ಇಂದೋರ್: ಪಾಯಿಂಟ್ಸ್ ಪಟ್ಟಿಯ ಕೊನೆಯ ಸ್ಥಾನಕ್ಕೆ ಕುಸಿದಿರುವ ರಾಜಸ್ಥಾನ್ ರಾಯಲ್ಸ್ ತಂಡವು ಭಾನುವಾರ ಇಲ್ಲಿಯ ಹೋಳ್ಕರ್ ಕ್ರೀಡಾಂಗಣದಲ್ಲಿ ಕಿಂಗ್ಸ್ ಇಲೆವನ್ ಪಂಜಾಬ್ ತಂಡವನ್ನು ಎದುರಿಸಲಿದೆ.
ಎರಡೂ ತಂಡಗಳು ಈಗ ಜಯಿಸುವ ತವಕದಲ್ಲಿರುವುದರಿಂದ ಈ ಪಂದ್ಯವು ಕುತೂಹಲ ಕೆರಳಿಸಿದೆ. ಶುಕ್ರವಾರ ಇಲ್ಲಿ ನಡೆದಿದ್ದ ಪಂದ್ಯದಲ್ಲಿ ಕಿಂಗ್ಸ್ ತಂಡವು ಮುಂಬೈ ಇಂಡಿಯನ್ಸ್ ಎದುರು ಸೋತಿತ್ತು.
ಆದರೆ ಒಟ್ಟು ಎಂಟು ಪಂದ್ಯಗಳನ್ನು ಆಡಿರುವ ಆರ್. ಅಶ್ವಿನ್ ನಾಯಕತ್ವದ ಕಿಂಗ್ಸ್ ತಂಡವು ಐದರಲ್ಲಿ ಜಯಿಸಿ ಮೂರರಲ್ಲಿ ಸೋತಿದೆ.
ಅಜಿಂಕ್ಯ ರಹಾನೆ ನಾಯಕತ್ವದ ರಾಜಸ್ಥಾನ್ ತಂಡದ ಕಥೆ ಇದಕ್ಕೆ ತದ್ವಿರುದ್ಧವಾಗಿದೆ. ಐದು ಪಂದ್ಯಗಳಲ್ಲಿ ಸೋತು ಮೂರರಲ್ಲಿ ಜಯಿಸಿದೆ. ತಂಡವು ಮೂರು ದಿನಗಳ ಹಿಂದೆ ಸನ್ರೈಸರ್ಸ್ ವಿರುದ್ಧ ಪರಾಭವ ಗೊಂಡಿತ್ತು.
ಮುಂಬೈ ಎದುರಿನ ಪಂದ್ಯದಲ್ಲಿ ಕಿಂಗ್ಸ್ ತಂಡಕ್ಕೆ ಕೆ.ಎಲ್. ರಾಹುಲ್ ಮತ್ತು ಕ್ರಿಸ್ ಗೇಲ್ ಉತ್ತಮ ಆರಂಭ ನೀಡಿದ್ದರು. ಕರುಣ್ ನಾಯರ್ ಮತ್ತು ಯುವರಾಜ್ ಸಿಂಗ್ ಮಧ್ಯಮ ಕ್ರಮಾಂಕದಲ್ಲಿ ಮಿಂಚಿದ್ದರು. ಬೌಲರ್ಗಳಾದ ಮುಜೀಬ್ ಉರ್ ರೆಹಮಾನ್, ಆ್ಯಂಡ್ರ್ಯೂ ಟೈ, ಅಕ್ಷರ್ ಪಟೇಲ್ ಅವರು ಎದುರಾಳಿ ಬ್ಯಾಟ್ಸ್ ಮನ್ಗಳನ್ನು ನಿಯಂತ್ರಿಸುವಲ್ಲಿ ವಿಫಲರಾದರು.
ಈ ಪಂದ್ಯದಲ್ಲಿ ರಾಜಸ್ಥಾನ್ ತಂಡದ ಸಂಜು ಸ್ಯಾಮ್ಸನ್, ಡಿಆರ್ಚಿ ಶಾರ್ಟ್, ಬೆನ್ ಸ್ಟೋಕ್ಸ್, ರಾಹುಲ್ ತ್ರಿಪಾಠಿ, ಜಾಸ್ ಬಟ್ಲರ್ ಅವ ರನ್ನು ಕಟ್ಟಿಹಾಕುವ ಸವಾಲು ಬೌಲರ್ಗಳ ಮುಂದಿದೆ.
ಪಂಜಾಬ್ ತಂಡದ ಬ್ಯಾಟಿಂಗ್ ಪಡೆ ಉತ್ತಮವಾಗಿದೆ. ರಾಹುಲ್, ಕರುಣ್, ಗೇಲ್, ಮಯಂಕ್ ಅವರು ಉತ್ತಮ ಲಯದಲ್ಲಿದ್ದಾರೆ.
ಟೂರ್ನಿಯ ಆರಂಭದಲ್ಲಿ ಉತ್ತಮ ವಾಗಿ ಆಡಿದ್ದ ರಾಜಸ್ಥಾನ್ ನಂತರ ಮಂಕಾಗಿದೆ. ಮುಂದಿನ ಆರು ಪಂದ್ಯಗಳಲ್ಲಿ ಉತ್ತಮ ರನ್ರೇಟ್ನೊಂದಿಗೆ ಗೆದ್ದು ಪ್ಲೇಆಫ್ ಪ್ರವೇಶಿಸುವ ಸವಾಲು ಎದುರಿಸುತ್ತಿದೆ.
ಪಂದ್ಯದ ಆರಂಭ: ರಾತ್ರಿ 8
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.