ADVERTISEMENT

ಅಂಧರ ಟಿ-20: ಇಂಡಿಯಾ ರೆಡ್‌ಗೆ ಪ್ರಶಸ್ತಿ

​ಪ್ರಜಾವಾಣಿ ವಾರ್ತೆ
Published 9 ಅಕ್ಟೋಬರ್ 2012, 19:30 IST
Last Updated 9 ಅಕ್ಟೋಬರ್ 2012, 19:30 IST

ಧಾರವಾಡ: ಸೋಮವಾರ ಸುರಿದ ಧಾರಾಕಾರ ಮಳೆಯಿಂದಾಗಿ ಓವರ್‌ಗಳನ್ನು ಕಡಿತಗೊಳಿಸಿದರೂ ಪ್ರೇಕ್ಷಕರಿಗೆ ನಿರಾಸೆಯಾಗಲಿಲ್ಲ. ಒಂದೆಡೆ      ಬೌಂಡರಿ ಮೇಲೆ ಬೌಂಡರಿ ಸಿಡಿಸಿದ ಹನುಮಾನ್ ಪೂಣಿಯಾ, ಇನ್ನೊಂದೆಡೆ ಆಕರ್ಷಕ ಸಿಕ್ಸರ್‌ಗಳ ಮೂಲಕ ರಂಜಿಸಿದ ಜೆ.ಪ್ರಕಾಶ್ ಕ್ರಿಕೆಟ್   ಪ್ರಿಯರಿಗೆ ಭರಪೂರ ಭೋಜನ ಉಣಬಡಿಸಿದರು.

ಇವರಿಬ್ಬರ ಅಬ್ಬರದ ಬ್ಯಾಟಿಂಗ್ ನೆರವಿನಿಂದ ಇಂಡಿಯಾ ರೆಡ್ ತಂಡದವರು ಭಾರತೀಯ ಅಂಧರ ಕ್ರಿಕೆಟ್ ಸಂಸ್ಥೆ, ಸಮರ್ಥನಂ ಹಾಗೂ ಲಯನ್ಸ್ ಕ್ಲಬ್ ಆಶ್ರಯದ ಅಂಧರ ರಾಷ್ಟ್ರೀಯ ಟಿ-20 ಕ್ರಿಕೆಟ್ ಟೂರ್ನಿಯಲ್ಲಿ ಚಾಂಪಿಯನ್ ಆದರು.

ಮಂಗಳವಾರ ಇಲ್ಲಿನ ಎಸ್‌ಡಿಎಂ ದಂತ ವೈದ್ಯಕೀಯ ಕಾಲೇಜು ಮೈದಾನದಲ್ಲಿ ನಡೆದ ಫೈನಲ್‌ನಲ್ಲಿ ಮೊದಲು ಬ್ಯಾಟ್ ಮಾಡಿದ  ಇಂಡಿಯಾ ರೆಡ್ 15 ಓವರ್‌ಗಳಲ್ಲಿ 7 ವಿಕೆಟ್ ಕಳೆದುಕೊಂಡು 212 ರನ್ ಗಳಿಸಿತು.

ಹನುಮಾನ್ ಪೂಣಿಯಾ (65, 62 ಎಸೆತ, 6 ಬೌಂಡರಿ) ಹಾಗೂ ನಾಯಕ, ಕನ್ನಡಿಗ ಜೆ. ಪ್ರಕಾಶ್ (32, 16 ಎಸೆತ, 2 ಸಿಕ್ಸರ್) ಅಬ್ಬರದ ಬ್ಯಾಟಿಂಗ್ ಮುಂದೆ ಎದುರಾಳಿ ಬೌಲರ್‌ಗಳು ಪರದಾಟ ನಡೆಸಿದರು.

ಸವಾಲಿನ ಮೊತ್ತವನ್ನು ಬೆನ್ನು ಹತ್ತಿದ ಇಂಡಿಯಾ ಬ್ಲೂ ತಂಡ 6 ಓವರ್‌ಗಳಲ್ಲಿ 159 ರನ್ ಮಾತ್ರ ಗಳಿಸಲು ಶಕ್ತವಾಯಿತು.

ಸ್ಕೋರ್ ವಿವರ: ಇಂಡಿಯಾ ರೆಡ್: 15 ಓವರ್‌ಗಳಲ್ಲಿ 7 ವಿಕೆಟ್‌ಗಳಿಗೆ 212 (ಹನುಮಾನ್ ಪೂಣಿಯಾ 65, ಜೆ.ಪ್ರಕಾಶ್ 32; ಹಿತೇಶ್ ಪಟೇಲ್ 25ಕ್ಕೆ 1, ಭಿಕ್ರಂ 19ಕ್ಕೆ1); ಇಂಡಿಯಾ ಬ್ಲೂ: 15 ಓವರ್‌ಗಳಲ್ಲಿ 6 ವಿಕೆಟ್‌ಗಳಿಗೆ 159 (ಸುಖರಾಮ್ 63, ಶೇಖರ್ ನಾಯಕ್ 23, ಹನುಮಾನ್ ಪೂಣಿಯಾ 25ಕ್ಕೆ 1, ಥೋಮಸ್ ಎ 28ಕ್ಕೆ 2). ಫಲಿತಾಂಶ-ಇಂಡಿಯಾ ರೆಡ್‌ಗೆ 53 ರನ್‌ಗಳ ಜಯ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.