ADVERTISEMENT

ರಕ್ಷಾಬಂಧನ: ಬಾಂಧವ್ಯದ 'ಬೀಜ'

ಕೃಷ್ಣಿ ಶಿರೂರ
Published 8 ಆಗಸ್ಟ್ 2025, 23:30 IST
Last Updated 8 ಆಗಸ್ಟ್ 2025, 23:30 IST
   

ಸಹೋದರತ್ವದ ಬಾಂಧವ್ಯ ಬೆಸೆಯುವ ‘ರಕ್ಷಾಬಂಧನ’ದ ಸಂದರ್ಭದಲ್ಲಿ, ಹಲವು ನಮೂನೆಯ ರಾಖಿಗಳು ಕಣ್ಮನ ಸೆಳೆಯುತ್ತವೆ. ವರ್ಷವರ್ಷವೂ ರೂಪ ಬದಲಿಸಿಕೊಂಡು ವೈವಿಧ್ಯ ಸಾರುವ ರಾಖಿಗಳಲ್ಲಿ ಹೆಚ್ಚಿನವು ಪ್ಲಾಸ್ಟಿಕ್‌ಮಯ ಆಗಿರುತ್ತವೆ. ಆದರೆ ಈ ಬಾರಿ ನೀವು ಕೊಳ್ಳುವ ರಾಖಿಗೊಂದು ಅರ್ಥ ಕಲ್ಪಿಸಿಕೊಟ್ಟಿದೆ ಮೈಸೂರಿನ ‘ಕೃಷಿಕಲಾ’ ಸಂಸ್ಥೆ.

ಬಳಸಿ ಬಿಸಾಡುವ ತರಕಾರಿ, ಹಣ್ಣಿನ ಬೀಜಗಳಿಂದ ರಾಖಿ ತಯಾರಿಸುವ ಮೂಲಕ ಹಬ್ಬವನ್ನು ಪರಿಸರಸ್ನೇಹಿ ಆಗಿಸಲು ಅದು ಮುಂದಾಗಿದೆ. ಕಾಡುಹಣ್ಣಿನ ಬೀಜಗಳೂ ಜೊತೆಗೂಡಿದ ರಾಖಿಗಳು ಹೊಸತನ ಸಾರುತ್ತಿವೆ.  

ಬೇಲಿಯ ಸಂದಿ–ಗೊಂದಿಗಳಲ್ಲಿ ಬೆಳೆಯುವ ಗುಲಗಂಜಿ, ಕುಂಬಳ, ಹೀರೆ, ಅಂಟವಾಳ, ರುದ್ರಾಕ್ಷಿ, ತುಪ್ಪದ ಹೀರೆಕಾಯಿ, ಅವರೆ, ಔಡಲ, ಸೀತಾಫಲದ ಬೀಜಗಳು ರಾಖಿಯ ರೂಪದಲ್ಲಿ ಪರಿಸರ ಪ್ರಜ್ಞೆಯ ರೂವಾರಿಗಳಾಗಿ ಅಣ್ಣ–ತಮ್ಮಂದಿರ ಮುಂಗೈಗಳಲ್ಲಿ ನಲಿಯಲಿವೆ. ಪ್ರಕೃತಿದತ್ತ ಬಣ್ಣ, ವಿನ್ಯಾಸದ ಬೀಜಗಳಿಗೆ ಮಾಂತ್ರಿಕ ಸ್ಪರ್ಶ ನೀಡಿ, ಅವು ಇನ್ನಷ್ಟು ಆಕರ್ಷಕವಾಗುವಂತೆ ಮಾಡಿದ್ದಾರೆ ಕೃಷಿಕಲಾದ ಸಂಸ್ಥಾಪಕಿ ಸೀಮಾ ಪ್ರಸಾದ್‌.

