ರಾಜ್ಯ ಸರ್ಕಾರದ ಪ್ರಮುಖ ಅಭಿವೃದ್ಧಿ ಯೋಜನೆಗಳ ಪೈಕಿ ವಿಪ್ರ ಸ್ವ-ಉದ್ಯಮ ನೇರ ಸಾಲ ಯೋಜನೆ ಒಂದು. ಈ ಯೋಜನೆಯನ್ನು ಕರ್ನಾಟಕ ರಾಜ್ಯ ಬ್ರಾಹ್ಮಣ ಅಭಿವೃದ್ಧಿ ಮಂಡಳಿ ಜಾರಿ ಮಾಡಿದ್ದು, ಅರ್ಹರು ಸಾಲ ಸೌಲಭ್ಯವನ್ನು ಪಡೆಯಬಹುದು.
ಈ ಯೋಜನೆಯಲ್ಲಿ ಸಿಗುವ ಸಾಲದಿಂದ ಹೋಟೆಲ್ ಉದ್ಯಮ, ಗುಡಿ ಕೈಗಾರಿಕೆ, ಹಸು ಸಾಕಾಣಿಕೆ, ಸಣ್ಣ ಕೈಗಾರಿಕೆ ಹಾಗೂ ಟ್ಯಾಕ್ಸಿಯನ್ನು ಖರೀದಿ ಮಾಡಬಹುದಾಗಿದೆ. ಈ ಯೋಜನೆಯಡಿ ಸಿಗುವ ಸಾಲ ಎಷ್ಟು? ಅರ್ಜಿಯನ್ನು ಸಲ್ಲಿಸುವುದು ಹೇಗೆ ಎಂಬುದನ್ನ ತಿಳಿಯೋಣ ಬನ್ನಿ.
ಫಲಾನುಭವಿಗಳ ಸ್ವ–ಉದ್ಯಮಕ್ಕೆ ಕನಿಷ್ಟ ₹1 ಲಕ್ಷದಿಂದ ಗರಿಷ್ಟ ₹2 ಲಕ್ಷದ ವರೆಗೂ ಸಾಲವನ್ನು ನೀಡಲಾಗುತ್ತದೆ. ಈ ಮೊತ್ತದಲ್ಲಿ ಶೇ 20ರಷ್ಟು ಸಹಾಯಧನ ಇರಲಿದೆ. ಉಳಿದ ಶೇ 80ರಷ್ಟು ಮೊತ್ತಕ್ಕೆ ವಾರ್ಷಿಕ ಶೇ 4ರ ಬಡ್ಡಿ ದರವನ್ನು ವಿಧಿಸಲಾಗುತ್ತದೆ. ಮಹಿಳೆಯರಿಗೆ ಶೇ 33ರಷ್ಟು ಹಾಗೂ ದಿವ್ಯಾಂಗರಿಗೆ ಶೇ 5ರಷ್ಟು ಮೀಸಲಾತಿ ಕಲ್ಪಿಸಲಾಗಿದೆ.
ಅರ್ಜಿ ಸಲ್ಲಿಕೆಗೆ ಕೊನೆಯ ದಿನಾಂಕ ಯಾವಾಗ?
ಅರ್ಜಿ ಸಲ್ಲಿಕೆಗೆ ಕೊನೆಯ ದಿನಾಂಕ ಅಕ್ಟೋಬರ್ 31 ಆಗಿರುತ್ತದೆ. ಸಂಜೆ 5 ಗಂಟೆಯೊಳಗೆ ಅರ್ಜಿ ಸಲ್ಲಿಸಬೇಕು.
ಫಲಾನುಭವಿಗೆ ಇರಬೇಕಾದ ಅರ್ಹತೆಗಳೇನು?
ಬ್ರಾಹ್ಮಣ ಸಮುದಾಯದ ಸಾಮಾನ್ಯ ವರ್ಗಕ್ಕೆ ಸೇರಿರಬೇಕು.
ಇಡಬ್ಲ್ಯೂಎಸ್ ಪ್ರಮಾಣ ಪತ್ರ ಇರಬೇಕು.
ಕರ್ನಾಟಕದ ಖಾಯಂ ನಿವಾಸಿಯಾಗಿರಬೇಕು.
ವಯೋಮಿತಿಯು 18 ರಿಂದ 65 ವರ್ಷದೊಳಗೆ ಇರಬೇಕು.
ಒಂದು ಕುಟುಂಬದಿಂದ ಒಬ್ಬರಿಗೆ ಮಾತ್ರ ಅರ್ಜಿ ಸಲ್ಲಿಸಲು ಅವಕಾಶ.
ತೃತೀಯ ಲಿಂಗಿಗಳಿಗೆ ಶೇ 50ರಷ್ಟು ಮೀಸಲಾತಿ ಕಲ್ಪಿಸಲಾಗಿದೆ.
ಆಧಾರ್ ಹಾಗೂ ಬ್ಯಾಂಕ್ ಖಾತೆಗೆ ಮೊಬೈಲ್ ಸಂಖ್ಯೆ ಲಿಂಕ್ ಆಗಿರಬೇಕು.
