ಬೆಳಗಾವಿ: ದಕ್ಷಿಣ ಕನ್ನಡ ಜಿಲ್ಲೆ ನಗರದಲ್ಲಿ ಭಾನುವಾರ ನಡೆದ ಪದವಿಪೂರ್ವ ಕಾಲೇಜುಗಳ ರಾಜ್ಯಮಟ್ಟದ ಕಬಡ್ಡಿ ಟೂರ್ನಿಯ ಬಾಲಕರ ಹಾಗೂ ಬಾಲಕಿಯರ ವಿಭಾಗ ಎರಡರಲ್ಲೂ ಚಾಂಪಿಯನ್ ಆಗಿ ಹೊರಹೊಮ್ಮಿತು. ಬಾಲಕರ ವಿಭಾಗದಲ್ಲಿ ಬೆಳಗಾವಿ ಹಾಗೂ ಬಾಲಕಿಯರ ವಿಭಾಗದಲ್ಲಿ ಉಡುಪಿ ಜಿಲ್ಲೆಯ ತಂಡಗಳು ರನ್ನರ್ಸ್ ಅಪ್ ಪ್ರಶಸ್ತಿಯನ್ನು ಪಡೆದುಕೊಂಡವು.
ಬಾಲಕರ ವಿಭಾಗದ ಫೈನಲ್ನಲ್ಲಿ ದಕ್ಷಿಣ ಕನ್ನಡ ತಂಡವು ಬೆಳಗಾವಿ ತಂಡವನ್ನು 48- 28ರಲ್ಲಿ ಸೋಲಿಸುವ ಮೂಲಕ ಚಾಂಪಿಯನ್ ಪಟ್ಟವನ್ನು ಗಿಟ್ಟಿಸಿಕೊಂಡಿತು. ಮೊದಲ ಸೆಮಿಫೈನಲ್ನಲ್ಲಿ ತಾಂತ್ರಿಕ ಕಾರಣದಿಂದಾಗಿ ಬೆಳಗಾವಿ ತಂಡ ಮಂಡ್ಯ ತಂಡದ ವಿರುದ್ಧ ವಾಕ್ ಓವರ್ ಪಡೆದರೆ, ಇನ್ನೊಂದು ಸೆಮಿ ಫೈನಲ್ನಲ್ಲಿ ದಕ್ಷಿಣ ಕನ್ನಡ ತಂಡವು ಧಾರವಾಡ ಜಿಲ್ಲೆ ತಂಡವನ್ನು ಮಣಿಸಿತು.
ಬಾಲಕಿಯರ ವಿಭಾಗದಲ್ಲಿ ದಕ್ಷಿಣ ಕನ್ನಡ ತಂಡವು ಉಡುಪಿ ತಂಡವನ್ನು 33- 05ರಲ್ಲಿ ಸೋಲಿಸುವ ಮೂಲಕ ಚಾಂಪಿಯನ್ ಪಟ್ಟವನ್ನು ಮುಡಿಗೇರಿಸಿಕೊಂಡಿತು. ಸೆಮಿಫೈನಲ್ನಲ್ಲಿ ಉಡುಪಿ ತಂಡವು ಬೆಂಗಳೂರು ದಕ್ಷಿಣ ತಂಡವನ್ನು 14-13ರಲ್ಲಿ ಸೋಲಿಸಿದರೆ, ದಕ್ಷಿಣ ಕನ್ನಡ ತಂಡವು ಚಿಕ್ಕಬಳ್ಳಾಪುರ ತಂಡವನ್ನು 31-18ರಲ್ಲಿ ಮಣಿಸಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.