ADVERTISEMENT

ತಮ್ಮ ಈ ಆಲೋಚನೆಯನ್ನು ಕಾರ್ಯರೂಪಕ್ಕೆ ಇಳಿಸಲು ಅವರು ಬಳಸಿಕೊಂಡದ್ದು ಧಾರವಾಡ ಜಿಲ್ಲೆಯ ಕುಂದಗೋಳ ತಾಲ್ಲೂಕಿನ ನೀರಲಗಿಯ ಮಹಿಳೆಯರನ್ನು. ದೂರದ ನೀರಲಗಿಯನ್ನು ಅವರು ಆಯ್ದುಕೊಳ್ಳುವುದಕ್ಕೂ ಒಂದು ಕಾರಣವಿದೆ. ಮೈಸೂರಿನ ಸಹಜ ಸಮೃದ್ಧ ಸಂಸ್ಥೆಯು ಕುಂದಗೋಳದಲ್ಲಿ ರಾಗಿ ತಳಿಗಳ ಸಂರಕ್ಷಣಾ ಕಾರ್ಯದಲ್ಲಿ ನಿರತವಾಗಿದೆ. ಈ ಸಂಸ್ಥೆಯ ಬೆಂಬಲದೊಂದಿಗೆ, ಗ್ರಾಮೀಣ ಮಹಿಳೆಯರಿಗೆ ಜೀವನೋಪಾಯ ಕಲ್ಪಿಸುವ ದಿಸೆಯಲ್ಲಿ ಕೃಷಿಕಲಾ ಈಗಾಗಲೇ ಅಲ್ಲಿ ಕಾರ್ಯನಿರತವಾಗಿದೆ. ನೀರಲಗಿಯು ಹಳ್ಳಿಯಾಗಿರುವುದರಿಂದ ಅಲ್ಲಿ ಕಾಡಿನ ಬೀಜಗಳ ಸಂಗ್ರಹಕ್ಕೂ ಯಥೇಚ್ಛ ಅವಕಾಶಗಳಿವೆ. ಹೀಗಾಗಿ, ರಾಖಿ ತಯಾರಿಕೆಗೆ ಕೃಷಿಕಲಾ ಅಲ್ಲಿಯೇ ಘಟಕವೊಂದನ್ನು ತೆರೆದಿದೆ.

ರಾಖಿ ಸಿದ್ಧಪಡಿಸಲು ಅಗತ್ಯವಾದ ಬೀಜ, ದಾರ ಹಾಗೂ ರಂಧ್ರ ಕೊರೆಯುವ ಯಂತ್ರವನ್ನು ಪೂರೈಸಿ, ಬೀಜವನ್ನು ದಾರಕ್ಕೆ ಪೋಣಿಸಿ ಸುಂದರವಾಗಿಸಿದ ಒಂದು ರಾಖಿಗೆ ಕೃಷಿಕಲಾದಿಂದ ₹ 15 ನೀಡಲಾಗುತ್ತಿದೆ. ಇದರಿಂದ ಹಳ್ಳಿಮನೆಯ ಮಹಿಳೆಯರಿಗೆ ಕೈಗೊಂದು ಕೆಲಸ ಸಿಕ್ಕಿ, ಸ್ವಾವಲಂಬನೆಗೆ ದಾರಿಯಾಗಿದೆ. ‘ಒಂದು ರಾಖಿಗೆ 6ರಿಂದ 10 ಬೀಜಗಳನ್ನು ಬಳಸಲಾಗುತ್ತಿದೆ. ಜೊತೆಗೆ ಮಣಿಗಳನ್ನೂ ಸೇರಿಸಿ ಸುಂದರಗೊಳಿಸಲಾಗುತ್ತದೆ. ಈ ವರ್ಷ ಈವರೆಗೆ 500 ರಾಖಿಗಳನ್ನು ಸಿದ್ಧಪಡಿಸಿರುವೆ’ ಎಂದು ಖುಷಿಯಿಂದ ಹೇಳುತ್ತಾರೆ ನೀರಲಗಿಯ ರೇಖಾ.