ಸಾಲ ಹಾಗೂ ಮರು ಪಾವತಿಗಳು:
ಸಾಲ ಪಡೆದ 2 ತಿಂಗಳ ನಂತರ 3 ವರ್ಷ ಪ್ರತಿ ತಿಂಗಳು ಕಂತುಗಳಲ್ಲಿ ಮೂಲಧನ ಮತ್ತು ಬಡ್ಡಿಯನ್ನು ಆನ್ ಲೈನ್ ಮೂಲಕ ಪಾವತಿಸಬೇಕು.
ಸ್ವ ಉದ್ಯೋಗಕ್ಕಾಗಿ ₹1 ಲಕ್ಷ ಸಾಲ ಪಡೆದರೆ, ಆ ಪೈಕಿ ₹20 ಸಾವಿರ ಸಹಾಯಧನವಾಗಿರುತ್ತದೆ. ಉಳಿದ ₹80 ಸಾವಿರಕ್ಕೆ ಶೇ 4ರಷ್ಟು ಬಡ್ಡಿ ವಿಧಿಸಲಾಗುತ್ತದೆ. ಮಾಸಿಕ ₹2,511 ಅನ್ನು ಕಂತುಗಳಲ್ಲಿ ಮರುಪಾವತಿ ಮಾಡಬೇಕು.
₹2 ಲಕ್ಷ ಸಾಲ ಪಡೆದರೆ, ಆ ಪೈಕಿ ₹40 ಸಾವಿರ ಸಹಾಯಧನವಾಗಿರುತ್ತದೆ. ಉಳಿದ ₹1.60 ಲಕ್ಷಕ್ಕೆ ಶೇ 4ರಷ್ಟು ಬಡ್ಡಿ ವಿಧಿಸಲಾಗುತ್ತದೆ. ಮಾಸಿಕ ₹5,022 ಅನ್ನು ಕಂತುಗಳಲ್ಲಿ ಮರುಪಾವತಿ ಮಾಡಬೇಕು.
ಸಾಲ ಪಡೆಯಲು ಆನ್ ಲೈನ್ ಮೂಲಕ ಅರ್ಜಿ ಸಲ್ಲಿಸುವಾಗ ತಮ್ಮ ಯೋಜನೆಯ ಬಗ್ಗೆ ಕನಿಷ್ಟ 10 ಪದಗಳಲ್ಲಿ ನಮೂದಿಸಬೇಕು.
ಇ-ಸ್ಟ್ಯಾಂಪ್ ಶುಲ್ಕದೊಂದಿಗೆ ಅರ್ಜಿ ಪ್ರಕ್ರಿಯೆ ಶುಲ್ಕವನ್ನು ಅರ್ಜಿದಾರರು ಭರಿಸಬೇಕು. ಜಾಮೀನುದಾರರ ವಿವರ ಅಗತ್ಯ.
ಅಗತ್ಯ ದಾಖಲೆಗಳು?
ಆದಾಯ ಪ್ರಮಾಣ ಪತ್ರ
ಜಾತಿ ಪ್ರಮಾಣ ಪತ್ರ
ಆಧಾರ್ ಕಾರ್ಡ್ ಪ್ರತಿ
ವೋಟರ್ ಐಡಿ ಅಥವಾ ಬ್ಯಾಂಕ್ ಪಾಸ್ಬುಕ್ ಪ್ರತಿ
ಇತ್ತೀಚಿನ ಭಾವಚಿತ್ರ
ವ್ಯಾಪಾರ ಅಥವಾ ಮಳಿಗೆಗೆ ಸಂಬಂಧಿಸಿದ ದಾಖಲೆ
ಅಗತ್ಯ ಮಾಹಿತಿಗೆ ಸಂಪರ್ಕಿಸಬಹುದು:
ಕಚೇರಿ ವಿಳಾಸ: ನಂ. 14/3, ಆನೆಕ್ಸ್ ಕಟ್ಟಡ, 3ನೇ ಮಹಡಿ, ಶ್ರೀ ಅರವಿಂದ ಭವನ, ಮಿಥಿಕ್ ಸೋಸೈಟಿ ಆವರಣ, ನೃಪತುಂಗ ರಸ್ತೆ, ಬೆಂಗಳೊರು – 560001
ಸಹಾಯವಾಣಿ: +91 80 2960 5888 ಅಥವಾ +91 87 6224 9230
ಅರ್ಜಿ ಸಲ್ಲಿಸುವುದು ಹೇಗೆ?
ಅರ್ಜಿಯನ್ನು ಸಲ್ಲಿಸಲು ಈ ಲಿಂಕ್ ಕ್ಲಿಕ್ ಮಾಡಿ www.ksbdb.karnataka.gov.in ಭೇಟಿ ನೀಡಿ. ಅರ್ಜಿ ಸಲ್ಲಿಕೆ ಹಾಗೂ ಇತರೆ ಮಾಹಿತಿಗೆ ಸಹಾಯವಾಣಿಯನ್ನು ಸಂಪರ್ಕಿಸಬಹುದು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.