ಉಡುಪಿ: ಕರ್ನಾಟಕದ ಮೊದಲ ಕ್ರೀಡಾ ನೀತಿಯನ್ನು ಕ್ರೀಡೆ ಮತ್ತು ಯುವ ಸಬಲೀಕರಣ ಸಚಿವ ಪ್ರಮೋದ್ ಮಧ್ವರಾಜ್ ಭಾನುವಾರ ಇಲ್ಲಿ ಬಿಡುಗಡೆ ಮಾಡಿದರು.
‘ಕರ್ನಾಟಕದ ಪ್ರಪ್ರಥಮ ಕ್ರೀಡಾ ನೀತಿಗೆ ರಾಜ್ಯ ಸಚಿವ ಸಂಪುಟ ಇದೇ 8ರಂದು ಅನುಮೋದನೆ ನೀಡಿದೆ. ತಕ್ಷಣದಿಂದಲೇ ಕ್ರೀಡಾ ನೀತಿ ಜಾರಿಯಾಗಲಿದೆ. ಎಲ್ಲ ಇಲಾಖೆಯವರನ್ನು ಪರಿಗಣನೆಗೆ ತೆಗೆದುಕೊಂಡು ಈ ನೀತಿಯನ್ನು ರೂಪಿಸಲಾಗಿದೆ. ಮುಂದಿನ ಬಜೆಟ್ನಲ್ಲಿ ಕ್ರೀಡಾ ನೀತಿಗಾಗಿ ಪ್ರತ್ಯೇಕ ಹಣವನ್ನು ಕಾಯ್ದಿರಿಸಲಾಗುತ್ತದೆ’ ಎಂದು ಸಚಿವರು ತಿಳಿಸಿದರು.
ಶಾಲಾ ಹಂತದ ಆಯ್ಕೆ: ಪ್ರಾಥಮಿಕ ಶಾಲೆಯ ಹಂತದಲ್ಲಿ ಕ್ರೀಡಾ ಪ್ರತಿಭೆ ಯನ್ನು ಗುರುತಿಸುವುದಕ್ಕೆ ಕ್ರೀಡಾ ನೀತಿಯಲ್ಲಿ ಹೆಚ್ಚಿನ ಒತ್ತು ನೀಡಲಾಗಿದೆ. ಶಾಲಾ ಹಂತದಲ್ಲಿ ಆಯ್ಕೆಯಾದ ಕ್ರೀಡಾಪಟುಗಳಿಗೆ ತಾಲ್ಲೂಕು ಮಟ್ಟದಲ್ಲಿ ತರಬೇತುಗೊಳಿಸಿ, ಅಲ್ಲಿ ಆಯ್ಕೆಯಾದ ಕ್ರೀಡಾಪಟುಗಳಿಗೆ ಜಿಲ್ಲಾ ಮಟ್ಟದಲ್ಲಿ ತರಬೇತಿ ನೀಡುವುದು. ಅಲ್ಲಿ ಸಾಧನೆ ಮಾಡಿದ ಕ್ರೀಡಾಪಟುಗಳಿಗೆ ಉನ್ನತಮಟ್ಟದ ತರಬೇತಿ ನೀಡಲಾಗುತ್ತದೆ. ಅವರು ವಿಶೇಷ ಅನುದಾನ ಮತ್ತು ತರಬೇತಿಗೆ ಅರ್ಹರಾಗುತ್ತಾರೆ ಎಂದರು.
ಎಲ್ಲ ಸರ್ಕಾರಿ ಪ್ರಾಥಮಿಕ ಶಾಲೆಗಳಲ್ಲಿ ದೈಹಿಕ ಶಿಕ್ಷಣ ಶಿಕ್ಷಕರನ್ನು ನೇಮಿಸಲಾಗುತ್ತದೆ ಎಂದರು.
ಇತರ ಇಲಾಖೆಗಳ ಸಹಭಾಗಿತ್ವ
ರಾಜ್ಯದ ವಿವಿಧ ಇಲಾಖೆಗಳು ಈ ಕ್ರೀಡಾ ನೀತಿಯಲ್ಲಿ ನೇರ ಸಹಭಾಗಿತ್ವವನ್ನು ಹೊಂದಿವೆ. ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ, ವಿಶೇಷ ಚೇತನ ಸಬಲೀಕರಣ ಇಲಾಖೆ, ಅಲ್ಪಸಂಖ್ಯಾತರ ಇಲಾಖೆ, ಸಮಾಜ ಕಲ್ಯಾಣ ಇಲಾಖೆ, ಹಿಂದುಳಿದ ವರ್ಗಗಳ ಇಲಾಖೆಗಳು ತಮ್ಮ ಅನುದಾನದಲ್ಲಿ ಶೇ 2ರಷ್ಟನ್ನು ಕ್ರೀಡಾ ಅಭಿವೃದ್ಧಿಗೆ ನೀಡಲಿದೆ. ಅರಣ್ಯ, ಪೊಲೀಸ್ ಇಲಾಖೆಗಳ ನೇಮಕಾತಿಯಲ್ಲಿ ಮೀಸಲಾತಿ, ಶಿಕ್ಷಣ ಮತ್ತು ಆರೋಗ್ಯ ಇಲಾಖೆಗಳು ಕ್ರೀಡಾಪಟುಗಳಿಗೆ ಆದ್ಯತೆ, ವಾಣಿಜ್ಯ ಮತ್ತು ಕೈಗಾರಿಕಾ ಇಲಾಖೆಗಳು ಕ್ರೀಡೆಯನ್ನು ಉದ್ಯಮವಾಗಿ ಬೆಳೆಸಬೇಕು. ಸಾಹಸ ಕ್ರೀಡೆಗಳನ್ನು ಪ್ರವಾಸೋದ್ಯಮ ಇಲಾಖೆ ನಡೆಸಬೇಕು. ಗ್ರಾಮೀಣಾಭಿವೃದ್ಧಿ – ಪೌರಾಡಳಿತ ಇಲಾಖೆಗಳು ಅಗತ್ಯ ಮೈದಾನವನ್ನು ಒದಗಿಸಬೇಕು ಎಂದು ಕ್ರೀಡಾ ನೀತಿಯಲ್ಲಿ ಕಡ್ಡಾಯಗೊಳಿಸಲಾಗಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.