ಕೌಶಲ ಪ್ರದರ್ಶನಕ್ಕೂ ಇಲ್ಲಿ ಬಹಳಷ್ಟು ಅವಕಾಶವಿದೆ. ಹೀಗೆ ಬೀಜದ ರಾಖಿಯು ಬಾಂಧವ್ಯ ಬೆಸುಗೆಯ ಬೀಜ ಕುಡಿಯೊಡೆಯಲು ಸಹ ನೆರವಾಗಿದೆ.

ಸಂರಕ್ಷಣೆ–ಸ್ವಾವಲಂಬನೆ
2018ರಲ್ಲಿ ಸಹಜ ಸಮೃದ್ಧ ಸಂಸ್ಥೆಯ ಬೆಂಬಲದೊಂದಿಗೆ ಆರಂಭವಾದ ಸಂಸ್ಥೆ ಕೃಷಿಕಲಾ. ಸಾಂಪ್ರದಾಯಿಕ ತಳಿಗಳನ್ನು ಉಳಿಸುವುದರೊಂದಿಗೆ ಅವುಗಳಿಗೆ ಹೊಸ ರೂಪ ನೀಡಲು ಇದು ಶ್ರಮಿಸುತ್ತಿದೆ. ವಿನಾಶದ ಅಂಚಿನಲ್ಲಿರುವ 45 ಸೋರೆ ತಳಿಗಳನ್ನು ಸಂರಕ್ಷಿಸುವ ಕಾರ್ಯದಲ್ಲಿ ಮುಂದಾಳತ್ವ ವಹಿಸಿದೆ. ಸೋರೆ ಬುರುಡೆಗಳನ್ನು ಬಳಸಿ, ವಿಭಿನ್ನ ಕಲಾಕೃತಿಗಳನ್ನಾಗಿಸಿ ಮಾರುಕಟ್ಟೆಗೆ ಬಿಡುಗಡೆ ಮಾಡಿದೆ. ಗ್ರಾಮೀಣ ಮಹಿಳೆಯರಿಗೆ ಜೀವನೋಪಾಯ ಕಲ್ಪಿಸಿಕೊಟ್ಟಿದ್ದಕ್ಕಾಗಿ ಕೃಷಿಕಲಾಕ್ಕೆ ದೆಹಲಿಯ ಸಮಾಜ ಕಲ್ಯಾಣ ಸಂಸ್ಥೆಯಾದ ಎಂ3ಎಂ ಪ್ರತಿಷ್ಠಾನದ ಪ್ರತಿಷ್ಠಿತ ತ್ರಿವೇಣಿ ಪ್ರಶಸ್ತಿಯೂ ಲಭಿಸಿದೆ. ಪ್ರಶಸ್ತಿಯು ₹ 7 ಲಕ್ಷ ರೂಪಾಯಿ ಹಾಗೂ ಪ್ರಶಸ್ತಿ ಪತ್ರ ಒಳಗೊಂಡಿದೆ. ‘ಮುಂದಿನ ದಿನಗಳಲ್ಲಿ ಬೀಜಗಳನ್ನು ಬಳಸಿ ಮ್ಯಾಚಿಂಗ್‌ ಆಭರಣಗಳನ್ನು ತಯಾರಿಸುವ ಯೋಜನೆಯಿದೆ’ ಎನ್ನುತ್ತಾರೆ ಸೀಮಾ ಪ್ರಸಾದ್‌. ಬೀಜಗಳನ್ನು ಸಂರಕ್ಷಿಸುವುದರೊಂದಿಗೆ ಗ್ರಾಮೀಣ ಮಹಿಳೆಯರ ಬದುಕಿಗೆ ಸ್ವಾವಲಂಬನೆ ಒದಗಿಸುವುದು ಕೃಷಿಕಲಾದ ಉದ್ದೇಶವಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.