ಕೆನ್ನಿಂಗ್ಟನ್ ಓವೆಲ್(ಲಂಡನ್): ಐಸಿಸಿ ಚಾಂಪಿಯನ್ಸ್ ಟ್ರೋಫಿ ಮಹತ್ವದ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ತಂಡ ಕೇವಲ 191 ರನ್ಗಳಿಗೆ ಆಲೌಟ್ ಆಗುವ ಮೂಲಕ ಭಾರತ ಗೆಲುವಿಗೆ 192ರನ್ಗಳ ಸಾಧಾರಣ ಗುರಿ ನೀಡಿದೆ.
ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ವಿಲಿಯರ್ಸ್ ನೇತೃತ್ವದ ಆಫ್ರಿಕಾ ತಂಡ ಮೊದಲ ವಿಕೆಟ್ಗೆ 75ರನ್ ಕಲೆ ಹಾಕುವ ಮೂಲಕ ಭಾರತ ತಂಡಕ್ಕೆ ಸವಾಲಾಗುವ ಆತಂಕ ಮೂಡಿಸಿದ್ದರು. ಆದರೆ ಅಶ್ವಿನ್ ತಾವೆಸೆದ 17ನೇ ಓವರ್ನ 3ನೇ ಎಸೆತದಲ್ಲಿ ರಕ್ಷಣಾತ್ಮಕವಾಗಿ ಆಡುತ್ತಿದ್ದ ಹಾಶೀಂ ಆಮ್ಲಾ(35) ಅವರನ್ನು ಔಟ್ ಮಾಡುವ ಮೂಲಕ ತಂಡಕ್ಕೆ ಮೊದಲ ಯಶ ತಂದುಕೊಟ್ಟರು.
ಬಳಿಕ ಕ್ವಿಂಟಾನ್ ಡಿ ಕಾಕ್(56) ಹಾಗೂ ಪಾಪ್ ಡು ಫ್ಲೆಸಿಸ್(36) ಎರಡನೇ ವಿಕೆಟ್ ಪಾಲುದಾರಿಕೆಯಲ್ಲಿ 40ರನ್ ಸೇರಿಸಿದ್ದು ಬಿಟ್ಟರೆ ಉಳಿದ ಆಟಗಾರರಿಂದ ಸಾಮರ್ಥ್ಯಕ್ಕೆ ತಕ್ಕ ಆಟ ಮೂಡಿಬರಲಿಲ್ಲ.
ಒಂದು ಹಂತದಲ್ಲಿ 140ರನ್ಗಳಿಗೆ 2ವಿಕೆಟ್ ಕಳೆದುಕೊಂಡು ಉತ್ತಮವಾಗಿ ಆಡುತ್ತಿದ್ದ ವಿಲಿಯರ್ಸ್ ಪಡೆ ತಂಡದ ಮೊತ್ತಕ್ಕೆ ಕೇವಲ 51ರನ್ ಕೂಡಿಸುವುದರೊಳಗೆ ಆಲೌಟ್ ಆಯಿತು. ತಂಡದ ಮೊತ್ತ 140 ಹಾಗೂ 142 ಆಗಿದ್ದ ವೇಳೆ ಒಬ್ಬರ ಹಿಂದೆ ಒಬ್ಬರಂತೆ ವಿಲಿಯರ್ಸ್(16) ಹಾಗೂ ಡೇವಿಡ್ ಮಿಲ್ಲರ್(1) ರನ್ ಔಟ್ ಆಗಿ ಪೆವಿಲಿಯನ್ ಸೇರುತ್ತಿದ್ದಂತೆ ಪಂದ್ಯ ನಾಟಕೀಯ ತಿರುವು ಪಡೆಯಿತು.
ಭಾರತ ಪರ ಉತ್ತಮ ದಾಳಿ ಸಂಘಟಿಸಿದ ಭುವನೇಶ್ವರ್ ಕುಮಾರ್ ಹಾಗೂ ಜಸ್ಪ್ರೀತ್ ಬೂಮ್ರಾ ತಲಾ 2 ವಿಕೆಟ್ ಪಡೆದರು. ರವಿಚಂದ್ರನ್ ಅಶ್ವಿನ್, ಹಾರ್ಧಿಕ್ ಪಾಂಡ್ಯ ಮತ್ತು ರವೀಂದ್ರ ಜಡೇಜಾ ತಲಾ ಒಂದು ವಿಕೆಟ್ ಪಡೆದು ಸಂಭ್ರಮಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.