ADVERTISEMENT

ಕೆಂಪು ಮೆಚ್ಚುವ-ದ್ವೇಷಿಸುವ ವರ್ಣ

​ಪ್ರಜಾವಾಣಿ ವಾರ್ತೆ
Published 12 ಜುಲೈ 2012, 19:30 IST
Last Updated 12 ಜುಲೈ 2012, 19:30 IST

ನವದೆಹಲಿ (ಪಿಟಿಐ): `ಕೆಂಪು ನನ್ನ ಮೆಚ್ಚಿನ ಬಣ್ಣ. ಅದನ್ನು ಸಾಕಷ್ಟು ನೋಡಿದ್ದೇನೆ. ಆದರೆ, ಈಗ ನೋಡಲಾಗುತ್ತಿಲ್ಲ. ಅದಕ್ಕಾಗಿ ದ್ವೇಷಿಸುತ್ತಿದ್ದೇನೆ...~

-ಹೀಗೆ ಹೇಳಿದ್ದು ಕ್ಯಾನ್ಸರ್‌ನಿಂದ ಚೇತರಿಸಿಕೊಂಡಿರುವ ಭಾರತ ತಂಡದ ಕ್ರಿಕೆಟಿಗ ಯುವರಾಜ್ ಸಿಂಗ್.

`ಚಿಕಿತ್ಸೆ ಪಡೆಯುತ್ತಿದ್ದಾಗ ಸಾಕಷ್ಟು ರಕ್ತವನ್ನು ನೋಡಿದ್ದೇನೆ. ಎಲ್ಲರ ಪಾಲಿಗೆ ಕೆಂಪು ಮೆಚ್ಚಿನ ಬಣ್ಣ. ಸಾಕಷ್ಟು ಜನ ಅದನ್ನು ಪ್ರೀತಿಸುತ್ತಾರೆ. ಆದರೆ, ಈ ಬಣ್ಣ ನನಗೆ ಕಿರಿಕಿರಿ ಉಂಟು ಮಾಡುತ್ತದೆ~ ಎಂದು ಗುಡಗಾಂವ್‌ನಲ್ಲಿ ಮಾಧ್ಯಮದವರ ಜೊತೆ ಸಂವಾದ ಕಾರ್ಯಕ್ರಮದಲ್ಲಿ ಮನದ ಮಾತನ್ನು ಅವರು ಬಿಚ್ಚಿಟ್ಟಿದ್ದಾರೆ.

`ಕ್ಯಾನ್ಸರಿನಿಂದ ಚೇತರಿಸಿಕೊಂಡಿದ್ದೇನೆ. ಸಾಕಷ್ಟು ಸಂಕಷ್ಟ ಎದುರಾದರೂ ಮತ್ತೆ ಬ್ಯಾಟ್ ಹಿಡಿಯಲು ಸಾಧ್ಯವಾಗಿದ್ದರಿಂದ ಸಂತಸವಾಗಿದೆ. ನಾನು ಯಾವಾಗ ಮೊದಲ ಪಂದ್ಯವನ್ನಾಡುತ್ತೇನೆಯೋ ಅದು ನನ್ನ ಪಾಲಿನ ಬಹುದೊಡ್ಡ ಸಾಧನೆ~ ಎಂದು `ಯುವಿ~ ಹೇಳಿದ್ದಾರೆ.

`ಅನುಭವಿಸಿದ ಕಷ್ಟವೆಲ್ಲ ದೂರವಾಗಿದೆ. ಈಗ ಸಾಮಾನ್ಯ ಮನುಷ್ಯರಂತೆ ಆಗಿದ್ದೇನೆ. ನಾನಿದ್ದ ಪರಿಸ್ಥಿತಿಯನ್ನು ನೋಡಿದರೆ, ಮತ್ತೆ ಕಣಕ್ಕಿಳಿಯಲು ಸಾಧ್ಯವೇ ಇಲ್ಲ ಎನ್ನುವಂತಹ ಭಾವನೆ ನನ್ನಲ್ಲಿ ಮೂಡುತ್ತಿತ್ತು. ನಾಲ್ಕರಿಂದ ಆರು ತಿಂಗಳು ಆಸ್ಪತ್ರೆಯಲ್ಲಿದ್ದಾಗ ಕ್ರೀಡಾಂಗಣಕ್ಕೆ ಯಾವಾಗ ಮರಳುತ್ತೇನೆ ಎನ್ನುವುದರ ಬಗ್ಗೆ ಯೋಚನೆ ಮಾಡುತ್ತಿದ್ದೆ. ನಾನು ಚೇತರಿಸಿಕೊಂಡ ರೀತಿ ನನ್ನಲ್ಲಿ ಬೆರಗು ಮೂಡಿಸಿದೆ~ ಎಂದು 30 ವರ್ಷದ ಎಡಗೈ ಬ್ಯಾಟ್ಸ್‌ಮನ್ ನುಡಿದರು.

ಟಿ-20 ವಿಶ್ವಕಪ್‌ಗೆ ತಂಡದಲ್ಲಿ ಸ್ಥಾನ ಪಡೆಯುವ ಬಯಕೆ ಹೊಂದಿರುವ ಯುವರಾಜ್ ದಿನಕ್ಕೆ ಆರು ಗಂಟೆ ಅಭ್ಯಾಸ ನಡೆಸುತ್ತಿದ್ದಾರೆ. `ಅಭ್ಯಾಸ ಆರಂಭಿಸಿದ ಮೊದಲ ಎರಡು ವಾರಗಳಲ್ಲಿ ದೇಹಕ್ಕೆ ಸಾಕಷ್ಟು ನೋವಾಗುತ್ತಿತ್ತು.
 
ಆದ್ದರಿಂದ ಅಭ್ಯಾಸದ ವೇಳೆ ವಿಶ್ರಾಂತಿ ಪಡೆಯುತ್ತಿದ್ದೆ. ಇಡೀ ದೇಹವೇ ನಡುಗುತ್ತಿತ್ತು. ಎರಡು ತಿಂಗಳು ಅಭ್ಯಾಸ ನಡೆಸಿದೆ~ ಎಂದು ಯುವಿ ಚದುರಿದ ನೆನಪುಗಳನ್ನು ಒಂದುಗೂಡಿಸಿದರು.

`ಮೊದಲಿನಂತೆ ಹೆಚ್ಚು ಆಯಾಸವಾಗುತ್ತಿಲ್ಲ. ಟಿ-20 ವಿಶ್ವಕಪ್ ವೇಳೆಗೆ ತಂಡಕ್ಕೆ ಮರಳುವ ವಿಶ್ವಾಸವಿದೆ~ ಎನ್ನುತ್ತಾರೆ ಯುವರಾಜ್.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.