ಲಂಡನ್ (ಐಎಎನ್ಎಸ್): ಭಾರತದ ವಿರುದ್ಧ ಕೋಲ್ಕತ್ತದಲ್ಲಿ ನಡೆಯಬೇಕಿದ್ದ ವಿಶ್ವಕಪ್ ಟೂರ್ನಿಯ ಪಂದ್ಯವನ್ನು ಸ್ಥಳಾಂತರಿಸಿರುವುದಕ್ಕೆ ಇಂಗ್ಲೆಂಡ್ ಆಟಗಾರರು ನಿರಾಸೆ ವ್ಯಕ್ತಪಡಿಸಿದ್ದಾರೆ.
ಫೆ. 27 ರಂದು ನಡೆಯಬೇಕಿದ್ದ ಭಾರತ- ಇಂಗ್ಲೆಂಡ್ ನಡುವಿನ ಪಂದ್ಯವನ್ನು ಈಡನ್ ಗಾರ್ಡನ್ಸ್ನಿಂದ ಬೇರೆ ಕಡೆಗೆ ಸ್ಥಳಾಂತರಿಸಲು ಐಸಿಸಿ ಗುರುವಾರ ಬಿಸಿಸಿಐಗೆ ಸೂಚಿಸಿತ್ತು.‘ವಿಶ್ವಕಪ್ ಟೂರ್ನಿಗೆ ಈಡನ್ ಗಾರ್ಡನ್ಸ್ ಸಿದ್ಧವಾಗದೇ ಇರುವುದು ನಾಚಿಕೆಗೇಡಿನ ವಿಷಯ. ಅಲ್ಲಿ ನಮ್ಮ ಪಂದ್ಯ ಒಂದು ಲಕ್ಷಕ್ಕೂ ಅಧಿಕ ಪ್ರೇಕ್ಷಕರ ಸಮ್ಮುಖದಲ್ಲಿ ನಡೆಯುವ ಸಾಧ್ಯತೆಯಿತ್ತು’ ಎಂದು ಇಂಗ್ಲೆಂಡ್ ವೇಗಿ ಸ್ಟುವರ್ಟ್ ಬ್ರಾಡ್ ‘ಟ್ವಿಟರ್’ನಲ್ಲಿ ಬರೆದಿದ್ದಾರೆ.
ಕೊನೆಯ ಕ್ಷಣದಲ್ಲಿ ಈ ರೀತಿ ತಾಣವನ್ನು ಬದಲಿಸಿರುವುದು ಸರಿಯಲ್ಲ ಎಂದು ತಂಡದ ಇನ್ನೊಬ್ಬ ವೇಗಿ ಕ್ರಿಸ್ ಟ್ರೆಮ್ಲೆಟ್ ಹೇಳಿದ್ದಾರೆ. ‘ನಮ್ಮ ತಂಡದ ಸಾವಿರಾರು ಅಭಿಮಾನಿಗಳು ಈಗಾಗಲೇ ಕೋಲ್ಕತ್ತಕ್ಕೆ ವಿಮಾನ ಟಿಕೆಟ್ ಬುಕ್ ಮಾಡಿರಬಹುದು. ಅಲ್ಲಿಗೆ ಪ್ರಯಾಣಿಸಲು ಎಲ್ಲ ಸಿದ್ಧತೆ ಮಾಡಿದ್ದಾರೆ. ಐಸಿಸಿಯ ನಿರ್ಧಾರ ಎಲ್ಲರಿಗೂ ಸಮಸ್ಯೆ ಉಂಟುಮಾಡಿದೆ’ ಎಂದು ಅವರು ‘ದಿ ಗಾರ್ಡಿಯನ್’ ಪತ್ರಿಕೆಗೆ ತಿಳಿಸಿದ್ದಾರೆ.
‘ಅಭಿಮಾನಿಗಳು ತಮಗೆ ಎದುರಾದ ಸಮಸ್ಯೆಯನ್ನು ನಿಭಾಯಿಸುವ ವಿಶ್ವಾಸವಿದೆ. ಮಾತ್ರವಲ್ಲ ಈ ಬೆಳವಣಿಗೆ ತಂಡದ ಮೇಲೆ ಯಾವುದೇ ಪರಿಣಾಮ ಬೀರದು’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.