ADVERTISEMENT

ಐಟಿಎಫ್ ಟೆನಿಸ್: ಪ್ರಿ ಕ್ವಾರ್ಟರ್ ಫೈನಲ್‌ಗೆ ಸಾಗರ್

​ಪ್ರಜಾವಾಣಿ ವಾರ್ತೆ
Published 29 ಮೇ 2012, 19:30 IST
Last Updated 29 ಮೇ 2012, 19:30 IST

ಮಂಡ್ಯ: `ವೈಲ್ಡ್ ಕಾರ್ಡ್~ ಪ್ರವೇಶ ಪಡೆದಿರುವ ಕರ್ನಾಟಕದ ಸಾಗರ್ ಮಂಜಣ್ಣ ಇಲ್ಲಿ ನಡೆಯುತ್ತಿರುವ ಪ್ರೇಮ್ ಶುಗರ್ಸ್‌ ಐಟಿಎಫ್ ಪುರುಷರ ಟೆನಿಸ್ ಟೂರ್ನಿಯ ಸಿಂಗಲ್ಸ್ ವಿಭಾಗದಲ್ಲಿ ಪ್ರಿ ಕ್ವಾರ್ಟರ್ ಫೈನಲ್ ಪ್ರವೇಶಿಸಿದ್ದಾರೆ.
ಪಿಇಟಿ ಕೋರ್ಟ್‌ನಲ್ಲಿ ಮಂಗಳವಾರ ನಡೆದ ಪಂದ್ಯದಲ್ಲಿ ಎರಡು ಗಂಟೆ 30 ನಿಮಿಷ ಹೋರಾಟ ನಡೆಸಿದ ಮಂಜಣ್ಣ 6-3, 7-6ರಲ್ಲಿ ರಿಷಾಬ್‌ದೇವ್ ರಾಮನ್ ಎದುರು ಗೆಲುವು ಪಡೆದರು. ಕರ್ನಾಟಕ ರಾಜ್ಯ ಲಾನ್ ಟೆನಿಸ್ ಸಂಸ್ಥೆಯಲ್ಲಿ (ಕೆಎಸ್‌ಎಲ್‌ಟಿಎ) ತರಬೇತಿ ಪಡೆಯುತ್ತಿರುವ ಮಂಜಣ್ಣ ಈ ಗೆಲುವಿನ ಮೂಲಕ ಮೊದಲ ಸಲ ಎಟಿಪಿ ಪಾಯಿಂಟ್ಸ್ ಗಿಟ್ಟಿಸಿದರು.

`ಈ ಟೂರ್ನಿಯಲ್ಲಿ ನೀಡುತ್ತಿರುವ ಪ್ರದರ್ಶನದಿಂದ ಸಂತಸವಾಗಿದೆ. ನನಗೆ `ವೈಲ್ಡ್ ಕಾರ್ಡ್~ ಪ್ರವೇಶ ಲಭಿಸಿದ್ದರಿಂದ ನನ್ನ ವೃತ್ತಿ ಜೀವನಕ್ಕೆ ಮಹತ್ವದ ತಿರುವು ಲಭಿಸಿತು~ ಎಂದು ಸಾಗರ್ ಸಂತಸ ವ್ಯಕ್ತಪಡಿಸಿದರು.
ಸಿಂಗಲ್ಸ್ ವಿಭಾಗದ ಇತರ ಪಂದ್ಯಗಳಲ್ಲಿ ಎಲ್ವಿನ್ ಅಂಥೋನಿ 6-1, 6-3ರಲ್ಲಿ ಅರವಿಂದ್ ವಿಷ್ಣು ಮೇಲೂ, ವಿಘ್ನೇಶ್ ವೀರವರ್ಧನ್ 6-4, 7-5ರಲ್ಲಿ ಅಜಯ್ ಸೆಲ್ವರಾಜನ್ ವಿರುದ್ಧವೂ ಫ್ರಾನ್ಸ್‌ನ ಸೆಬಾಸ್ಟಿಯನ್ ಬೋಲ್ಟ್ 6-4, 6-0ರಲ್ಲಿ ಭಾರತದ ಕೃಷಿಕ್ ದಿವಾಕರ್ ಮೇಲೂ, ರಜತ್ ಮಹೇಶ್ವರಿ 6-2, 6-2ರಲ್ಲಿ ಜೋಶು ಜೋನೆಸ್ ವಿರುದ್ಧವೂ, ಕೆ. ವಿನಾಯಕ ಶರ್ಮ 6-2, 3-6, 6-4ರಲ್ಲಿ ಇಟಲಿಯ ಫ್ರಾನ್ಸಿಸ್ಕೊ ವಿಲಾರ್ದೊ ಮೇಲೂ, ವೈಜಯಂತ್ ಮಲಿಕ್ 6-0, 6-3ರಲ್ಲಿ ಅಮೆರಿಕದ ವಿಜು ಜಾರ್ಜ್ ಜೆ.ಆರ್. ವಿರುದ್ಧವೂ ಗೆಲುವು ಸಾಧಿಸಿ ಹದಿನಾರರ ಘಟ್ಟಕ್ಕೆ ಲಗ್ಗೆ ಇಟ್ಟರು.

ಫಾರೀಜ್‌ಗೆ ನಿರಾಸೆ: ಭಾರತದ ಫಾರೀಜ್ ಮಹಮ್ಮದ್ ಎರಡನೇ ಸುತ್ತಿನ ಪಂದ್ಯದಲ್ಲಿ ನಿರಾಸೆ ಅನುಭವಿಸಿ ಟೂರ್ನಿಯಿಂದ ಹೊರ ಬಿದ್ದರು. ಅಶ್ವಿನ್ ವಿಜಯ್‌ರಾಘವನ್ 6-3, 6-1ರಲ್ಲಿ ಫಾರೀಜ್ ಎದುರು ಗೆಲುವು ಪಡೆದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.