ನನ್ನ ಮೆಚ್ಚಿನ ಗುರುವಿನ ಹೆಸರು ಚಂದ್ರಕಾಂತ್ ಪಾಟೀಲ. ಅವರನ್ನು ನಾವೆಲ್ಲ ಪ್ರೀತಿಯಿಂದ ಚಂದ್ರು ಸರ್ ಎಂದು ಕರೆಯುತ್ತಿದ್ದೆವು. ಪ್ರಾಥಮಿಕ ಶಾಲೆಯಲ್ಲಿ ಕನ್ನಡ ವಿಷಯ ಬೋಧಿಸುತ್ತಿದ್ದರು. ಅವರು ಹೇಳುತ್ತಿದ್ದ ಪಾಠ ವಿದ್ಯಾರ್ಥಿಗಳ ಮನಸ್ಸಿಗೆ ಆಳಕ್ಕೆ ಇಳಿಯುತ್ತಿತ್ತು. ವಿದ್ಯಾರ್ಥಿಗಳ ಮಟ್ಟಕ್ಕಿಳಿದು ಪಾಠ ಮಾಡುತ್ತಿದ್ದರು. ಹೀಗಾಗಿ ನಾವೆಲ್ಲರೂ ಅವರನ್ನು ತುಂಬಾ ಇಷ್ಟಪಡುತ್ತಿದ್ದೆವು.
ಆಗಲೇ ನಾನು ಸಾಹಿತ್ಯದ ಗೀಳು ಹಚ್ಚಿಕೊಂಡು ಪಠ್ಯೇತರ ಪುಸ್ತಕಗಳನ್ನೇ ಹೆಚ್ಚೆಚ್ಚು ಓದುತ್ತಿದ್ದೆ. ಜೊತೆಗೆ ಸಣ್ಣ ಕವನ, ಬರಹಗಳನ್ನು ಬರೆಯುತ್ತಿದ್ದೆ. ನನ್ನ ಒಬ್ಬ ಸಹಪಾಠಿಯಿಂದ ಈ ವಿಷಯ ತಿಳಿದುಕೊಂಡ ಅವರು, ಒಂದು ದಿನ ತಮ್ಮ ಕೋಣೆಗೆ ನನ್ನನ್ನು ಕರೆಸಿಕೊಂಡರು. ನಾನು ಬರೆದಿಟ್ಟುಕೊಂಡಿದ್ದ, ಆ ನನ್ನ ಬರಹಗಳನ್ನು ಓದಿ ಬೆನ್ನು ತಟ್ಟಿದರು. ‘ಹೀಗೆ ಬರಿಯೋ, ಇದನ್ನೆಲ್ಲಾ ನೋಡಿ ನನಗೆ ನಿನ್ನೊಳಗೊಬ್ಬ ಲೇಖಕ ಇದ್ದಾನೆಂದು ಅನಿಸುತ್ತಿದೆ. ಕುವೆಂಪು, ಬೇಂದ್ರೆ, ತೇಜಸ್ವಿ, ಕಾರಂತ, ಕಾಯ್ಕಿಣಿಯಂತಹ ಲೇಖಕರ ಕೃತಿಗಳನ್ನು ಓದು’ ಎಂದು ಪ್ರೋತ್ಸಾಹ ನೀಡಿದರು. ಅವರ ಮಾತುಗಳು ನನ್ನ ಹವ್ಯಾಸಕ್ಕೆ ಮತ್ತಷ್ಟು ಇಂಬು ನೀಡಿತು. ನಾನು ಯುವ ಸಾಹಿತಿ ಎಂದು ಹೆಸರು ಗಳಿಸಲು ಅವರೇ ಕಾರಣ.
– ಮಂಜುನಾಥ ಎಸ್.ಕಟ್ಟಿಮನಿ, ವಿಜಯಪುರ
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.