ADVERTISEMENT

ಕ್ಯೂರೇಟರ್‌ ವಿಚಾರಣೆಗೆ ಪುಣೆ ತಲುಪಿದ ಅಧಿಕಾರಿ

ಪಿಟಿಐ
Published 26 ಅಕ್ಟೋಬರ್ 2017, 19:51 IST
Last Updated 26 ಅಕ್ಟೋಬರ್ 2017, 19:51 IST

ನವದೆಹಲಿ: ಪುಣೆಯ ಮಹಾರಾಷ್ಟ್ರ ಕ್ರಿಕೆಟ್ ಸಂಸ್ಥೆ ಕ್ರೀಡಾಂಗಣದ ಪಿಚ್‌ಗೆ ಸಂಬಂಧಿಸಿದ ವಿವಾದದ ತನಿಖೆ ನಡೆಸುವ ಐಸಿಸಿ ಅಧಿಕಾರಿ ಗುರುವಾರ ಪುಣೆಗೆ ತಲುಪಿದ್ದಾರೆ.

ಅಂತರರಾಷ್ಟ್ರೀಯ ಕ್ರಿಕೆಟ್‌ ಸಮಿತಿಯ ಭ್ರಷ್ಟಾಚಾರ ತಡೆ ಘಟಕದ ಸಂಯೋಜಕ ಸ್ಟೀವ್‌ ರಿಚರ್ಡ್ಸನ್‌ ವಿವಾದದ ತನಿಖೆ ನಡೆಸಲಿದ್ದಾರೆ.

ಮಹಾರಾಷ್ಟ್ರದ ತಂಡದ ಹಿಂದಿನ ವೇಗದ ಬೌಲರ್ ಆಗಿದ್ದ, ಈಗಿನ ಪುಣೆ ಪಿಚ್ ಕ್ಯೂರೇಟರ್‌ ಪಾಂಡುರಂಗ ಸಲಗಾಂವ್ಕರ್‌ ಬುಕ್ಕಿಗೆ ಅನುಕೂಲಕರ ಆಗುವಂತೆ ಪಿಚ್‌ ಸಿದ್ಧಪಡಿಸಿದ್ದರು ಎಂಬ ಆರೋಪ ಬುಧವಾರ ಕೇಳಿ ಬಂದಿತ್ತು. ಮಾರುವೇಷದ ಕಾರ್ಯಾಚರಣೆಯಲ್ಲಿ ಈ ವಿಷಯ ಬಹಿರಂಗಗೊಂಡಿತ್ತು. ಭಾರತ ಮತ್ತು ನ್ಯೂಜಿಲೆಂಡ್ ನಡುವಿನ ಎರಡನೇ ಏಕದಿನ ಪಂದ್ಯ ಆರಂಭಕ್ಕೆ ಸ್ವಲ್ಪ ಮುನ್ನ ಈ ಸುದ್ದಿ ಬಹಿರಂಗಗೊಂಡಿತ್ತು. ತಕ್ಷಣ ಸಲಗಾಂವ್ಕರ್ ಅವರನ್ನು ಬಿಸಿಸಿಐ ಅಮಾನತು ಮಾಡಿತ್ತು.

ADVERTISEMENT

ಪ್ರಕರಣದ ತನಿಖೆಗೆ ಐಸಿಸಿ ನಿರ್ಧರಿಸಿತ್ತು. ಹೀಗಾಗಿ ರಿಚರ್ಡ್ಸನ್‌ ಅವರನ್ನು ಕಳುಹಿಸಿಕೊಟ್ಟಿತ್ತು. ಅವರು ಸಲಗಾಂವ್ಕರ್ ಮತ್ತು ಮಾರುವೇಷದ ಕಾರ್ಯಾಚರಣೆ ನಡೆಸಿದ ಇಬ್ಬರು ಪತ್ರಕರ್ತರನ್ನು ವಿಚಾರಣೆಗೆ ಒಳಪಡಿಸುವರು ಎಂದು ಬಿಸಿಸಿಐ ಮೂಲಗಳು ತಿಳಿಸಿವೆ. ಈ ಹಿಂದೆ ಗಾಲ್‌ನಲ್ಲಿ ಇದೇ ರೀತಿಯ ಪ್ರಕರಣ ಬೆಳಕಿಗೆ ಬಂದಿತ್ತು. ಜಯಾನಂದ ವರ್ಣವೀರ ತಪ್ಪಿತಸ್ಥ ಎಂದು ಕಂಡು ಬಂದ ನಂರ ಅವರನ್ನು ಮೂರು ವರ್ಷ ಅಮಾನತು ಮಾಡಲಾಗಿತ್ತು.

ಪಿಚ್‌ ಫಿಕ್ಸಿಂಗ್‌ ಪ್ರಕರಣಗಳು ಪದೇ ಪದೇ ನಡೆಯುತ್ತಿರುವುದರಿಂದ ಕ್ಯೂರೇಟರ್‌ಗಳಿಗೆ ಸರಿಯಾದ ತಿಳಿವಳಿಕೆ ನೀಡಲು ಐಸಿಸಿ ಕ್ರಮ ಕೈಗೊಳ್ಳುತ್ತಿದೆ ಎಂದು ತಿಳಿದು ಬಂದಿದೆ. ಭಾರತದಲ್ಲಿ ಕ್ಯೂರೇಟರ್‌ಗಳಿಗೆ ಸಮರ್ಪಕ ಸಂಭಾವನೆ ನೀಡುವ ಬಗ್ಗೆ ಬಿಸಿಸಿಐ ಚಿಂತನೆ ನಡೆಸಿದೆ ಎಂದು ಕೂಡ ತಿಳಿದು ಬಂದಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.