ADVERTISEMENT

ಕನ್ನಡದ ಹುಡುಗ ಅರವಿಂದ್ ಉತ್ಸಾಹ

​ಪ್ರಜಾವಾಣಿ ವಾರ್ತೆ
Published 12 ಅಕ್ಟೋಬರ್ 2011, 19:30 IST
Last Updated 12 ಅಕ್ಟೋಬರ್ 2011, 19:30 IST

ಹೈದರಾಬಾದ್: ಉಪ್ಪಳದ ರಾಜೀವಗಾಂಧಿ ಅಂತರರಾಷ್ಟ್ರೀಯ ಕ್ರೀಡಾಂಗಣದಲ್ಲಿ ನೀಳಕಾಯದ ಎಸ್. ಅರವಿಂದ್ ಹಾಕುತ್ತಿದ್ದ ಒಂದೊಂದು ಎಸೆತದಲ್ಲಿಯೂ ಉತ್ಸಾಹ, ಆತ್ಮವಿಶ್ವಾಸ ಪುಟಿಯುತ್ತಿತ್ತು.

ಇದೇ ಮೊದಲ ಬಾರಿಗೆ ಭಾರತ ತಂಡಕ್ಕೆ ಆಯ್ಕೆಯಾಗಿರುವ ಅರವಿಂದ್‌ಗೆ ಶುಕ್ರವಾರದ ಪಂದ್ಯದಲ್ಲಿ ಅವಕಾಶ ಸಿಗುತ್ತದೆಯೋ ಇಲ್ಲವೋ ಗೊತ್ತಿಲ್ಲ. ಆದರೆ ಕರ್ನಾಟಕದ ಇನ್ನೊಬ್ಬ ಬೌಲರ್ ವಿನಯಕುಮಾರ್ ಅವರೊಂದಿಗೆ ಭಾರತ ತಂಡದಲ್ಲಿ ಆಡುವ ಅವಕಾಶವಂತೂ ಅರವಿಂದ್‌ಗೆ ಸಿಕ್ಕಿದೆ.

ಮಂಗಳವಾರ ನೆಟ್ಸ್‌ನಲ್ಲಿ ಎಲ್ಲ ಆಟಗಾರರೊಂದಿಗೆ ಬೆರೆತಿದ್ದ ಅವರು ಬೌಲಿಂಗ್ ಅಭ್ಯಾಸದಲ್ಲಿ ಬಹಳಷ್ಟು ಸಮಯ ಕಳೆದರು. ಅವರೊಂದಿಗೆ ವಿನಯಕುಮಾರ್ ಕೂಡ ಬೌಲಿಂಗ್ ಅಭ್ಯಾಸ ನಡೆಸಿದರು.

ಕರ್ನಾಟಕದ ರಣಜಿ ತಂಡದ ಅಭಿಮನ್ಯು ಮಿಥುನ್ ಮತ್ತು ವಿನಯಕುಮಾರ್ ಅವರ ಜೊತೆಗೆ ರಾಜ್ಯ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದವರು. ನೀಳಕಾಯದ ಅರವಿಂದ್ ಸ್ವಿಂಗ್, ಕಟರ್‌ಗಳನ್ನು ಪ್ರಯೋಗಿಸುವ ಕಲೆಯನ್ನು ಕಲಿತಿದ್ದಾರೆ. ಜಹೀರ್ ಖಾನ್ ಸೇವೆ ಲಭ್ಯವಿಲ್ಲದ ಭಾರತ ತಂಡದ ಬೌಲಿಂಗ್ ವಿಭಾಗದಲ್ಲಿ  ಪ್ರವೀಣಕುಮಾರ್ ಅವರಿಗೆ ಸಾಥ್ ಕೊಡಲು ವಿನಯಕುಮಾರ್‌ಗೆ ಅವಕಾಶ ಸಿಗುವ ನಿರೀಕ್ಷೆಯಿದೆ.
 
ನಂತರ ಉಮೇಶ್ ಯಾದವ್, ವರುಣ ಆ್ಯರನ್ ಮತ್ತು ಅರವಿಂದ್ ಅವರಲ್ಲಿ ಯಾರಾದರು ಒಬ್ಬರಿಗೆ ಅಂತಿಮ ಹನ್ನೊಂದರ ಪಟ್ಟಿಯಲ್ಲಿ ಸ್ಥಾನ ಸಿಗಬಹುದು.  ಪ್ರತಿಭಾವಂತ ಎಡಗೈ ಬೌಲರ್ ಅರವಿಂದ್‌ಗೆ  ಈ ಸರಣಿಯ ಮೊದಲ ಎರಡು ಪಂದ್ಯಗಳಿಗಾಗಿ ತಂಡಕ್ಕೆ ಆಯ್ಕೆಯಾಗಿದ್ದಾರೆ.  ಅದೃಷ್ಟ ಒಲಿದರೆ ಕುಕ್ ಪಡೆಯ ವಿರುದ್ಧ ಬೌಲಿಂಗ್ ಕೂಡ ಮಾಡಬಹುದು. ಅದಕ್ಕಾಗಿ ಶುಕ್ರವಾರದವರೆ ಕಾದು ನೋಡಬೇಕು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.