ಮೂಡುಬಿದಿರೆ: ದೇಶದ 65 ವಿಶ್ವವಿದ್ಯಾಲಯಗಳು, ಶನಿವಾರ ಮೂಡುಬಿದಿ ರೆಯ ಆಳ್ವಾಸ್ ಶಿಕ್ಷಣ ಸಂಸ್ಥೆಯ ವಿದ್ಯಾಗಿರಿ ಕ್ರೀಡಾಂಗಣದಲ್ಲಿ ಆರಂಭವಾಗುವ ಅಖಿಲ ಭಾರತ ಅಂತರ ವಿಶ್ವವಿದ್ಯಾಲಯ ಪುರುಷರ ಬಾಲ್ಬ್ಯಾಡ್ಮಿಂಟನ್ ಟೂರ್ನಿಯಲ್ಲಿ ಭಾಗವಹಿಸುವ ನಿರೀಕ್ಷೆಯಿದೆ.
ಮಂಗಳೂರು ವಿಶ್ವವಿದ್ಯಾನಿಲಯ ಹಾಗೂ ಆಳ್ವಾಸ್ ಕಾಲೇಜು ಜಂಟಿ ಆಶ್ರಯದಲ್ಲಿ ಟೂರ್ನಿ ನಡೆಯುತ್ತಿದ್ದು, ಆರು ಅಂಕಣ ಸಜ್ಜುಗೊಳಿಸಲಾಗಿದೆ. ಪಂದ್ಯಾಟಗಳು ನಾಕೌಟ್ ಹಾಗೂ ಸೆಮಿಫೈನಲ್ಸ್ ನಂತರ ಲೀಗ್ ಮಾದರಿಯಲ್ಲಿ ನಡೆಯಲಿವೆ.
ಕಳೆದ ಬಾರಿಯ ಚಾಂಪಿಯನ್ ಚೆನ್ನೈನ ಅಣ್ಣಾ ವಿ.ವಿ., ತಮಿಳುನಾಡಿನ ಎಸ್.ಆರ್.ಎಂ. ವಿ.ವಿ., ಚಿದಂಬರಂನ ಅಣ್ಣಾಮಲೈ ವಿ.ವಿ. ಹಾಗೂ ಆತಿಥೇಯ ಮಂಗಳೂರು ವಿವಿ ತಂಡಗಳು, ಕಳೆದ ಬಾರಿ ತೋರಿದ ನಿರ್ವಹಣೆಯ ಅಧಾರದ ಮೇಲೆ ನೇರವಾಗಿ ಕ್ವಾರ್ಟರ್ಫೈನಲ್ ಪ್ರವೇಶ ಪಡೆದಿವೆ.
ದೇಶದ ಹಿರಿಯ ಆಟಗಾರ ನಿಸಾರ್ ಚಾಂಪಿಯನ್ಷಿಪ್ ಉದ್ಘಾಟಿಸಲಿದ್ದು, ಭಾರತೀಯ ಬಾಲ್ಬ್ಯಾಡ್ಮಿಂಟನ್ ಫೆಡರೇಷನ್ ಕಾರ್ಯದರ್ಶಿ ಚತ್ತೀಸ್ಗಢದ ರಾಜಾರಾವ್, ರಾಜ್ಯ ಸಂಸ್ಥೆ ಅಧ್ಯಕ್ಷ ಪ್ರಕಾಶ್ ಹೆಬ್ಬಾಳ, ಶಾಸಕ ಕೆ.ಅಭಯಚಂದ್ರ ಜೈನ್ ಭಾಗವಹಿಸಲಿದ್ದು, ಆಳ್ವಾಸ್ ಶಿಕ್ಷಣ ಸಂಸ್ಥೆ ಅಧ್ಯಕ್ಷ ಎಂ.ಮೋಹನ ಆಳ್ವ ಅಧ್ಯಕ್ಷತೆ ವಹಿಸುವರು.
ಕಳೆದ ಡಿಸೆಂಬರ್ನಲ್ಲಿ ಮಹಿಳೆಯರ ಬಾಲ್ಬ್ಯಾಡ್ಮಿಂಟನ್ ಟೂರ್ನಿ ಮೂಡುಬಿದಿರೆಯಲ್ಲೇ ನಡೆದಿದ್ದು, ಮಂಗಳೂರು ವಿ.ವಿ. ಪ್ರಶಸ್ತಿ ಗೆದ್ದುಕೊಂಡಿತ್ತು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.