ADVERTISEMENT

ಕೊನೆಗೂ ಎಚ್ಚೆತ್ತುಕೊಂಡ ಕೇಂದ್ರ ಸರ್ಕಾರ...!

​ಪ್ರಜಾವಾಣಿ ವಾರ್ತೆ
Published 14 ಸೆಪ್ಟೆಂಬರ್ 2011, 19:05 IST
Last Updated 14 ಸೆಪ್ಟೆಂಬರ್ 2011, 19:05 IST

ನವದೆಹಲಿ (ಪಿಟಿಐ): ಏಷ್ಯನ್ ಚಾಂಪಿಯನ್ಸ್ ಟ್ರೋಫಿಯಲ್ಲಿ ಪ್ರಶಸ್ತಿ ಜಯಿಸಿದ ಭಾರತ ತಂಡಕ್ಕೆ ಕೇವಲ 25 ಸಾವಿರ ರೂ. ಬಹುಮಾನ ನೀಡಿ ಅವಮಾನ ಮಾಡಿದ ಕ್ರಮದ ಬೆನ್ನಲ್ಲೆ ಕೇಂದ್ರ ಹಾಗೂ ಪಂಜಾಬ್ ರಾಜ್ಯ ಸರ್ಕಾರಗಳು ಸಾಧಕರಿಗೆ ಸೂಕ್ತ ಬಹುಮಾನ ಪ್ರಕಟಿಸಿವೆ.

ಹಾಕಿ ಇಂಡಿಯಾದಿಂದ ಕಡೆಗಣನೆಗೆ ಒಳಗಾದ ಭಾರತ ತಂಡದ ಆಟಗಾರರಿಗೆ ತಲಾ 1.5 ಲಕ್ಷ ರೂಪಾಯಿ ಬಹುಮಾನ ನೀಡುವುದಾಗಿ ಕೇಂದ್ರ ಕ್ರೀಡಾ ಸಚಿವ ಅಜಯ್ ಮಾಕನ್ ಬುಧವಾರ ಘೋಷಿಸಿದ್ದಾರೆ.

`ಹಾಕಿ ಆಟಗಾರರು ಸಾಕಷ್ಟು ಆಂತರಿಕ ಸಮಸ್ಯೆ ಎದುರಿಸುತ್ತಿದ್ದಾರೆ. ಹಾಕಿ ಇಂಡಿಯಾ ಹಾಗೂ ಭಾರತ ಹಾಕಿ ಫೆಡರೇಷನ್ ನಡುವಿನ ಹೊಂದಾಣಿಕೆಯ ಕೊರತೆ ಕಾಡುತ್ತಿದೆ. ಐಎಚ್‌ನ ಹಣವನ್ನು ಭಾರತ ತಂಡ ತಿರಸ್ಕರಿಸಿ ಒಳ್ಳೆಯ ಕೆಲಸ ಮಾಡಿದೆ. ನಮ್ಮ ಆಟಗಾರರ ಸಾಧನೆಗೆ ತಲಾ 1.5 ಲಕ್ಷ ರೂ. ನೀಡಲಾಗುವುದು~ ಎಂದು ಮಾಕನ್ ತಿಳಿಸಿದರು. ಭಾರತ ತಂಡದ ಉತ್ತಮ ಪ್ರದರ್ಶನಕ್ಕೆ ಬೆಂಬಲ ನೀಡಿದ ಸಿಬ್ಬಂದಿ ಹಾಗೂ ಕೋಚ್‌ಗೆ 75,000ರೂ. ಬಹುಮಾನ ನೀಡುವುದಾಗಿಯೂ ಪ್ರಕಟಿಸಿದರು.

ಪಂಜಾಬ್ ವರದಿ: ಭಾರತ ಹಾಕಿ ತಂಡಕ್ಕೆ ಪಂಜಾಬ್ ಸರ್ಕಾರ 25 ಲಕ್ಷ ರೂ. ಬಹುಮಾನ ಪ್ರಕಟಿಸಿದೆ.
`ರಾಷ್ಟ್ರೀಯ ಕ್ರೀಡಾ ನಾಯಕರೇ ನಿಮಗೆ ಅಭಿನಂದನೆಗಳು. ನಿಮ್ಮ ಸಾಧನೆ ಎಲ್ಲರಿಗೂ ಮೆಚ್ಚುಗೆಯಾಗುವಂತದ್ದು. ಆದ್ದರಿಂದ ನಮ್ಮ ಸರ್ಕಾರ ನಿಮ್ಮ ತಂಡಕ್ಕೆ 25 ಲಕ್ಷ ರೂ. ಬಹುಮಾನ ನೀಡಲಿದೆ~ ಎಂದು ಪಂಜಾಬ್ ಉಪ ಮುಖ್ಯಮಂತ್ರಿ ಸುಖ್ಬೀರ್ ಸಿಂಗ್ ಬದಲ್ ಹೇಳಿದ್ದಾರೆ.

ಮುಂಬೈ ವರದಿ: ಭಾರತ ಹಾಕಿ ತಂಡದಲ್ಲಿದ್ದ ಮಹಾರಾಷ್ಟ್ರದ ಯುವರಾಜ್ ವಾಲ್ಮೀಕಿ ಅವರಿಗೆ 10 ಲಕ್ಷ ರೂ. ಬಹುಮಾನ ನೀಡಲು ಅಲ್ಲಿನ ಸರ್ಕಾರ ನಿರ್ಧರಿಸಿದೆ. ಯುವರಾಜ್ ಸಾಧನೆ ಅತ್ಯುತ್ತಮವಾದದ್ದು, ನಮ್ಮ ರಾಜ್ಯದ ಆಟಗಾರನಿಗೆ ಸನ್ಮಾನಿಸಿ, ನೌಕರಿ ಹಾಗೂ ಮನೆ ನೀಡಲಾಗುವುದು ಎಂದು ಮಹಾರಾಷ್ಟ್ರದ ಮುಖ್ಯಮಂತ್ರಿ ಪೃಥ್ವಿರಾಜ್ ಚವ್ಹಾಣ್ ಭರವಸೆ ನೀಡಿದ್ದಾರೆ.

ಭಾರತ ಹಾಕಿ ತಂಡದಲ್ಲಿ ಒಡಿಶಾ ರಾಜ್ಯದ ಇಗ್ನೇಶ್ ಟರ್ಕಿ, ಮಂಜಿತ್ ಕುಲ್ಲು ಹಾಗೂ ರೋಷನ್ ಮಿಂಜ್ ಇದ್ದರು. ಈ ಮೂವರು ಆಟಗಾರರಿಗೆ ತಲಾ 1.5 ಲಕ್ಷ ರೂ. ಬಹುಮಾನ ನೀಡಲಾಗುವುದು ಎಂದು ಅಲ್ಲಿನ ಮುಖ್ಯಮಂತ್ರಿ ನವೀನ್ ಪಟ್ನಾಯಕ್ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.