ನವದೆಹಲಿ (ಪಿಟಿಐ): ಯೋನೆಕ್ಸ್ ಸನ್ರೈಸ್ ಇಂಡಿಯಾ ಓಪನ್ ಬ್ಯಾಡ್ಮಿಂಟನ್ ಟೂರ್ನಿಯಲ್ಲಿ ಪ್ರಶಸ್ತಿ ಗೆಲ್ಲುವ ವಿಶ್ವಾಸ ಹೊಂದಿರುವುದಾಗಿ ಭಾರತದ ಸೈನಾ ನೆಹ್ವಾಲ್ ಹೇಳಿದರು.
ಸೋಮವಾರ ಇಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇಂಡಿಯಾ ಓಪನ್ ಟೂರ್ನಿಯು ಹಲವು ಸವಾಲುಗಳಿಂದ ಕೂಡಿದೆ. ಗೆಲುವಿನ ಹಾದಿ ಅಷ್ಟೊಂದು ಸುಗಮವಾಗಿಲ್ಲ ಎಂದರು. ಟೂರ್ನಿಯು ಏಪ್ರಿಲ್ 23ರಿಂದ 28ರವರೆಗೆ ಇಲ್ಲಿನ ಡಿಡಿಎ ಸ್ಕ್ವಾಷ್ಮತ್ತು ಬ್ಯಾಡ್ಮಿಂಟನ್ ಕ್ರೀಡಾಂಗಣದಲ್ಲಿ ನಡೆಯಲಿದೆ.
ಹೈದರಾಬಾದ್ನ ಆಟಗಾರ್ತಿಗೆ ಟೂರ್ನಿಯ ಮೊದಲ ಸುತ್ತಿನಲ್ಲಿ ಇಂಡೊನೇಷ್ಯಾದ ಬೆಲಾಟ್ರಿಕ್ಸ್ ಮನುಪುತಿ ಎದುರಾಗಲಿದ್ದಾರೆ. ಈ ಬಗ್ಗೆ ಅಭಿಪ್ರಾಯ ವ್ಯಕ್ತಪಡಿಸಿದ ಸೈನಾ, `ಮೊದಲ ಸುತ್ತಿನಲ್ಲೇ ನಾನು ಇಂಡೋನೇಷ್ಯಾದ ಆಟಗಾರ್ತಿಯ ವಿರುದ್ಧ ಆಡಲಿದ್ದೇನೆ. ಅವರು ತುಂಬಾ ಚೆನ್ನಾಗಿ ಆಡುತ್ತಿದ್ದಾರೆ. ಹೀಗಾಗಿ ಇಂಡಿಯಾ ಓಪನ್ ಸೂಪರ್ ಸೀರೀಸ್ ಸಲುವಾಗಿ ನಾನು ಸಾಕಷ್ಟು ಸಿದ್ಧತೆ ನಡೆಸಿದ್ದೇನೆ' ಎಂದರು.
`ಎಲ್ಲಾ ಟೂರ್ನಿಗಳೂ ಕಠಿಣವಾಗಿರುತ್ತವೆ. ಅದರಲ್ಲೂ ಇಂಡಿಯಾ ಓಪನ್ ಟೂರ್ನಿಯಲ್ಲಿ ವಿಶ್ವದ ಅಗ್ರಮಾನ್ಯ ಆಟಗಾರರು ಭಾಗವಹಿಸುವ ಕಾರಣ ಸವಾಲು ಮತ್ತಷ್ಟು ಜಾಸ್ತಿಯಿದೆ' ಎಂದು ಸೈನಾ ಹೇಳಿದರು. ಇದೇವೇಳೆ ಮಾತನಾಡಿದ ರಾಷ್ಟ್ರೀಯ ತರಬೇತುದಾರ ಪುಲ್ಲೇಲ ಗೋಪಿಚಂದ್, ಭಾರತದ ಆಟಗಾರರು ಉತ್ತಮ ಪ್ರದರ್ಶನ ನೀಡುವ ವಿಶ್ವಾಸ ವ್ಯಕ್ತಪಡಿಸಿದರು.
`ಆಲ್-ಇಂಗ್ಲೆಂಡ್ ಮತ್ತು ಸ್ವಿಸ್ ಓಪನ್ ಟೂರ್ನಿಗಳ ಬಳಿಕ ಅಭ್ಯಾಸ ನಡೆಸಲು ಸಾಕಷ್ಟು ಸಮಯ ಸಿಕ್ಕಿದೆ. ಈ ವಾರದಲ್ಲಿ ಏಷ್ಯನ್ ಚಾಂಪಿಯನ್ಷಿಪ್ ಕೂಡ ನಿಗದಿಯಾಗಿದೆ. ಈ ಅನುಭವ ಆಟಗಾರರಿಗೆ ಇಂಡಿಯಾ ಓಪನ್ ಟೂರ್ನಿಯಲ್ಲಿ ಸಹಕಾರಿಯಾಗಲಿದೆ' ಎಂದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.