ಬೆಂಗಳೂರು: ಕರ್ನಾಟಕ ತಂಡದವರು ವಿನೂ ಮಂಕಡ್ ಟ್ರೋಫಿ ದಕ್ಷಿಣ ವಲಯ 19 ವರ್ಷದೊಳಗಿನವರ ಏಕದಿನ ಕ್ರಿಕೆಟ್ ಟೂರ್ನಿಯಲ್ಲಿ ಚಾಂಪಿಯನ್ ಆಗಿದ್ದಾರೆ.
ರಾಜ್ಯ ತಂಡದವರು ಆಡಿದ ಐದು ಪಂದ್ಯಗಳಿಂದ 14 ಪಾಯಿಂಟ್ಸ್ ಸಂಗ್ರಹಿಸಿ ಪ್ರಶಸ್ತಿಯ ಸಾಧನೆ ಮಾಡಿದರು. ಈ ಪೈಕಿ 3 ಪಂದ್ಯಗಳಲ್ಲಿ ಗೆದ್ದಿದ್ದ ನಿಕಿನ್ ಜೋಸ್ ಬಳಗ ಒಂದರಲ್ಲಿ ಸೋತಿತ್ತು.
ಕರ್ನಾಟಕ ತಂಡ ಶನಿವಾರ ತನ್ನ ಅಂತಿಮ ಲೀಗ್ ಪಂದ್ಯದಲ್ಲಿ ಕೇರಳ ವಿರುದ್ಧ ಆಡಬೇಕಿತ್ತು. ಆಲೂರಿನ ಎರಡನೇ ಮೈದಾನದಲ್ಲಿ ನಿಗದಿಯಾಗಿದ್ದ ಈ ಪಂದ್ಯವು ಮಳೆಯಿಂದಾಗಿ ರದ್ದಾಯಿತು. ಗೋವಾ ಮತ್ತು ಆಂಧ್ರ ಹಾಗೂ ಹೈದರಾಬಾದ್ ಮತ್ತು ತಮಿಳುನಾಡು ನಡುವಣ ಪಂದ್ಯಗಳೂ ಮಳೆಗೆ ಆಹುತಿಯಾದವು.
ಆಂಧ್ರ ತಂಡ ಟೂರ್ನಿಯಲ್ಲಿ ರನ್ನರ್ಸ್ ಅಪ್ ಸಾಧನೆ ಮಾಡಿತು. ಈ ತಂಡ ಕೂಡ 5 ಪಂದ್ಯಗಳಿಂದ 14 ಪಾಯಿಂಟ್ಸ್ ಕಲೆಹಾಕಿತ್ತು. ಆದರೆ ಒಟ್ಟಾರೆ ರನ್ ಗಳಿಕೆಯ ಆಧಾರದಲ್ಲಿ ಕರ್ನಾಟಕ (625) ಆಂಧ್ರ (508) ತಂಡವನ್ನು ಹಿಂದಿಕ್ಕಿತು.
ಹೈದರಾಬಾದ್, ಕೇರಳ, ತಮಿಳುನಾಡು ಮತ್ತು ಗೋವಾ ತಂಡಗಳು ಕ್ರಮವಾಗಿ ಮೂರರಿಂದ ಆರನೇ ಸ್ಥಾನಗಳಲ್ಲಿ ಕಾಣಿಸಿಕೊಂಡವು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.