ಸೌಥ್ಯಾಂಪ್ಟನ್: ಆಜಿಂಕ್ಯ ರಹಾನೆ (54) ಮತ್ತು ಸುರೇಶ್ ರೈನಾ (40) ತೋರಿದ ಉತ್ತಮ ಆಟದ ನೆರವಿನಿಂದ ಭಾರತ ತಂಡ ಎರಡನೇ ಏಕದಿನ ಕ್ರಿಕೆಟ್ ಪಂದ್ಯದಲ್ಲಿ ಇಂಗ್ಲೆಂಡ್ ಗೆಲುವಿಗೆ ಸವಾಲಿನ ಮೊತ್ತ ನೀಡಿದೆ.
ರೋಸ್ಬೌಲ್ ಕ್ರೀಡಾಂಗಣದಲ್ಲಿ ಮಂಗಳವಾರ ನಡೆದ ಪಂದ್ಯಕ್ಕೆ ಮಳೆ ಅಡ್ಡಿಪಡಿಸಿತು. ಇದರಿಂದ ಓವರ್ಗಳ ಸಂಖ್ಯೆಯಲ್ಲಿ 23ಕ್ಕೆ ಇಳಿಸಲಾಯಿತು. ಮೊದಲು ಬ್ಯಾಟ್ ಮಾಡಿದ ಮಹೇಂದ್ರ ಸಿಂಗ್ ದೋನಿ ಬಳಗ ನಿಗದಿತ ಓವರ್ಗಳಲ್ಲಿ 8 ವಿಕೆಟ್ಗೆ 187 ರನ್ ಪೇರಿಸಿತು.
ಸೊಗಸಾದ ಪ್ರದರ್ಶನ ನೀಡಿದ ರೈನಾ ಹಾಗೂ ರಹಾನೆ ಭಾರತದ ಉತ್ತಮ ಮೊತ್ತಕ್ಕೆ ಕಾರಣರಾದರು. 47 ಎಸೆತಗಳನ್ನು ಎದುರಿಸಿದ ರಹಾನೆ ಐದು ಬೌಂಡರಿ ಹಾಗೂ ಒಂದು ಸಿಕ್ಸರ್ ಸಿಡಿಸಿದರು.
ಟಾಸ್ ಗೆದ್ದ ಇಂಗ್ಲೆಂಡ್ ನಾಯಕ ಅಲಸ್ಟರ್ ಕುಕ್ ಫೀಲ್ಡಿಂಗ್ ಮಾಡುವ ನಿರ್ಧಾರ ಕೈಗೊಂಡರು. ಪಾರ್ಥಿವ್ ಪಟೇಲ್ (28, 18 ಎಸೆತ, 3ಬೌಂ, 2 ಸಿಕ್ಸರ್) ಭಾರತಕ್ಕೆ ಬಿರುಸಿನ ಆರಂಭ ನೀಡಿದರು. ರಹಾನೆ ಮತ್ತು ರಾಹುಲ್ ದ್ರಾವಿಡ್ (31 ಎಸೆತಗಳಲ್ಲಿ 32) ಎರಡನೇ ವಿಕೆಟ್ಗೆ 11 ಓವರ್ಗಳಲ್ಲಿ 79 ರನ್ಗಳನ್ನು ಸೇರಿಸಿದರು. ಇದರಿಂದ `ಮಹಿ~ ಬಳಗ ಉತ್ತಮ ಮೊತ್ತದೆಡೆಗೆ ಮುನ್ನಡೆಯಿತು.
ಕೊನೆಯಲ್ಲಿ ಸುರೇಶ್ ರೈನಾ ಅಬ್ಬರಿಸಿದರು. 19 ಎಸೆತಗಳನ್ನು ಎದುರಿಸಿದ ಅವರು ತಲಾ ಮೂರು ಬೌಂಡರಿ ಹಾಗೂ ಸಿಕ್ಸರ್ ಸಿಡಿಸಿದರು. ಇಂಗ್ಲೆಂಡ್ ಪರ ಗ್ರೇಮ್ ಸ್ವಾನ್ ಮತ್ತು ಟಿಮ್ ಬ್ರೆಸ್ನನ್ ತಲಾ ಮೂರು ವಿಕೆಟ್ ಪಡೆದರು. ಭಾರತ- ಇಂಗ್ಲೆಂಡ್ ನಡುವಿನ ಐದು ಪಂದ್ಯಗಳ ಸರಣಿಯ ಮೊದಲ ಪಂದ್ಯ ಮಳೆಯಿಂದಾಗಿ ರದ್ದುಗೊಂಡಿತ್ತು.
ಸಂಕ್ಷಿಪ್ತ ಸ್ಕೋರ್: ಭಾರತ: 23 ಓವರ್ಗಳಲ್ಲಿ 8 ವಿಕೆಟ್ಗೆ 187 (ಪಾರ್ಥಿವ್ ಪಟೇಲ್ 28, ಆಜಿಂಕ್ಯ ರಹಾನೆ 54, ರಾಹುಲ್ ದ್ರಾವಿಡ್ 32, ಸುರೇಶ್ ರೈನಾ 40, ವಿರಾಟ್ ಕೊಹ್ಲಿ 9, ಮಹೇಂದ್ರ ಸಿಂಗ್ ದೋನಿ 6, ಮನೋಜ್ ತಿವಾರಿ 11, ಗ್ರೇಮ್ ಸ್ವಾನ್ 33ಕ್ಕೆ 3, ಟಿಮ್ ಬ್ರೆಸ್ನನ್ 43ಕ್ಕೆ 3).
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.