ADVERTISEMENT

ಐರ್ಲೆಂಡ್ ವಿರುದ್ಧ ಬಾಂಗ್ಲಾದೇಶ ಸೇಡಿನ ಕಿಡಿ

​ಪ್ರಜಾವಾಣಿ ವಾರ್ತೆ
Published 24 ಫೆಬ್ರುವರಿ 2011, 18:15 IST
Last Updated 24 ಫೆಬ್ರುವರಿ 2011, 18:15 IST

ಮೀರ್‌ಪುರ (ಪಿಟಿಐ): ಭಾರತ ವಿರುದ್ಧ ವಿಶ್ವಕಪ್ ಕ್ರಿಕೆಟ್ ಉದ್ಘಾಟನಾ ಪಂದ್ಯದಲ್ಲಿ ನಿರಾಸೆ ಹೊಂದಿದ ಬಾಂಗ್ಲಾದೇಶ ಮತ್ತೆ ಪುಟಿದೇಳುವ ಉತ್ಸಾಹದಲಿದೆ. ಶುಕ್ರವಾರ ಐರ್ಲೆಂಡ್ ತಂಡದ ಮೇಲೆ ಪ್ರಾಬಲ್ಯ ಮೆರೆದು, ಪಾಯಿಂಟ್ ಖಾತೆ ತೆರೆಯಲು ಕಾತರದಿಂದ ಕಾಯ್ದಿದೆ.

2007ರಲ್ಲಿ ಸೂಪರ್-8 ಹಂತದಲ್ಲಿ ಐರ್ಲೆಂಡ್ ವಿರುದ್ಧ 74 ರನ್‌ಗಳ ಅಂತರದಲ್ಲಿ ಬಾಂಗ್ಲಾದೇಶದವರು ಆಘಾತ ಅನುಭವಿಸಿದ್ದರು. ಆನಂತರ 2009ರ ಟ್ವೆಂಟಿ-20 ವಿಶ್ವಕಪ್‌ನಲ್ಲಿಯೂ ಏಷ್ಯಾದ ಇದೇ ತಂಡವು ಐರ್ಲೆಂಡ್‌ಗೆ ಶರಣಾಗಿತ್ತು. ಆ ಸೋಲಿನ ನೆನಪುಗಳು ಶಕೀಬ್ ಅಲ್ ಹಸನ್ ನಾಯತ್ವದ ತಂಡವನ್ನು ಈಗಲೂ ಕಾಡುತ್ತಿವೆ.

ಹಿಂದೆ ಅನುಭವಿಸಿದ ನಿರಾಸೆಯನ್ನು ಮರೆಯುವಂಥ ಜಯ ಪಡೆದು ಸೇಡು ತೀರಿಸಿಕೊಳ್ಳುವುದು ಬಾಂಗ್ಲಾ ಉದ್ದೇಶ ಹಾಗೂ ಗುರಿ. ವಿಲಿಯಮ್ ಪೋಟರ್‌ಫೀಲ್ಡ್ ನೇತೃತ್ವದ ಪಡೆಯವರು ಕೂಡ ಆತಿಥೇಯ ಬಾಂಗ್ಲಾದೇಶಕ್ಕೆ ಮತ್ತೊಂದು ಆಘಾತ ನೀಡಲು ಯೋಜನೆಯ ಬಲೆಯನ್ನು ಹೆಣೆದುಕೊಂಡು ಸಜ್ಜಾಗಿದ್ದಾರೆ.

ಲೀಗ್ ಪಟ್ಟಿಯಲ್ಲಿ ಐರ್ಲೆಂಡ್‌ಗಿಂತ ಮೇಲೆ ಇರುವುದಕ್ಕೆ ಜಯ ಪಡೆಯುವುದು ಅಗತ್ಯ ಎನ್ನುವುದನ್ನು ಬಾಂಗ್ಲಾದವರು ಸ್ಪಷ್ಟವಾಗಿ ಅರಿತಿದ್ದಾರೆ. ಈ ಪಂದ್ಯದಲ್ಲಿ ತಪ್ಪು ಮಾಡಿದರೆ ಮುಂದೆ ಭಾರಿ ಒತ್ತಡದಲ್ಲಿ ಆಡಬೇಕಾಗುತ್ತದೆ. ಆದ್ದರಿಂದ ಜಯದೊಂದಿಗೆ ಎರಡನೇ ಪಂದ್ಯದಲ್ಲಿ ಚೇತರಿಸಿಕೊಂಡು ಎದ್ದು ನಿಲ್ಲುವುದು ನಾಯಕ ಹಸನ್ ಆಶಯ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.