ADVERTISEMENT

ಕರ್ನಾಟಕದ ಉತ್ತಪ್ಪ ಅತ್ಯುತ್ತಮ ಆಟಗಾರ

​ಪ್ರಜಾವಾಣಿ ವಾರ್ತೆ
Published 20 ಜೂನ್ 2011, 19:30 IST
Last Updated 20 ಜೂನ್ 2011, 19:30 IST
ಕರ್ನಾಟಕದ ಉತ್ತಪ್ಪ ಅತ್ಯುತ್ತಮ ಆಟಗಾರ
ಕರ್ನಾಟಕದ ಉತ್ತಪ್ಪ ಅತ್ಯುತ್ತಮ ಆಟಗಾರ   

ಭೋಪಾಲ್: ಕರ್ನಾಟಕ ತಂಡದ ಡಿಫೆಂಡರ್ ಎಸ್.ಕೆ.ಉತ್ತಪ್ಪ ಅವರು ಇಲ್ಲಿ ನಡೆದ ರಾಷ್ಟ್ರೀಯ ಸೀನಿಯರ್ ಹಾಕಿ ಚಾಂಪಿಯನ್‌ಷಿಪ್‌ನಲ್ಲಿ `ಅತ್ಯುತ್ತಮ ಆಟಗಾರ~ ಎಂಬ ಗೌರವಕ್ಕೆ ಪಾತ್ರರಾಗಿದ್ದಾರೆ. ಅಷ್ಟು ಮಾತ್ರವಲ್ಲದೇ, ರಾಷ್ಟ್ರೀಯ ಸೀನಿಯರ್ ಆಟಗಾರರ ಶಿಬಿರಕ್ಕೆ ಅವರು ಆಯ್ಕೆ ಆಗಿದ್ದಾರೆ.

ಭಾನುವಾರ ಕೊನೆಗೊಂಡ ಈ ಚಾಂಪಿಯನ್‌ಷಿಪ್‌ನ ಫೈನಲ್‌ನಲ್ಲಿ ಭಾರತ ಸೋಲು ಕಂಡಿತ್ತು. 2-1 ಗೋಲುಗಳಿಂದ ಗೆದ್ದ ಹರಿಯಾಣ ಚಾಂಪಿಯನ್ ಆಗಿತ್ತು.

ಆದರೆ ಯುವ ಹಾಗೂ ಪ್ರತಿಭಾವಂತ ಆಟಗಾರರನ್ನು ಒಳಗೊಂಡಿದ್ದ ಅಮರ್ ಅಯ್ಯಮ್ಮ ಸಾರಥ್ಯದ ಕರ್ನಾಟಕ ಅತ್ಯುತ್ತಮ ಪ್ರದರ್ಶನ ತೋರಿದೆ. ಉತ್ತಪ್ಪ ಭಾರತ ಕ್ರೀಡಾ ಪ್ರಾಧಿಕಾರ (ಎಸ್‌ಎಐ)ದಲ್ಲಿ ತರಬೇತಿ ಪಡೆಯುತ್ತಿದ್ದಾರೆ.

ಡ್ರ್ಯಾಗ್ ಫ್ಲಿಕರ್ ಕೊಡಗಿನ ವಿ.ಆರ್.ರಘುನಾಥ್ (12 ಗೋಲು) ಚಾಂಪಿಯನ್‌ಷಿಪ್‌ನಲ್ಲಿ ಅತಿ ಹೆಚ್ಚು ಗೋಲು ಗಳಿಸಿದ ಆಟಗಾರ ಎನಿಸಿದರು. ಹರಿಯಾಣ ತಂಡದ ಡ್ರ್ಯಾಗ್ ಫ್ಲಿಕರ್ ಸಂದೀಪ್ ಸಿಂಗ್ (11 ಗೋಲು) ಎರಡನೇ ಸ್ಥಾನ ಪಡೆದರು.

ಈ ಚಾಂಪಿಯನ್‌ಷಿಪ್ ವೇಳೆ ರಾಷ್ಟ್ರೀಯ ತಂಡದ ಆಯ್ಕೆದಾರರು ಭೋಪಾಲ್‌ನಲ್ಲಿಯೇ ಇದ್ದು ಪ್ರತಿ ಪಂದ್ಯಗಳನ್ನು ವೀಕ್ಷಿಸಿದ್ದಾರೆ. ಅವರು ಈಗಾಗಲೇ ರಾಷ್ಟ್ರೀಯ ಶಿಬಿರಕ್ಕೆ 48 ಮಂದಿ ಹಾಗೂ ಸುಧಾರಣೆ ಗುಂಪಿನಲ್ಲಿ 37 ಮಂದಿಯನ್ನು ಆಯ್ಕೆ ಮಾಡಿದ್ದಾರೆ.

ಒಪ್ಪಿಗೆಗಾಗಿ ಈ ಪಟ್ಟಿಯನ್ನು ಅವರು ಹಾಕಿ ಇಂಡಿಯಾಕ್ಕೆ ನೀಡಲಿದ್ದಾರೆ. ಶೀಘ್ರದಲ್ಲೇ ರಾಷ್ಟ್ರೀಯ ಕ್ಯಾಂಪ್ ಶುರುವಾಗಲಿದೆ.ಸುಲ್ತಾನ್ ಅಜ್ಲನ್ ಷಾ ಟೂರ್ನಿಯಲ್ಲಿ ಸ್ಥಾನ ಪಡೆಯದ ಸಂದೀಪ್ ಸಿಂಗ್ ಹಾಗೂ ಡಿಫೆಂಡರ್ ಸರ್ದಾರ್ ಸಿಂಗ್ ಅವರು ಕೂಡ ರಾಷ್ಟ್ರೀಯ ಹಾಕಿ ಶಿಬಿರದಲ್ಲಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.