ADVERTISEMENT

ಕ್ರೀಡಾಂಗಣಕ್ಕೆ ಹಾವು ಬಿಡುವ ಬೆದರಿಕೆ

ಪಿಟಿಐ
Published 11 ಏಪ್ರಿಲ್ 2018, 19:47 IST
Last Updated 11 ಏಪ್ರಿಲ್ 2018, 19:47 IST

ನವದೆಹಲಿ: ಕಾವೇರಿ ನಿರ್ವಹಣಾ ಮಂಡಳಿ ರಚಿಸುವಂತೆ ಒತ್ತಾಯಿಸಿ ಚೆನ್ನೈನಲ್ಲಿ ನಡೆಯುತ್ತಿರುವ ಪ್ರತಿಭಟನೆಯ ಕಾವು ಐಪಿಎಲ್‌ ಪಂದ್ಯಗಳಿಗೆ ತಟ್ಟಿದೆ.

ಮುಂದಿನ ಪಂದ್ಯದ ಸಂದರ್ಭದಲ್ಲಿ ಕ್ರೀಡಾಂಗಣಕ್ಕೆ ಹಾವು ಬಿಡುವುದಾಗಿ ಪ್ರತಿಭಟನಾಕಾರರು ಬೆದರಿಕೆಯೊಡ್ಡಿದ್ದಾರೆ. ಚೆನ್ನೈನಲ್ಲಿ ಮುಂದಿನ ಪಂದ್ಯ ಏಪ್ರಿಲ್ 20ರಂದು ನಡೆಯಬೇಕಾಗಿತ್ತು.

ಪ್ರತಿಭಟನೆ ತೀವ್ರ ಸ್ವರೂಪ ಪಡೆದಿದ್ದರಿಂದ ಚೆನ್ನೈ ಸೂಪರ್ ಕಿಂಗ್ಸ್‌ನ ಪಂದ್ಯಗಳನ್ನು ಪುಣೆಗೆ ಸ್ಥಳಾಂತರಿಸಲು ನಿರ್ಧರಿಸಲಾಗಿದೆ. ಮಂಗಳವಾರ ಚೆನ್ನೈನಲ್ಲಿ ಸಿಎಸ್‌ಕೆ ಮತ್ತು ಕೋಲ್ಕತ್ತ ನೈಟ್ ರೈಡರ್ಸ್ ನಡುವೆ ಪಂದ್ಯ ನಡೆದಿತ್ತು. ಆ ಸಂದರ್ಭದಲ್ಲಿ ಆಟಗಾರರತ್ತ ಕೆಲವರು ಚಪ್ಪಲಿ ತೂರಿದ್ದರು. ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು 11 ಮಂದಿಯನ್ನು ಬಂಧಿಸಿದ್ದರು.

ADVERTISEMENT

ಪಂದ್ಯಗಳನ್ನು ಸ್ಥಳಾಂತರಿಸಲು ನಿರ್ಧರಿಸಿರುವ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಅಗತ್ಯವಿದ್ದರೆ ಬಳಸಿಕೊಳ್ಳಲು ನಾಲ್ಕು ಬದಲಿ ಕ್ರೀಡಾಂಗಣಗಳನ್ನು ಮೊದಲು ಆಯ್ಕೆ ಮಾಡಿಕೊಂಡಿತ್ತು. ಈ ಪಟ್ಟಿಯಲ್ಲಿ ಪುಣೆಯೂ ಸೇರಿತ್ತು.

ವಿಶಾಖಪಟ್ಟಣ, ತಿರುವನಂತಪುರ, ಮತ್ತು ರಾಜ್‌ಕೋಟ್‌ ಕ್ರೀಡಾಂಗಣಗಳು ಕೂಡ ಪಟ್ಟಿಯಲ್ಲಿದ್ದವು. ಆದರೆ ನಂತರ ನಿರ್ಧಾರ ಬದಲಿಸಿದ ಬಿಸಿಸಿಐ ಚೆನ್ನೈ ನಲ್ಲಿ ನಡೆಯಬೇಕಿದ್ದ ಎಲ್ಲ ಪಂದ್ಯಗಳನ್ನು ಪುಣೆಯಲ್ಲೇ ನಡೆಸಲು ತೀರ್ಮಾನಿಸ ಲಾಗಿದೆ ಎಂದು ಐಪಿಎಲ್‌ ಮುಖ್ಯಸ್ಥ ರಾಜೀವ್ ಶುಕ್ಲಾ ಸ್ಪಷ್ಟಪಡಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.