ADVERTISEMENT

ಚುಟುಕು- ಚುರುಕು

​ಪ್ರಜಾವಾಣಿ ವಾರ್ತೆ
Published 24 ಡಿಸೆಂಬರ್ 2013, 19:30 IST
Last Updated 24 ಡಿಸೆಂಬರ್ 2013, 19:30 IST

ಶೂಟಿಂಗ್‌: ಬಿಂದ್ರಾ ಬಂಗಾರದ ಸಾಧನೆ
ನವದೆಹಲಿ (ಪಿಟಿಐ):
ಭರವಸೆಯು ಶೂಟರ್‌ ಅಭಿನವ್‌ ಬಿಂದ್ರಾ ಇಲ್ಲಿ ಕೊನೆಗೊಂಡ 57ನೇ ರಾಷ್ಟ್ರೀಯ ಶೂಟಿಂಗ್‌ ಚಾಂಪಿಯನ್‌ಷಿಪ್‌ನಲ್ಲಿ ಬಂಗಾರದ ಸಾಧನೆ ತೋರಿದರು.

10ಮೀ. ಏರ್‌ ರೈಫಲ್‌ ವಿಭಾಗದಲ್ಲಿ ಈ ಸಾಧನೆ ಮಾಡಿದ ಒಲಿಂಪಿಯನ್‌ ಬಿಂದ್ರಾ ಒಟ್ಟು 208.9 ಪಾಯಿಂಟ್‌ಗಳನ್ನು ಕಲೆ ಹಾಕಿದರು. ಸೆಂಟ್ರಲ್‌ ಫೈರ್‌ ಸ್ಪರ್ಧೆಯಲ್ಲಿ ವಿಜಯ್‌ ಕುಮಾರ್‌ ಬೆಳ್ಳಿ ನಗೆ ಬೀರಿದರು.

ಬೀಜಿಂಗ್‌ ಒಲಿಂಪಿಕ್ಸ್‌ನಲ್ಲಿ ಚಿನ್ನ ಜಯಿಸಿದ್ದ ಬಿಂದ್ರಾ ಅವರು ಅಶೋಕ್‌ ಚವಾಂಕೆ ಅವರನ್ನು ಮಣಿಸಿದರು. 204.3 ಪಾಯಿಂಟ್‌ ಗಳಿಸಿದ ಅಶೋಕ್‌ ಬೆಳ್ಳಿ ಗೆದ್ದುಕೊಂಡರೆ, ಇನ್ನೊಬ್ಬ ಒಲಿಂಪಿಯನ್‌ ಸಂಜೀವ್‌ ರಜಪೂತ್‌ 182.8 ಪಾಯಿಂಟ್‌ ಕಲೆ ಹಾಕಿ ಕಂಚಿಗೆ ತೃಪ್ತಿಪಟ್ಟರು. ಆದರೆ, ಗಗನ್‌ ನಾರಂಗ್‌ ಫೈನಲ್ ಪ್ರವೇಶಿಸಲು ವಿಫಲರಾದರು.

ಫೆಬ್ರುವರಿ 9ಕ್ಕೆ  ಸೈಕ್ಲಿಂಗ್ ಮ್ಯಾರಥಾನ್
ಬೆಂಗಳೂರು:
ಭಾರತೀಯ ಸೈಕ್ಲಿಂಗ್ ಸಂಸ್ಥೆ (ಸಿಎಫ್‌ಐ), ಬೆಂಗಳೂರು ನಗರ ಸಂಚಾರ ಪೊಲೀಸರ ಸಹಯೋಗ ದೊಂದಿಗೆ  ಇದೇ ಮೊದಲ ಬಾರಿಗೆ ಇಲ್ಲಿ ಸೈಕ್ಲಿಂಗ್ ಮ್ಯಾರಥಾನ್ ನಡೆಸಲು ಉದ್ದೇಶಿಸಿದೆ.

ಫೆಬ್ರುವರಿ 9 ರಂದು ಜರುಗುವ ಸ್ಪರ್ಧೆಯಲ್ಲಿ ದೇಶದ ನಾನಾ ಭಾಗಗಳಿಂದ 150 ಅಗ್ರ ಸೈಕ್ಲಿಸ್ಟ್‌ಗಳು ಸೇರಿದಂತೆ 10 ಸಾವಿರಕ್ಕೂ ಅಧಿಕ ಮಂದಿ ಸ್ಪರ್ಧಿಗಳು ಪಾಲ್ಗೊಳ್ಳುವ ನಿರೀಕ್ಷೆ ಇದೆ.

ಸ್ಪರ್ಧೆಯು 60 ಕಿ.ಮೀ (ಚಾಂಪಿಯನ್ ರೈಡ್), 40 ಕಿ.ಮೀ (ಪ್ಯಾಶನ್ ರೈಡ್), 20 ಕಿ.ಮೀ (ಗ್ರೀನ್ ರೈಡ್) ಮತ್ತು 10 ಕಿ.ಮೀ (ಫನ್ ರೈಡ್) ವಿಭಾಗಗಳಲ್ಲಿ ನಡೆಯಲಿದ್ದು, ಒಟ್ಟಾರೆ ₨10 ಲಕ್ಷ ಬಹುಮಾನ ಮೊತ್ತವನ್ನು ಒಳಗೊಂಡಿದೆ.

ಶಾರ್ಟ್‌ಕೋರ್ಸ್ ಈಜು ಸ್ಪರ್ಧೆ
ಬೆಂಗಳೂರು:
ಕರ್ನಾಟಕ ಈಜು ಸಂಸ್ಥೆ ಯು ಡಿಸೆಂಬರ್ 27 ರಿಂದ 29 ರವರೆಗೆ 14 ನೇ ರಾಜ್ಯ ಶಾರ್ಟ್‌ಕೋರ್ಸ್ ಈಜು ಚಾಂಪಿಯನ್‌ಷಿಪ್‌ ನಡೆಸಲು ಉದ್ದೇಶಿಸಿದೆ. ಟೂರ್ನಿಯು ಮಂಡ್ಯದ ಪಿಇಟಿ ಅಕ್ವಾಟಿಕ್ ಕೇಂದ್ರದಲ್ಲಿ ನಡೆಯಲಿದೆ. ಫೆಬ್ರುವರಿಯಲ್ಲಿ ಹೈದರಾಬಾದ್‌ನಲ್ಲಿ ನಡೆಯಲಿರುವ 27 ನೇ ದಕ್ಷಿಣ ವಲಯ ಅಕ್ವಾಟಿಕ್ ಚಾಂಪಿಯನ್‌ಷಿಪ್‌ಗೆ ಆಟಗಾರರನ್ನು ಆಯ್ಕೆ ಮಾಡುವುದಕ್ಕೂ  ಇದು ವೇದಿಕೆಯಾಗಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.