜಾತಿಯಲ್ಲಿ ಹುಟ್ಟಿದವರು ಎದುರಿಸುವ ಅವಮಾನ ಮತ್ತು ಸವಾಲುಗಳ ಪರಿಚಯವಿಲ್ಲದ ನಾವು ಮೀಸಲಾತಿ ನಮ್ಮ ಅವಕಾಶ ಕಿತ್ತುಕೊಳ್ಳುತ್ತಿದೆ ಎಂಬ ಕಾರಣಕ್ಕೆ ಮೀಸಲಾತಿ ವಿರುದ್ಧವಾಗಿ ಮಾತನಾಡುತ್ತೇವೆ. ಆದರೆ ಜಾತಿ ವಿಚಾರ ಬಂದಾಗ ನಮ್ಮದು ಶ್ರೇಷ್ಠ ಜಾತಿ ಎಂದು `ಶ್ರೇಷ್ಠತೆಯ ವ್ಯಸನ'ಕ್ಕೆ ಶರಣಾಗುತ್ತೇವೆ.

ಸಿಇಟಿಯಲ್ಲಿ 30 ಸಾವಿರ ರ‌್ಯಾಂಕ್ ಪಡೆದ ನನ್ನ ಗೆಳೆಯನೊಬ್ಬನಿಗೆ ಪ್ರತಿಷ್ಠಿತ ಕಾಲೇಜೊಂದರಲ್ಲಿ ಸರ್ಕಾರಿ ಕೋಟಾದಡಿ ಸೀಟು ಸಿಕ್ಕಿತು. ಅವನ ತಂದೆ ಅದೇ ಕಾಲೇಜಿನ ಸಿವಿಲ್ ಎಂಜಿನಿಯರಿಂಗ್ ವಿಭಾಗದ ಮುಖ್ಯಸ್ಥರಾಗಿದ್ದರು. ಆರ್ಥಿಕವಾಗಿ ಪ್ರಬಲರಾಗಿದ್ದರೂ, ಮೀಸಲಾತಿ ಸೌಲಭ್ಯ ಬಳಸಿಕೊಂಡರು. ತಿಂಗಳಿಗೆ ಲಕ್ಷಾಂತರ ರೂಪಾಯಿಗಳನ್ನು ಸಂಪಾದಿಸುವ ಸರ್ಕಾರಿ ಅಧಿಕಾರಿಗಳು, ಪ್ರಾಧ್ಯಾಪಕರ ಮಕ್ಕಳು ಸಹ ಮೀಸಲಾತಿ ಸೌಲಭ್ಯ ಪಡೆಯುವುದನ್ನು ಕಂಡಾಗ ಸಹಜವಾಗಿಯೇ ಬೇಸರವಾಗುತ್ತದೆ. ಮೀಸಲಾತಿ ಉಳ್ಳವರ ಪಾಲಾದಾಗ ಅದೇ ಜಾತಿಯ ಬಡವರು ಅವಕಾಶ ವಂಚಿತರಾಗುತ್ತಿದ್ದಾರೆ. ಮೀಸಲಾತಿ ಪಡೆದು ಆರ್ಥಿಕವಾಗಿ ಬಲಾಢ್ಯರಾದವರಿಗೆ ಮತ್ತೆ ಮತ್ತೆ ಮೀಸಲಾತಿ ಕಲ್ಪಿಸುವುದು ಸಹಜವಾಗಿಯೇ ಇತರರಲ್ಲಿ ಅಸಹನೆ ಮೂಡಿಸುತ್ತದೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.